ಡೀಸೆಲ್ ಖಾಲಿಯಾಗಿ ನಿಂತಿದ್ದ ಲಾರಿಗೆ ಬಸ್ ಡಿಕ್ಕಿ- ಇಬ್ಬರು ಸಾವು

Public TV
1 Min Read

ಚಿಕ್ಕಮಗಳೂರು: ಡೀಸೆಲ್ ಖಾಲಿಯಾಗಿ ರಸ್ತೆ ಬದಿಗೆ ನಿಂತಿದ್ದ ಲಾರಿಗೆ ಈಶಾನ್ಯ ಸಾರಿಗೆ ಬಸ್ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟ ಘಟನೆ ಕಡೂರು ತಾಲೂಕಿನ ಗೌರಿಹಳ್ಳ ಬಳಿ ನಡೆದಿದೆ.

ಶಿವಮೊಗ್ಗ ಮೂಲದ ಲಾರಿ ಚಾಲಕ ಶರವಣ ಹಾಗೂ ಕಡೂರಿನ ಸರ್ವೆ ಡಿಪಾರ್ಟಮೆಂಟ್‍ನಲ್ಲಿ ಕೆಲಸ ಮಾಡುತ್ತಿದ್ದ ರುಚಿತಾ (22) ಮೃತ ದುರ್ದೈವಿಗಳು. ರುಚಿತಾ ಮೂಲತಃ ಹಾಸನ ಬೇಲೂರು ತಾಲೂಕಿನ ಹಗರೆ ಗ್ರಾಮದ ನಿವಾಸಿ. ಘಟನೆಯಲ್ಲಿ ಒಟ್ಟು 6 ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಡೀಸೆಲ್ ಖಾಲಿಯಾಗಿದ್ದರಿಂದ ಚಾಲಕ ಶರವಣ ಲಾರಿಯನ್ನು ಗೌರಿಹಳ್ಳ ಸಮೀಪದ ರಸ್ತೆ ತಿರುವಿನಲ್ಲಿ ನಿಲ್ಲಿಸಿದ್ದರು. ಬಳಿಕ ಕ್ಯಾನ್‍ನಲ್ಲಿದ್ದ ಡಿಸೇಲ್ ಅನ್ನು ಲಾರಿಗೆ ಹಾಕುತ್ತಿದ್ದಾಗ ವೇಗವಾಗಿ ಬಂದ ಬಸ್ ಚಾಲಕ ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಲ್ಲಿಯೆ ಇದ್ದ ಶರವಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸಖರಾಯಪಟ್ಟಣ ಪೋಲಿಸರು, ಗಂಭೀರವಾಗಿ ಗಾಯಗೊಂಡಿದ್ದ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಸ್‍ನಲ್ಲಿದ್ದ ರುಚಿತಾ ಸೇರಿದಂತೆ 6 ಜನರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಕಡೂರು ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ಪೈಕಿ ರುಚಿತಾ ಸೇರಿದಂತೆ ಮೂವರು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದರು. ತಕ್ಷಣವೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ರುಚಿತಾ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ. ಉಳಿದ ಇಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *