ದಾವಣಗೆರೆ: ಸರ್ಕಾರಿ ಆಸ್ಪತ್ರೆಗಳು ಎಂದರೆ ಸಾಕು ಇತ್ತೀಚಿನ ದಿನಗಳಲ್ಲಿ ಅವ್ಯವಸ್ಥೆಯ ಆಗರವಾಗಿವೆ. ಅದರಂತೆ ದಾವಣಗೆರೆಯ ಜಿಲ್ಲಾಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ವೈದ್ಯರಿಲ್ಲದೆ ಪರದಾಡುವಂತ ಪರಿಸ್ಥಿತಿ ಎದುರಾಗಿದೆ.
ಸೋಮವಾರ ತಡರಾತ್ರಿ ಅಪಘಾತಕ್ಕೀಡಾಗಿದ್ದ ಮಗುವೊಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲು ಮಕ್ಕಳ ತಜ್ಞ ವೈದ್ಯರಿಲ್ಲದೇ ಪರದಾಡುವಂತಹ ಸ್ಥಿತಿ ಮಗುವಿನ ಪೋಷಕರಿಗೆ ಬಂದೊದಗಿದೆ. ತಡ ರಾತ್ರಿ ನಗರದ ಬಿನ್ನಿಮಿಲ್ ರೋಡ್ ಬಳಿ ಬೈಕ್-ಆಟೋ ನಡುವೆ ಅಪಘಾತ ಸಂಭವಿಸಿತ್ತು.
ಅಪಘಾತದಲ್ಲಿ ಬೇತೂರು ರಸ್ತೆಯ ಖಲೀಲ್ ಸಾಬ್, ಸಲ್ಮಾ ಬಾನು ದಂಪತಿಯ ಏಳು ವರ್ಷದ ಸೋಫಿಯಾ ಬಾನು ಗಂಭೀರವಾಗಿ ಗಾಯಗೊಂಡಿದ್ದು, ಮಗುವಿನ ಎಡಗಾಲಿನ ತೊಡೆಗೆ ಗಂಭೀರ ಪೆಟ್ಟು ಬಿದ್ದಿತ್ತು. ತಕ್ಷಣ ಪೋಷಕರು ಜಿಲ್ಲಾಸ್ಪತ್ರೆಗೆ ಮಗುವನ್ನು ದಾಖಲು ಮಾಡಿದ್ದರು. ತೊಡೆಗೆ ಹೊಲಿಗೆ ಹಾಕಬೇಕಿದ್ದರಿಂದ ಮಕ್ಕಳ ತಜ್ಞ ವೈದ್ಯರಿಲ್ಲದೆ ಡ್ಯೂಟಿ ಡಾಕ್ಟರ್ ಮಗುವಿಗೆ ಪ್ರಥಮ ಚಿಕಿತ್ಸೆ ನೀಡಿ ಕೈಚೆಲ್ಲಿ ಕುಳಿತಿದ್ದಾರೆ.
ಅಲ್ಲದೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚನೆ ನೀಡಿದ್ದು, ಪೋಷಕರಿಗೆ ಕೈಯಲ್ಲಿ ಹಣವಿಲ್ಲದೆ ಪರದಾಡುವಂತಾಯಿತು. ಇದರಿಂದ ಜಿಲ್ಲಾಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಹಾಗೂ ಸರಿಯಾದ ವೈದ್ಯರು ಇಲ್ಲವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews