ಶಿಥಿಲಾವಸ್ಥೆಗೆ ತಲುಪಿದ ಸ್ವತಂತ್ರ ಪೂರ್ವದ ಸರ್ಕಾರಿ ಶಾಲೆ – ಜೀವಭಯದಲ್ಲಿ ವಿದ್ಯಾರ್ಥಿಗಳು

Public TV
1 Min Read

ಚಿತ್ರದುರ್ಗ: ಭಾರತ ಹಳ್ಳಿಗಳ ದೇಶ ಹೀಗಾಗಿ ಹಳ್ಳಿಗಳ ಅಭಿವೃದ್ಧಿಯಿಂದಲೇ ರಾಷ್ಟ್ರದ ಅಭಿವೃದ್ಧಿ ಸಾಧ್ಯವೆಂದು ಮನಗೊಂಡ ಸರ್ಕಾರಗಳು ಗ್ರಾಮಾಂತರ ಪ್ರದೇಶಗಳಲ್ಲಿ ಗುಣಮಟ್ಟದ ಶಿಕ್ಷಣ ಸೌಲಭ್ಯಕ್ಕಾಗಿ ನಾನಾ ಯೋಜನೆಗಳನ್ನು ರೂಪಿಸುತ್ತಿವೆ. ಶಾಲಾ ಅಭಿವೃದ್ಧಿಯ ಚರ್ಚೆಗಳಿಗಾಗಿಯೇ ಕೋಟ್ಯಂತರ ರೂಪಾಯಿ ಹಣವನ್ನು ಸಹ ಖರ್ಚು ಮಾಡಲಾಗ್ತಿದೆ. ಆದರೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಕಂದವಾಡಿ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆಯ ದುಸ್ಥಿತಿ ನೋಡಿದರೆ ಸರ್ಕಾರದ ಹಣ ಎಲ್ಲಿ ಖರ್ಚಾಗ್ತಿದೆ ಎಂಬ ಅನುಮಾನ ಎಲ್ಲರಲ್ಲೂ ಮೂಡುತ್ತಿದೆ.

ಈ ಶಾಲೆಯು 1947ರಲ್ಲಿ ಭಾರತಕ್ಕೆ ಸ್ವತಂತ್ರ ಬರುವ ಮುನ್ನ ನಿರ್ಮಾಣವಾದ ಶಾಲೆಯಾಗಿದೆ. ಅಂದಿನಿಂದ ಇಂದಿನವರೆಗೂ ಈ ಶಾಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿಲ್ಲ. ಹೀಗಾಗಿ ಈ ಶಾಲೆಯ ಗೋಡೆಗಳು ಶಿಥಿಲಾವಸ್ಥೆಗೆ ತಲುಪಿ ಬಿರುಕುಬಿಟ್ಟಿವೆ. ಹೀಗಾಗಿ ಒಮ್ಮೆ ಜೋರಾಗಿ ಮಳೆ ಬಂದರೆ ಸಾಕು ಆಗಲೋ ಈಗಲೋ ಬೀಳುವ ಸ್ಥಿತಿಗೆ ತಲುಪಿದೆ.

ಹಳೆಯ ಶಾಲಾ ಕೊಠಡಿಗಳಲ್ಲಿಯೇ ಇಂದಿಗೂ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ಆದ್ದರಿಂದ ಮಳೆಗಾಲದಲ್ಲಂತೂ ಶಾಲೆಯ ಗೋಡೆಗಳು ಯಾವಾಗ ಕುಸಿಯುತ್ತವೆ ಎಂಬ ಆತಂಕದಿಂದ ಮಕ್ಕಳು ಅವರ ಜೀವ ಕೈಯಲ್ಲಿ ಹಿಡಿದುಕೊಂಡು ಪಾಠ ಕೇಳುವ ಸ್ಥಿತಿಯಿದೆ. ಅಲ್ಲದೆ ಬೇಸಿಗೆಯಲ್ಲಿ ಕಾದ ಕಬ್ಬಿಣದಂತಾದ ಕೆಂಪು ಹೆಂಚಿನ ಮೇಲ್ಛಾವಣಿಯಿಂದ ತೂರಿ ಬರೋ ಬಿಸಿಲ ಜಳ ಮಕ್ಕಳ ಮೈ ಸುಡುತ್ತಿದೆ. ಹೀಗಾಗಿ ಇಲ್ಲಿನ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಈಗಾಗಲೇ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದೆ ಹಿಡಿಶಾಪ ಹಾಕುತಿದ್ದಾರೆ.

ಶಾಲೆಯಲ್ಲಿ 1 ರಿಂದ 7ನೇ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದೆ. ಈ ಶಾಲೆ 130ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಆದರೆ ಶಾಲೆಗೆ ಉತ್ತಮ ವ್ಯವಸ್ಥೆ ಮಾತ್ರ ಈವರೆಗೆ ಕಲ್ಪಿಸಲಾಗಿಲ್ಲ. ಈ ಬಗ್ಗೆ ಮುಖ್ಯ ಶಿಕ್ಷಕರನ್ನು ಕೇಳಿದರೆ ಈಗಾಗಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದೇವೆ ಎನ್ನುತ್ತಿದ್ದಾರೆ. ಹೀಗಾಗಿ ಅತ್ಯುತ್ತಮ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ಈ ಸಮಾಜಕ್ಕೆ ನೀಡಿದ ಶಾಲೆಯಲ್ಲಿ ಕಳೆದ ಒಂದು ವರ್ಷದಿಂದ ವಿದ್ಯಾರ್ಥಿಗಳು ಜೀವಭಯದಿಂದ ಪಾಠ ಕೇಳುವಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *