ಚೀನಾದ ಕುತಂತ್ರ ಬುದ್ಧಿಗೆ ಫುಲ್‍ಸ್ಟಾಪ್ ಇಟ್ಟ ಭಾರತ

Public TV
2 Min Read

– ಎಫ್‍ಡಿಐ ನೀತಿ ಪರಿಷ್ಕರಿಸಿದ ಕೇಂದ್ರ ಸರ್ಕಾರ
– ಭಾರತದಲ್ಲಿ ಚೀನಾ ಹೂಡಿಕೆಯ ಬೆನ್ನಲ್ಲೇ ಪರಿಷ್ಕರಣೆ
– ಕೇಂದ್ರದ ನಿರ್ಧಾರಕ್ಕೆ ರಾಹುಲ್ ಗಾಂಧಿ ಧನ್ಯವಾದ

ನವದೆಹಲಿ: ಪೀಪಲ್ಸ್ ಬ್ಯಾಂಕ್ ಆಫ್ ಚೀನಾ (ಪಿಬಿಒಸಿ) ಭಾರತದ ಎಚ್‍ಡಿಎಫ್‍ಸಿಯಲ್ಲಿ ತನ್ನ ಪಾಲನ್ನು ಹೆಚ್ಚಿಸಿದ್ದರಿಂದ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಆತಂಕ ಶುರುವಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತವು ವಿದೇಶಿ ನೇರ ಹೂಡಿಕೆ (ಎಫ್‍ಡಿಐ) ನೀತಿಯನ್ನು ಪರಿಷ್ಕರಿಸಿದೆ. ಈ ಪರಿಷ್ಕೃತ ಎಫ್‍ಡಿಐ ನೀತಿಯ ಪ್ರಕಾರ ಚೀನಾದ ಹೂಡಿಕೆಗೆ ಈಗ ಕೇಂದ್ರ ಸರ್ಕಾರದಿಂದ ಅನುಮತಿ ಅಗತ್ಯವಾಗಿದೆ.

ಹೆಮ್ಮಾರಿ ಕೊರೊನಾ ವೈರಸ್ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಜೊತೆಗೆ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಇದೇ ಅವಕಾಶವನ್ನು ಪಡೆದುಕೊಂಡು ಚೀನಾ ಭಾರತೀಯ ಕಂಪನಿಗಳಲ್ಲಿ ಹೆಚ್ಚಿನ ಷೇರು ಖರೀದಿಸಲು ಮುಂದಾಗುತ್ತಿದೆ. ಚೀನಾದ ಇಂತಹ ಕುಂತಂತ್ರ ಬುದ್ಧಿಯ ನಡೆಗೆ ಫುಲ್‍ಸ್ಟಾಪ್ ಹಾಕಲು ಕೇಂದ್ರ ಸರ್ಕಾರ ಪ್ರಮುಖ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ: ಎಚ್‍ಡಿಎಫ್‍ಸಿ ಷೇರು ಖರೀದಿಸಿದ ಚೀನಾದ ಬ್ಯಾಂಕ್

”ನಿಷೇಧಿತ ಕ್ಷೇತ್ರಗಳು, ಚಟುವಟಿಕೆಗಳನ್ನು ಹೊರತುಪಡಿಸಿ ಎಫ್‍ಡಿಐ ನೀತಿಗೆ ಒಳಪಟ್ಟು ಅನಿವಾಸಿ ಕಂಪನಿ ಭಾರತದಲ್ಲಿ ಹೂಡಿಕೆ ಮಾಡಬಹುದು. ಆದರೆ ಭಾರತದ ಭೂ ಗಡಿಯನ್ನು ಹಂಚಿಕೊಳ್ಳುವ ದೇಶದ ಒಂದು ಕಂಪನಿ ಅಥವಾ ಯಾವುದೇ ದೇಶದ ಪ್ರಜೆ ಸರ್ಕಾರದ ಒಪ್ಪಿಗೆ ಪಡೆದೆ ಹೂಡಿಕೆ ಮಾಡಬೇಕು” ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಶನಿವಾರ ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಇನ್ನು ಮುಂದೆ ಚೀನಾ ಹಾಗೂ ನೆರೆಹೊರೆಯ ದೇಶಗಳಿಗೆ ಭಾರತದಲ್ಲಿ ಯಾವುದೇ ರೀತಿಯ ಹೂಡಿಕೆಗೆ ಕೇಂದ್ರ ಸರ್ಕಾರದ ಪೂರ್ವಾನುಮತಿ ಕಡ್ಡಾಯವಾಗಲಿದೆ. ಭಾರತದೊಂದಿಗೆ ಗಡಿಯನ್ನು ಹಂಚಿ­ಕೊಂಡಿರುವ ಎಲ್ಲಾ ದೇಶಗಳು ದೇಶದಲ್ಲಿ ನೇರ ಅಥವಾ ಪರೋಕ್ಷ ಹೂಡಿಕೆಗೆ ಕೇಂದ್ರದ ಅನುಮತಿ ಪಡೆಯುವುದು ಕಡ್ಡಾಯವಾಗಲಿದೆ.

ಚೀನಾದ ಕಂಪನಿಗಳು ಭಾರತದಲ್ಲಿ ಅನೇಕ ಸ್ಟಾರ್ಟಪ್‍ಗಳಲ್ಲಿ 400 ಕೋಟಿ ಡಾಲರ್‍ಗೂ ಹೆಚ್ಚು ಬಂಡವಾಳ ಹೂಡಿಕೆ ಮಾಡಿವೆ. ಮುಂಬರುವ ತಿಂಗಳುಗಳಲ್ಲಿ ಚೀನಾ ಹೂಡಿಕೆ ಮೇಲೆ ಪರಿಷ್ಕೃತ ನಿಯಮಗಳು ಪ್ರಭಾವ ಬೀರಲಿವೆ. ಇದರಿಂದಾಗಿ ಸ್ಪೇನ್, ಜರ್ಮನಿ, ಆಸ್ಪ್ರೇಲಿಯಾ, ಇಟಲಿ ಸೇರಿದಂತೆ ಅನೇಕ ದೇಶಗಳು ಎಫ್‍ಡಿಐ ನಿಯಮಗಳನ್ನು ಬಿಗಿಗೊಳಿಸಿವೆ.

ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸ್ವಾಗತಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಹಿಂದೆ ನಾನು ನೀಡಿದ್ದ ಎಚ್ಚರಿಕೆಯನ್ನು ಕೇಂದ್ರ ಸರ್ಕಾರ ಪರಿಗಣಿಸಿದ್ದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಅಂದ್ರೆ ಏಪ್ರಿಲ್ 12ರಂದು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ”ಕೊರೊನಾ ವೈರಸ್ ರೋಗ ಹರಡಿದ ನಂತರ ದೇಶದ ಆರ್ಥಿಕತೆ ದುರ್ಬಲವಾಗಿರುವು­ದರಿಂದ ಭಾರತೀಯ ಕಂಪನಿ­ಗಳನ್ನು ಖರೀದಿ­ಸಲು ವಿದೇಶಿ ಕಾರ್ಪೊ­ರೇಟ್ ಕಂಪನಿಗಳು ಯತ್ನಿಸಬಹುದು. ಇದನ್ನು ತಡೆಯಬೇಕು ಎಂದು ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *