‘ರಾಜಕುಮಾರ’ ಸಿನಿಮಾ ನೋಡಿದ್ದು ಹೀಗೆ ಅಂದ್ರು ಚಿರಂಜೀವಿ ಸರ್ಜಾ

Public TV
2 Min Read

-ಸಂಹಾರಕ್ಕೆ ಸಿಕ್ತು ಒಳ್ಳೆಯ ರೆಸ್ಪಾನ್ಸ್

ಬೆಂಗಳೂರು: ವರನಟ ಡಾ. ರಾಜ್‍ಕುಮಾರ್ ಅವರ ಅಭಿನಯ ಬಲು ಇಷ್ಟ, ಅಣ್ಣಾವ್ರು ನಟಿಸಿರುವ ಭಕ್ತ ಪ್ರಹ್ಲಾದ ಅವರ ನೆಚ್ಚಿನ ಚಿತ್ರ. ಪುನೀತ್ ರಾಜ್‍ಕುಮಾರ್ ಅಭಿನಯದ ‘ರಾಜಕುಮಾರ’ ಸಿನಿಮಾ ವೀಕ್ಷಿಸಲು ನರ್ತಕಿ ಟಾಕೀಸ್‍ಗೆ ಮಾರುವೇಶ ಧರಿಸಿ ಸಿನಿಮಾ ವೀಕ್ಷಿಸಿದೆ ಎಂದು ಚಿರಂಜೀವಿ ಸರ್ಜಾ ತಮ್ಮ ಅನುಭವವನ್ನು ಪಬ್ಲಿಕ್ ಟಿವಿ ಜೊತೆಗೆ ಹಂಚಿಕೊಂಡರು.

ಚಿರಂಜೀವಿ ಸರ್ಜಾ ಮತ್ತು ಹರಿಪ್ರಿಯಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಸಂಹಾರ’ ಚಿತ್ರ ಇಂದು ಬಿಡುಗಡೆ ಆಗಿದೆ. ವಿಭಿನ್ನ ಕಥಾ ಹಂದರವುಳ್ಳ ಸಂಹಾರ ನೋಡುಗರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಪಕ್ಕಾ ಆ್ಯಕ್ಷನ್ ಸಿನಿಮಾ ಆಗಿರುವ ಸಂಹಾರದಲ್ಲಿ ಚಿರು ಅಂಧನ ಪಾತ್ರದಲ್ಲಿ ನಟಿಸಿದ್ದಾರೆ. ಅಂಧನಾಗಿರುವ ನಾಯಕ ನಟ, ಹೇಗೆ ವೈರಿಗಳನ್ನು ಸಂಹಾರ ಮಾಡ್ತಾನೆ, ಯಾವೆಲ್ಲ ತಂತ್ರಗಾರಿಕೆಗಳನ್ನು ಬಳಸುತ್ತಾನೆ ಎಂಬುದು ಚಿತ್ರ ಒಳಗೊಂಡಿದೆ.

ತಮ್ಮ ನಟನೆಯ `ಸಂಹಾರ’ ಚಿತ್ರದ ಕುರಿತ ಪಬ್ಲಿಕ್ ಟಿವಿ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿತ್ರದ ಚಿತ್ರೀಕರಣದ ಸಮಯದ ಅನುಭವವನ್ನು ಹಂಚಿಕೊಂಡರು. ಈ ವೇಳೆ ಚಿತ್ರರಂಗದಲ್ಲಿ ತಾವು ಬೆಳೆದು ಬಂದ ಬಗೆಯ ಬಗ್ಗೆ ವಿಶೇಷ ಘಟನೆಗಳನ್ನು ನೆನೆಸಿಕೊಂಡರು. ನಟನೆಯನ್ನು ನನ್ನ ಅಜ್ಜ ಮತ್ತು ಚಿಕ್ಕಪ್ಪ ಅರ್ಜುನ್ ಸರ್ಜಾ ಅವರಿಂದ ಕಲಿತ್ತಿದೇನೆ. ಸಿನಿಮಾ ರಂಗದಲ್ಲಿ ನಾನು ಏನೇ ಹೆಸರು ಮಾಡಿದರು ಅದಕ್ಕೆಲ್ಲಾ ನನ್ನ ಚಿಕ್ಕಪ್ಪ ಅರ್ಜುನ್ ಸರ್ಜಾ ಕಾರಣ ಎಂದು ಹೇಳಿದರು.

ಆರಂಭದ ದಿನಗಳಲ್ಲಿ ಡಾ. ರಾಜ್ ಕುಮಾರ್ ಅವರ ಚಿತ್ರಗಳನ್ನು ನೋಡಲು ತೆರಳುತ್ತಿದ್ದ ಘಟನೆಯನ್ನು ನೆನೆದರು. ಅಲ್ಲದೇ ಪಿಯುಸಿ ಓದುತ್ತಿದಾಗ ಉಪೇಂದ್ರ ಅವರ ಅಭಿಮಾನಿಯಾಗಿದ್ದೆ, ಅವರ ಅಭಿನಯದ ಉಪೇಂದ್ರ ಸಿನಿಮಾ ವೀಕ್ಷಣೆಗೆ ಕಾಲೇಜ್ ಬಂಕ್ ಮಾಡಿ ಹೋಗಿದ್ದೆ ಎಂದು ನಕ್ಕರು.

ಚಿರು ಅವರ ‘ಸಂಹಾರ’ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಚಿಕ್ಕಣ್ಣ, ಕಾವ್ಯ ಶೆಟ್ಟಿ ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರತಂಡ ಹೊಂದಿದೆ. ಸಂಹಾರ ಪಕ್ಕಾ ಆಕ್ಷನ್ ಸಿನಿಮಾ ಆಗಿದ್ದು, ರವಿವರ್ಮ ಸಾಹಸ ಸಂಯೋಜನೆ ಇದೆ.

ಚಿತ್ರರಂಗದಲ್ಲಿ ಆಗಿರುವ ಬದಲಾವಣೆಯ ಬಗ್ಗೆ ಮಾತನಾಡಿದ ಚಿರು, ಆ ಕಾಲದಲ್ಲಿ ಪ್ರತಿ ಕಲಾವಿದರು ತಮ್ಮ ತಮ್ಮ ಪಾತ್ರದ ಬಗ್ಗೆ ಚರ್ಚಿಸುತ್ತಿದ್ದರು, ಒಟ್ಟಿಗೆ ಊಟ ಮಾಡುತ್ತಿದ್ದರು. ಆದರೇ ಈಗಿನ ಕಲಾವಿದರೂ ಬೇರೆ ಕಲಾವಿದರ ಜೊತೆ ಬೆರೆಯುವುದು ಕಮ್ಮಿಯಾಗಿದೆ ಎಂದು ಹೇಳಿದರು.

ಚಿತ್ರರಂಗದಲ್ಲಿ ರಾಜ್‍ಕುಮಾರ್ ಅವರ ತರಹ ಸಿನಿಮಾ ಮಾಡಲು ಬಯಸುವ ಚಿರು, ಚಿತ್ರದ ಡ್ರೀಮ್ ರೋಲ್ ಅಥವಾ ಡ್ರೀಮ್ ಪ್ರೊಜೆಕ್ಟ್ ಎಲ್ಲವು ಚಿತ್ರ ಕಥೆ ಮತ್ತು ನಿರ್ದೇಶಕರ ಮೇಲೆ ನಿರ್ಧಾರವಾಗುತ್ತದೆ ಎಂದು ಹೇಳಿದರು. ತಮ್ಮ ಬಾಲ್ಯದ ಗೆಳೆಯರ ಜೊತೆ ಕಳೆದ ಸಮಯವನ್ನು ನೆನೆದ ಚಿರು, ಇಂದಿಗೂ ಅವರು ಯಾವುದೇ ಸೆಲೆಬ್ರೆಟಿ ಎನ್ನುವ ಹಮ್ಮಿಲ್ಲದೆ ಸಲುಗೆಯಿಂದ ಎಲ್ಲಾ ಸ್ನೇಹಿತರ ಜೊತೆ ಬೆರೆಯುತ್ತೇನೆಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *