ಟ್ರಕ್‍ಗೆ ಕಾರು ಡಿಕ್ಕಿ – ಅಪಘಾತದಲ್ಲಿ ಹಿಂದಿ ಬಾಲನಟ ಸಾವು

Public TV
1 Min Read

ರಾಯ್‍ಪುರ: ಟ್ರಕ್‍ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಹಿಂದಿ ಬಾಲನಟ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಛತ್ತೀಸ್‍ಗಢದ ರಾಯ್‍ಪುರನಲ್ಲಿ ನಡೆದಿದೆ.

ಅಪಘಾತದಲ್ಲಿ ಸಾವನ್ನಪ್ಪಿದ ಬಾಲನಾಟನನ್ನು 14 ವರ್ಷದ ಶಿವಲೇಖ್ ಸಿಂಗ್ ಎಂದು ಗುರುತಿಸಲಾಗಿದ್ದು, ಈ ಅಪಘಾತದಲ್ಲಿ ಬಾಲನಟನ ಪೋಷಕರು ಕೂಡ ತೀವ್ರವಾಗಿ ಗಾಯಗೊಂಡಿದ್ದಾರೆ.

ಈ ಕುಟುಂಬ ಬಿಲಾಸ್ಪುರ್ ನಿಂದ ರಾಯ್‍ಪುರಕ್ಕೆ ಹೋಗುತ್ತಿರುವಾಗ ಕಾರು ಟ್ರಕ್‍ನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಶಿವಲೇಖ್ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಈ ಕಾರಿನಲ್ಲಿದ್ದ ಅವನ ತಂದೆ ತಾಯಿಯೂ ಕೂಡ ಗಾಯಗೊಂಡಿದ್ದಾರೆ ಎಂದು ರಾಯ್‍ಪುರದ ಪೊಲೀಸ್ ವರಿಷ್ಠಾಧಿಕಾರಿ ಆರಿಫ್ ಶೇಖ್ ಹೇಳಿದ್ದಾರೆ.

ಛತ್ತೀಸ್‍ಗಢ ಜಂಜಗೀರ್-ಚಂಪಾ ಜಿಲ್ಲೆಯ ನಿವಾಸಿ ಶಿವಲೇಖ್ ಸಿಂಗ್ ತನ್ನ ಪೋಷಕರೊಂದಿಗೆ ಮುಂಬೈನಲ್ಲಿ ನೆಲೆಸಿದ್ದನು. ಶಿವಲೇಖ್ ಸಿಂಗ್ ರಾಯ್‍ಪುರದಲ್ಲಿ ಒಂದು ಸಂದರ್ಶನಕ್ಕಾಗಿ ಹೋಗುತ್ತಿರುವಾಗ ಈ ಘಟನೆ ನಡೆದಿದೆ. ಶಿವಲೇಖ್ “ಸಂಕಟ್ಮೋಚನ್ ಹನುಮಾನ್” ಮತ್ತು “ಸಾಸುರಲ್ ಸಿಮಾರ್ ಕಾ” ಸೇರಿದಂತೆ ಹಲವಾರು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದನು ಮತ್ತು ಟಿವಿ ರಿಯಾಲಿಟಿ ಶೋಗಳಲ್ಲಿಯೂ ಕೂಡ ಕಾಣಿಸಿಕೊಂಡಿದ್ದನು.

ಅಪಘಾತದ ಬಳಿಕ ಟ್ರಕ್ ಚಾಲಕ ಪರಾರಿಯಾಗಿದ್ದು, ಅವನ ಪತ್ತೆ ಹಚ್ಚಲು ಪೊಲೀಸರು ಪ್ರಯತ್ನ ಮಾಡುತ್ತಿದ್ದರೆ ಈ ಸಂಬಂಧ ರಾಯ್‍ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *