ಪತ್ನಿಯನ್ನು ಕೊಲೆಗೈದ 13 ದಿನದಲ್ಲೇ ಪತಿಗೆ ಜೀವಾವಧಿ ಶಿಕ್ಷೆ: ಚಿತ್ರದುರ್ಗ ಕೋರ್ಟ್‍ನಿಂದ ಇತಿಹಾಸ ಸೃಷ್ಟಿ

Public TV
2 Min Read

ಚಿತ್ರದುರ್ಗ: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಪಾಪಿ ಪತಿರಾಯನಿಗೆ ತನ್ನ ಮಕ್ಕಳೇ ಶಿಕ್ಷೆ ಕೊಡಿಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಕೊಲೆ ಪ್ರಕರಣ ನಡೆದು ಕೇವಲ 13 ದಿನಗಳಲ್ಲೇ ಜಿಲ್ಲಾ ಸತ್ರ ನ್ಯಾಯಾಲಯ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗು ದಂಡ ವಿಧಿಸೋ ಮೂಲಕ ಒಂದು ಐತಿಹಾಸಿಕ ದಾಖಲೆ ಬರೆದಿದೆ.

ಘಟನೆ ವಿವರ:
ಚಿತ್ರದುರ್ಗ ತಾಲೂಕಿನ ಬಗ್ಗಲರಂಗವನಹಳ್ಳಿಯಲ್ಲಿ ಜುಲೈ 27ರಂದು ಮಕ್ಕಳಿಗೆ ಎದೆಹಾಲು ಉಣಿಸಿ ಮಲಗಿದ್ದ ಸಾಕಮ್ಮನ (26) ಮೇಲೆ ಪತಿ ಶ್ರೀಧರ್ ಕಲ್ಲು ಎತ್ತಿಹಾಕಿ ಕೊಲೆ ಮಾಡಿ, ರಾತ್ರೋರಾತ್ರಿ ತನ್ನ ಎಳೆಯ ಎರಡು ಕೂಸುಗಳನ್ನ ಬಿಟ್ಟು ಪರಾರಿಯಾಗಿದ್ದ. ಈ ಬಗ್ಗೆ ಮಾಹಿತಿ ತಿಳಿದ ತುರುವನೂರು ಪಿಎಸ್‍ಐ ಶ್ರೀನಿವಾಸ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಅದೇ ದಿನ ಮಧ್ಯಾಹ್ನ ಊರ ಹೊರಗಿನ ಜಮೀನೊಂದರಲ್ಲಿ ವಿಷಕುಡಿದು ಅಪರಾಧಿ ಶೀಧರ್ ಆತ್ಮಹತ್ಯೆಯ ಡ್ರಾಮ ಆಡಿದ್ದನು. ಬಳಿಕ ಸಂಜೆ ವೇಳೆಗೆ ಪೋಲಿಸರ ಅತಿಥಿಯಾಗಿದ್ದನು.

ಈ ಸಂಬಂಧ ತುರುವನೂರು ಪೊಲೀಸರು ಕೇವಲ ಮೂರೇ ದಿನದಲ್ಲಿ ಪ್ರಕರಣ ಕುರಿತು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಕೂಡಲೇ ಪ್ರಕರಣವನ್ನ ಕೈಗೆತ್ತಿಗೊಂಡ ಜಿಲ್ಲಾ ನ್ಯಾಯಾಧೀಶರಾದ ಎಸ್.ಬಿ. ವಸ್ತ್ರದಮಠರವರು ಕೇವಲ 13 ದಿನಗಳಲ್ಲಿ ಈ ಪ್ರಕರಣದ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 30,000 ದಂಡ ವಿಧಿಸಿ ಐತಿಹಾಸಿಕ ತೀರ್ಪು ಪ್ರಕಟಿಸಿದ್ದಾರೆ.

ಈ ಪ್ರಕರಣ ಕುರಿತಂತೆ ತನಿಖೆ ಆರಂಭಿಸಿದ ಪೊಲೀಸರು ಕೇವಲ ಮೂರು ದಿನದಲ್ಲಿ ಸುಮಾರು ಸಾಕ್ಷಿ ಸಮೇತ ಕೋರ್ಟ್ ಗೆ ಹಾಜರು ಪಡಿಸಿದ್ದರು. ಈ ವೇಳೆಯಲ್ಲಿ ಸ್ವತಃ ಶ್ರೀಧರನ ಮಗ ಈತನೇ ತನ್ನ ತಾಯಿಯನ್ನು ಕೊಲೆ ಮಾಡಿದ್ದು ಅಂತ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದನು. ಈ ಹೇಳಿಕೆಯನ್ನ ಆಧರಿಸಿದ ನ್ಯಾಯಾಧೀಶರು ಅಪರಾಧಿಗೆ ಜೀವಾವಧಿ ಶಿಕ್ಷೆ 30 ಸಾವಿರ ದಂಡವನ್ನ ವಿಧಿಸಿದ್ದರು.

ಚಿತ್ರದುರ್ಗ ಜಿಲ್ಲಾ ಸತ್ರ ನ್ಯಾಯಾಲಯ ಅತಿ ಕಡಿಮೆ ಅವಧಿಯಲ್ಲಿ ಒಂದು ಐತಿಹಾಸಿಕ ತೀರ್ಪು ನೀಡಿದೆ. ಕೇವಲ ಹದಿಮೂರು ದಿನದಲ್ಲಿ ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು 30 ಸಾವಿರ ದಂಡ ವಿಧಿಸಿದೆ. ಅಪರಾಧಿ ಶ್ರೀಧರನ ಬಡತನ ಕಂಡು ಎರಡು ಮಕ್ಕಳಿಗೆ ಸಮಾಜಕಲ್ಯಾಣ ಇಲಾಖೆಯಿಂದ ಬರುವ ಸಹಾಯಧನವನ್ನ ಅವರ ಭವಿಷ್ಯಕ್ಕಾಗಿ ಕೊಡಿಸುವುದಾಗಿ ಅಪರಾಧಿಗೆ ಭರವಸೆ ನೀಡಿದ್ದಾರೆ. ಈ ಐತಿಹಾಸಿಕ ತೀರ್ಪಿನಿಂದಾಗಿ ಸುಲಭವಾಗಿ ಕಾನೂನಿನಿಂದ ತಪ್ಪಿಸಿಕೊಳ್ಳಬಹುದೆಂಬ ಭ್ರಮೆಯಲ್ಲಿರುವ ಸುಲಿಗೆದಾರರನ್ನು ಬೆಚ್ಚಿ ಬೀಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *