ಸಮಸ್ಯೆ ಪರಿಹರಿಸುವಂತೆ ಅಯೋಧ್ಯೆ ರಾಮನಿಗೆ ಮಲೆನಾಡಿನ ಅಡಿಕೆ ಹಿಂಗಾರ ಸಮರ್ಪಣೆ

Public TV
1 Min Read

ಚಿಕ್ಕಮಗಳೂರು: ಮಲೆನಾಡು ಭಾಗದ ರೈತರು ನಾನಾ ರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ನಮ್ಮ ಸಮಸ್ಯೆಗಳನ್ನು ಬಗೆಹರಿಸುವ ಭಗವಂತ ಎಂದು ಜಿಲ್ಲೆಯ ಮಲೆನಾಡು ಭಾಗದ ರೈತರು ಅಯೋಧ್ಯೆಯ ರಾಮನಲ್ಲಿ (Ayodhya Ram Mandir) ಬೇಡಿಕೊಂಡಿದ್ದಾರೆ.

ಜಿಲ್ಲೆಯ ಎನ್.ಆರ್.ಪುರ ತಾಲೂಕಿನ 50ಕ್ಕೂ ರಾಮ ಭಕ್ತರು ಅಯೋಧ್ಯೆಯ ಬಾಲರಾಮನ ದರ್ಶನಕ್ಕೆ ಹೊರಟಿದ್ದಾರೆ. ಅಯೋಧ್ಯೆಗೆ ಹೋಗುವ ಮುನ್ನ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಮಾರ್ಕಂಡೇಶ್ವರ ದೇವಾಲಯಕ್ಕೆ ಮಲೆನಾಡಿನ ಅಡಿಕೆಯ ಹಿಂಗಾರವನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಅದೇ ಹಿಂಗಾರವನ್ನ ಅಯೋಧ್ಯೆಯ ರಾಮನಿಗೆ ಪೂಜೆ ಸಲ್ಲಿಸಲು ಕೊಂಡೊಯ್ದಿದ್ದಾರೆ.

ಮಲೆನಾಡಿನಲ್ಲಿ ನಾನಾ ರೀತಿಯ ಸಮಸ್ಯೆಗಳಿವೆ. ಹಳದಿ ಎಲೆ ರೋಗದಿಂದ ಅಡಿಕೆ ಬೆಳೆಗಾರರ ಬದುಕು ಬೀದಿಗೆ ಬಂದಿದೆ. ಕಸ್ತೂರಿರಂಗನ್ ವರದಿ, ಬಫರ್ ಜ್ಹೋನ್ ಸೇರಿದಂತೆ ಮೀಸಲು ಅರಣ್ಯದ ಹೆಸರಿನಲ್ಲಿ ಆಳುವ ವರ್ಗ ಯೋಚಿಸದೆ ಮಾಡಿದ ಕಾನೂನಿನ ಕುಣಿಕೆಗೆ ಮಲೆನಾಡಿಗರು ಬೆಲೆ ತೆರುವಂತಾಗಿದೆ. ಹಾಗಾಗಿ ನಮ್ಮ ಸಮಸ್ಯೆಯನ್ನು ಬಗೆಹರಿಸು ಭಗವಂತ ಎಂದು ಮಾರ್ಕಂಡೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅಯೋಧ್ಯೆಗೆ ಹೊರಟಿದ್ದಾರೆ.

ರಾಮಭಕ್ತರು ಮಾರ್ಕಂಡೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ಮಲೆನಾಡಿನ ಹಿಂಗಾರು ಸಮೇತ ಅಯೋಧ್ಯೆಗೆ ಹೊರಟಿದ್ದಾರೆ. ಅದೇ ಹಿಂಗಾರದಲ್ಲಿ ಅಯೋಧ್ಯೆಯ ರಾಮಲಲ್ಲನಿಗೆ ಪೂಜೆ ಸಲ್ಲಿಸಿ ಸಮಸ್ಯೆ ಬಗೆಹರಿಸಿ ಕೊಡುವಂತೆ ಬೇಡಿಕೊಳ್ಳಲಿದ್ದಾರೆ. ಇದನ್ನೂ ಓದಿ: ಮತ್ತೆ ಅಖಾಡಕ್ಕೆ ಇಳಿಯುತ್ತಾರಾ ಖರ್ಗೆ? ಬಿಜೆಪಿಯ ಕಲಬುರಗಿ ಅಭ್ಯರ್ಥಿ ಯಾರು?

Share This Article