ಜನರು ಮನೆಯಿಂದ ಹೊರ ಬರದಂತೆ ಚಿಕ್ಕೋಡಿ ಪೊಲೀಸರಿಂದ ಹೊಸ ಪ್ಲಾನ್

Public TV
1 Min Read

ಚಿಕ್ಕೋಡಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 14ರವರೆಗೆ ದೇಶಾದ್ಯಂತ ಲಾಕ್‍ಡೌನ್ ಘೋಷಿಸಿದ್ದಾರೆ. ಆದರೆ ಅನೇಕರು ತರಕಾರಿ ಖರೀದಿಗೆ ಅಂತ ಮನೆಯಿಂದ ಹೊರ ಬರುತ್ತಿದ್ದಾರೆ. ಹೀಗಾಗಿ ಚಿಕ್ಕೋಡಿ ಪೊಲೀಸರು ಪ್ಲಾನ್ ಮಾಡಿ ಮನೆಯಿಂದ ಜನರು ಹೊರ ಬರದಂತೆ ತಡೆಯಲು ಪ್ರಯತ್ನಿಸುತ್ತಿದ್ದಾರೆ.

ಪೊಲೀಸರು ತಳ್ಳುವ ಗಾಡಿ ಅಥವಾ ಆಟೋಗಳಲ್ಲಿ ತರಕಾರಿ ಮಾರುವ ಒಟ್ಟು 12 ಜನರ ಹೆಸರು ಹಾಗೂ ಮೊಬೈಲ್ ನಂಬರ್ ಪಡೆದುಕೊಂಡಿದ್ದಾರೆ. ಅವರಿಗೆ ನಗರದ ವಿವಿಧ ಏರಿಯಾಗಳನ್ನು ಹಂಚಿಕೆ ಮಾಡಿದ್ದಾರೆ. ಈ ಎಲ್ಲ ವ್ಯಾಪಾರಿಗಳು ಬೆಳಗ್ಗೆ 6ರಿಂದ 9 ಗಂಟೆ ಹಾಗೂ ಸಂಜೆ 4ರಿಂದ 7ರವರೆಗೆ ತರಕಾರಿ ಮಾರಲಿದ್ದಾರೆ ಎಂದು ಪ್ರಕರಣೆ ಹೊರಡಿಸಿದ್ದಾರೆ.

ತರಕಾರಿ ಖರೀದಿಸಲು ಜನರು ಗುಂಪು ಗುಂಪಾಗಿ ನಿಲ್ಲುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕೋಡಿ ಪೊಲೀಸರ ಹೊಸ ಪ್ಲಾನ್ ಜಾರಿಗೆ ತಂದಿದ್ದಾರೆ. ಅಷ್ಟೇ ಅಲ್ಲದೆ ಪ್ರಕಟಣೆಯಲ್ಲಿ ವಿಶೇಷ ಸೂಚನೆ ನೀಡಿರುವ ಪೊಲೀಸರು, ‘ತರಕಾರಿ ಖರೀದಿಸುವಾಗ ಗುಂಪಾಗಿ ನಿಲ್ಲದೆ ಅಂತರ ಕಾಯ್ದುಕೊಳ್ಳಬೇಕು. ತಳ್ಳುವ ಗಾಡಿ ಮನೆಯ ಹತ್ತಿರ ಬಂದಾಗ ಒಬ್ಬೊಬ್ಬರಾಗಿ ಒಂದು ತರಕಾರಿ ತೆಗೆದುಕೊಳ್ಳಬೇಕು. ಒಂದು ವೇಳೆ ಗುಂಪುಗೂಡಿದರೆ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *