ಕುಡಿದು ಆಸ್ಪತ್ರೆಯಲ್ಲಿ ಬೆತ್ತಲಾಗಿ ಮಲಗಿದ ವೈದ್ಯ – ರೋಗಿ ಸಾವು

Public TV
1 Min Read

ಚಿಕ್ಕಮಗಳೂರು: ರೋಗಿ ಆಸ್ಪತ್ರೆಗೆ ಬಂದಾಗ ಆಸ್ಪತ್ರೆಯಲ್ಲಿದ್ದ ವೈದ್ಯರು ಮದ್ಯಪಾನ ಸೇವನೆ ಮಾಡುವುದರಲ್ಲಿ ಬ್ಯುಸಿ ಇದ್ದ ಕಾರಣ ರೋಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ತರೀಕೆರೆ ತಾಲೂಕಿನ ಅಜ್ಜಂಪುರದ ಸರ್ಕಾರಿ ಆಸ್ಪತ್ರೆಯ ವೈದ್ಯ ಚನ್ನಕೇಶವನ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದ್ದು, ವೈದ್ಯ ಚನ್ನಕೇಶವ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಜ್ಜಂಪುರ ಸಮೀಪದ ಹೆಬ್ಬುರು ಮೂಲದ ಪುಟ್ಟಮ್ಮಗೆ ಬಿಪಿ ಹಾಗೂ ಶುಗರ್ ಹೆಚ್ಚಿದ್ದ ಪರಿಣಾಮ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆಗ ಡ್ಯೂಟಿಯಲ್ಲಿದ್ದ ಚನ್ನಕೇಶವ ಮದ್ಯಪಾನ ಮಾಡಿ ರೋಗಿಗೆ ಚಿಕಿತ್ಸೆ ನೀಡಿಲ್ಲ. ಆಸ್ಪತ್ರೆಯಲ್ಲಿದ್ದ ನರ್ಸ್‍ಗಳು ರೋಗಿಗೆ ಚಿಕಿತ್ಸೆ ನೀಡಿದ್ದಾರೆ.

ಆಸ್ಪತ್ರೆಗೆ ಬಂದ ಸ್ವಲ್ಪ ಹೊತ್ತಿನಲ್ಲೇ ರೋಗಿ ಸಾವನ್ನಪ್ಪಿದ್ದಾರೆ. ರೋಗಿ ಪುಟ್ಟಮ್ಮ ಬಿಪಿ ಹಾಗೂ ಶುಗರ್‍ನಿಂದಲೇ ಸಾವನ್ನಪ್ಪಿದರೋ ಅಥವಾ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದರೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ವೈದ್ಯರ ಕೊಠಡಿಗೆ ಹೋದಾಗ, ವೈದ್ಯರು ಫುಲ್ ಎಣ್ಣೆ ಕುಡಿದು ಬೆತ್ತಲೆ ಮಲಗಿದ್ದಾರೆ. ಮೈಮೇಲೆ ಒಂದಿಂಚು ಬಟ್ಟೆ ಹಾಗೂ ಪ್ರಜ್ಞೆ ಇಲ್ಲದಂತೆ ಮಲಗಿದ್ದ ವೈದ್ಯನ ಕಂಡು ಸ್ಥಳೀಯರು ಮತ್ತಷ್ಟು ರೊಚ್ಚಿಗೆದ್ದಿದ್ದಾರೆ.

ಕೂಡಲೇ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಈ ರೀತಿಯ ವೈದ್ಯರು ಯಾವ ಆಸ್ಪತ್ರೆಗೂ ಬೇಡ, ಇವರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *