ಚಿನ್ನಸ್ವಾಮಿ ಕಾಲ್ತುಳಿತ ಕೇಸ್‌ – ನಾಲ್ವರು ಪೊಲೀಸ್‌ ಅಧಿಕಾರಿಗಳ ಅಮಾನತು ಆದೇಶ ರದ್ದು

Public TV
1 Min Read

ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ ದುರಂತ (Chinnaswamy Stadium Stampede) ಸಂಬಂಧ ಪೊಲೀಸ್ (Police) ಅಧಿಕಾರಿಗಳ ಅಮಾನತು (Suspension) ಆದೇಶವನ್ನು ಸರ್ಕಾರ 52 ದಿನಗಳ ನಂತರ ಹಿಂದಕ್ಕೆ ಪಡೆದಿದೆ.

ಬೆಂಗಳೂರು ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಆಗಿದ್ದ ವಿಕಾಸ್‌ ಕುಮಾರ್ ಒಬ್ಬರನ್ನು ಬಿಟ್ಟು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್, ಡಿಸಿಪಿ ಶೇಖರ್, ಎಸಿಪಿ ಎಚ್.ಟಿ.ಬಾಲಕೃಷ್ಣ ಹಾಗೂ ಕಬ್ಬನ್‌ ಪಾರ್ಕ್ ಠಾಣೆಯ ಇನ್‌ಸ್ಪೆಕ್ಟರ್‌ ಗಿರೀಶ್ ಅವರ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದುಕೊಂಡಿದೆ.  ಇದನ್ನೂ ಓದಿ: 72 ಕೋಟಿ ಮೌಲ್ಯದ ಆಸ್ತಿಯನ್ನು ಸಂಜಯ್ ದತ್ ಹೆಸರಿಗೆ ಬರೆದಿಟ್ಟ ಅಭಿಮಾನಿ

 

ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ. ಮೈಕಲ್ ಡಿ ಕುನ್ಹಾ, ಜಿಲ್ಲಾಧಿಕಾರಿಗಳ ಮ್ಯಾಜಿಸ್ಟ್ರೇಟ್‌ ತನಿಖೆ ಪೂರ್ಣಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ಸರ್ಕಾರ ತನ್ನ ಅಮಾನತು ನಿರ್ಧಾರವನ್ನು ಹಿಂದಕ್ಕೆ ಪಡೆದಿದೆ. ನಿಯಾಮವಳಿ ಪ್ರಕಾರ ಅಮಾನತು ಆದೇಶ ರದ್ದುಗೊಳಿಸಿ ನಾಲ್ವರ ವಿರುದ್ಧ ಇಲಾಖಾ ತನಿಖೆಗೆ ಆದೇಶ ಹೊರಡಿಸಿದೆ. ಇದನ್ನೂ ಓದಿ: ನಾವೆಷ್ಟು ಪಾಕಿಸ್ತಾನಿ ವಿಮಾನಗಳನ್ನ ಹೊಡೆದಿದ್ದೇವೆ ಅಂತ ಯಾರೊಬ್ಬರೂ ಕೇಳಲಿಲ್ಲ – ಸಂಸತ್‌ನಲ್ಲಿ ರಾಜನಾಥ್‌ ಸಿಂಗ್‌ ಬೇಸರ

ಕರ್ತವ್ಯಲೋಪದ ಅಡಿಯಲ್ಲಿ ಐಪಿಎಸ್‌ ಅಧಿಕಾರಿ ವಿಕಾಸ್‌ ಕುಮಾರ್‌ ವಿಕಾಸ್‌ ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ರದ್ದುಗೊಳಿಸಿತ್ತು. ಅರ್ಜಿದಾರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪುನಃ ನೇಮಕ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಆದೇಶಿಸಿತ್ತು. ಈ ಆದೇಶವನ್ನು ಸರ್ಕಾರ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಪ್ರಕರಣ ಹೈಕೋರ್ಟ್‌ನಲ್ಲಿ ಇರುವ ಕಾರಣ ಇವರ ಅಮಾನತು ಆದೇಶವನ್ನು ಸರ್ಕಾರ ಹಿಂದಕ್ಕೆ ಪಡೆದಿಲ್ಲ.

ಈ ಹಿಂದೆ ಸಿಎಟಿ ಆದೇಶ ಪ್ರಶ್ನಿಸಿ  ಅರ್ಜಿ ವಿಚಾರಣೆ ನಡೆಯುವ ಸಂದರ್ಭದಲ್ಲಿ ಸರ್ಕಾರಿ ಪರ ವಕೀಲರಿಗೆ ಹೈಕೋರ್ಟ್‌ , ಆ.1 ರ ಒಳಗೆ ಅಧಿಕಾರಿಗಳ ವಿರುದ್ಧ ಅಮಾನತು ಆದೇಶಕ್ಕೆ ಸಂಬಂಧಪಟ್ಟಂತೆ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿತ್ತು. ಇಲ್ಲದಿದ್ದರೆ ಪ್ರತ್ಯೇಕ ಆದೇಶ ಮಾಡುವುದಾಗಿ ಕೋರ್ಟ್‌ ಎಚ್ಚರಿಕೆ ನೀಡಿತ್ತು.

Share This Article