ಪಾಕಿಸ್ತಾನಕ್ಕೆ ಜೈ ಅನ್ನೋ ದೇಶದ್ರೋಹಿಗಳನ್ನು ಸುಮ್ನೆ ಬಿಡಲ್ಲ: ಶ್ರೀರಾಮುಲು

Public TV
1 Min Read

– ಕಿಡಿಗೇಡಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ

ಚಿತ್ರದುರ್ಗ: ಭಾರತದಲ್ಲಿದ್ದು ಪಾಕಿಸ್ತಾನಕ್ಕೆ ಜೈ ಅಂದರೆ ಸುಮ್ಮನಿರಲಾಗದು. ಅಂತಹ ದೇಶದ್ರೋಹಿಗಳನ್ನು ಬಂಧಿಸಿ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಚಿತ್ರದುರ್ಗದ ಬಿಜೆಪಿ ಕಚೇರಿಯಲ್ಲಿ ಶ್ರೀರಾಮುಲು ಅವರ ಪುತ್ರಿಯ ವಿವಾಹಕ್ಕೆ ಕಾರ್ಯಕರ್ತರನ್ನು ಆಹ್ವಾನಿಸುವ ಮುನ್ನ ಮಾತನಾಡಿದ ಅವರು, ಸಿಎಎ ಪರ ನಿಂತಿರುವ ಕೆಲವರು ಹುಬ್ಬಳಿಯಲ್ಲಿ ಪಾಕಿಸ್ತಾನಕ್ಕೆ ಜೈ ಅಂದಿದ್ದಾರೆ. ಹೀಗಾಗಿ ಭಾರತದಲ್ಲಿದ್ದು ಪಾಕಿಸ್ತಾನಕ್ಕೆ ಜೈ ಅನ್ನುವ ದೇಶದ್ರೋಹದ ಕೆಲಸ ಮಾಡಿದರೆ ಯಾವುದೇ ಕಾರಣಕ್ಕೂ ಅವರನ್ನು ಬಿಡಲ್ಲ, ತಕ್ಷಣ ಬಂಧಿಸುತ್ತೇವೆ ಎಂದರು.

ಸಿಎಎ ಪರವಾಗಿ ಮಾತನಾಡುತ್ತಿದ್ದ ಸಚಿವ ರಾಮುಲು ಮಾತನಾಡುವ ಭರಾಟೆಯಲ್ಲಿ, ಭಾರತೀಯ ಜನತಾ ಪಾರ್ಟಿಯಲ್ಲಿ ಕೆಲ ಕಿಡಿಗೇಡಿಗಳ ಪಾಕಿಸ್ತಾನಕ್ಕೆ ಜೈ ಅಂದರೆ ಸುಮ್ಮನಿರಲ್ಲ. ಭಾರತದಲ್ಲಿದ್ದೂ, ಪಾಕಿಸ್ತಾನಕ್ಕೆ ಜೈ ಎನ್ನುವ ಕಿಡಿಗೇಡಿಗಳನ್ನು ಬಂಧಿಸುತ್ತೇವೆ ಎಂದು ಬಾಯ್ತಪ್ಪಿ ಹೇಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು.

ಬಿಜೆಪಿ ಸರ್ಕಾರ ಪೋಲಿಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಟಾಂಗ್ ಕೊಟ್ಟ ರಾಮುಲು, ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರ ಮೇಲಿನ ಕೇಸ್ ಹಿಂಪಡೆಯಲಿಲ್ಲ. ಬದಲಾಗಿ ಪಿಎಫ್‍ಐ ಮತ್ತು ಇತರೆ ಸಂಘಟನೆಗಳ ಕೇಸ್ ವಜಾ ಮಾಡಿದರು. ರಾಜ್ಯದಲ್ಲಿ ಮೊದಲಿಂದಲೂ ಈ ಪೊಲಿಟಿಕಲ್ ಡ್ರಾಮಾ ನಡೆಯುತ್ತಲಿದೆ. ಆದರೆ ನಾವು ಹಿಂದೂಪರ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ಪಡೆಯುತ್ತೇವೆ ಎಂದು ಹೇಳಿದರು.

ಇದೇ ವೇಳೇ ಸಿಎಂ ಯಡಿಯೂರಪ್ಪ ದ್ವೇಷದ ರಾಜಕೀಯ ಮಾಡುತ್ತಿದ್ದಾರೆಂದು ಹೇಳಿರುವ ಮಾಜಿ ಪ್ರಧಾನಿ ದೇವೇಗೌಡರ ಮಾತಿಗೂ ಪ್ರತಿಕ್ರಿಯಿಸಿದ ಅವರು, ಸಿಎಂ ದ್ವೇಷದ ರಾಜಕಾರಣ ಮಾಡಿದ್ದರೆ ಅವರೆಲ್ಲ ಮನೆಯಲ್ಲಿ ಇರುತ್ತಿರಲಿಲ್ಲ. ಕಾಂಗ್ರೆಸ್- ಜೆಡಿಎಸ್ ನವರು ಎಲ್ಲೋ ಒಂದು ಕಡೆ ಇರಬೇಕಾಗ್ತಿತ್ತು. ಅಲ್ಲದೇ ಈ ರೀತಿ ನಮ್ಮ ಮೇಲೆ ಆರೋಪ ಮಾಡುವ ಸಿದ್ದರಾಮಯ್ಯ ಅವರು ಸಿಎಂ ಮನೆ ಬಳಿ ಧರಣಿ ಮಾಡಲು ಏಕೆ ಹೋಗಬೇಕಿತ್ತು? ಅಂತ ಪ್ರಶ್ನಿಸಿದರು. ಜೊತೆಗೆ ನಿರುದ್ಯೋಗಿಗಳಾಗಿರುವ ಕಾಂಗ್ರೆಸ್, ಜೆಡಿಎಸ್ ನವರಿಂದ ಪಾಠಬೇಕಿಲ್ಲ ಅಂತ ಟಾಂಗ್ ಕೊಟ್ಟರು.

Share This Article
Leave a Comment

Leave a Reply

Your email address will not be published. Required fields are marked *