ಭಾರತದ ಮೇಲೆ ಚೀನಾ ದಾಳಿ ಬರೀ ಆರೋಪನಾ?- ಮಣಿಶಂಕರ್ ಹೇಳಿಕೆಗೆ ಬಿಜೆಪಿ ಗರಂ

Public TV
1 Min Read

– ವಿವಾದವಾಗ್ತಿದ್ದಂತೆಯೇ ಬೇಷರತ್‌  ಕ್ಷಮೆ

ನವದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ (Mani Shankar Aiyar) ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ಮೂಲಕ ಸದ್ದು ಮಾಡಿದ್ದಾರೆ.

ದೆಹಲಿಯಲ್ಲಿ ನೆಹರೂಸ್ ಫಸ್ಟ್ ರಿಕ್ರೂಟ್ಸ್ ಕೃತಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮಣಿಶಂಕರ್ ಅಯ್ಯರ್, 1962ರಲ್ಲಿ ಭಾರತದ ಮೇಲೆ ಚೀನಾ ಪಡೆಗಳು ದಾಳಿ ಮಾಡಿದ ಆರೋಪಗಳಿವೆ ಅಂತಾ ಹೇಳಿದ್ದಾರೆ. ಸಹಜವಾಗಿಯೇ ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

38,000 ಚದರ ಕಿಲೋಮೀಟರ್ ನಷ್ಟು ನಮ್ಮ ಭೂಭಾಗವನ್ನು ಆಕ್ರಮಿಸಿಕೊಂಡ ಅಂದಿನ ಚೀನಾ (China) ದಂಡಯಾತ್ರೆಯನ್ನೇ ಚರಿತ್ರೆಯ ಪುಟಗಳಿಂದ ಅಳಿಸುವ ಪ್ರಯತ್ನವನ್ನು ಕಾಂಗ್ರೆಸ್ ನಡೆಸಿದೆ ಎಂದು ಕಿಡಿಕಾರಿದೆ. ಈ ಹಿಂದೆಯೂ ಚೀನಾಗೆ ಅನುಕೂಲವಾಗಿ ಕಾಂಗ್ರೆಸ್ (Congress) ವರ್ತಿಸಿದೆ ಅಂತಾ ಆರೋಪಿಸಿದೆ. ಈ ಬೆನ್ನಲ್ಲೇ ಎಚ್ಚೆತ್ತ ಕಾಂಗ್ರೆಸ್ ಎಂದಿನಂತೆ, ಅಯ್ಯರ್ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದಿದೆ.

2020ರ ಲಡಾಖ್ ಘರ್ಷಣೆ ಪ್ರಸ್ತಾಪಿಸಿದ ಕಾಂಗ್ರೆಸ್, ಪ್ರಧಾನಿ ಮೋದಿ (Narendra Modi) ಏನೂ ಆಗಿಲ್ಲ ಎಂಬಂತೆ ಮಾತಾಡಿದ್ರು. ಇದು ಆರೋಪ ಅಷ್ಟೇ ಎಂದಿದ್ರು. ಎಂಬುದನ್ನು ನೆನಪಿಸಿ ಬಿಜೆಪಿಗೆ ಟಕ್ಕರ್ ನೀಡಿದೆ. ಈ ಮಧ್ಯೆ ಆಕಸ್ಮಾತ್ ಆಗಿ ಆರೋಪ ಎಂಬ ಪದ ಬಳಸಿದೆ ಎಂದಿರುವ ಮಣಿಶಂಕರ್ ಅಯ್ಯರ್, ಇದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.

Share This Article