ಯುವತಿಯನ್ನು ವಿವಸ್ತ್ರಗೊಳಿಸಿ ನಡುರಸ್ತೆಯಲ್ಲಿ ಬಿಟ್ಟುಹೋದ ಚಾಲಕ

Public TV
1 Min Read

ಚಿಕ್ಕಬಳ್ಳಾಪುರ: ಓಲಾ ಕ್ಯಾಬ್ ಚಾಲಕ ಮತ್ತು ಮೂವರು ಅಪ್ರಾಪ್ತ ಬಾಲಕರು ಸೇರಿ ಉಗಾಂಡಾ ದೇಶದ ಯುವತಿಯ ಬಟ್ಟೆ ಸಂಪೂರ್ಣವಾಗಿ ಕಿತ್ತುಹಾಕಿ ಆಕೆಯನ್ನ ಬೆತ್ತಲು ಮಾಡಿ ನಡುರಸ್ತೆಯಲ್ಲಿ ಬಿಟ್ಟುಹೋಗಿರುವ ಅಮಾನವೀಯ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಆಲಹಳ್ಳಿ ಗ್ರಾಮದ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಜನವರಿ 16ರಂದು ಘಟನೆ ನಡೆದಿದ್ದು, ಜನವರಿ 20ರಂದು ನೊಂದ ಯುವತಿ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಓಲಾ ಕ್ಯಾಬ್ ಚಾಲಕ ಸೇರಿದಂತೆ ಮೂವರು ಅಪ್ರಾಪ್ತ ಬಾಲಕರ ವಿರುದ್ಧ ದೂರು ದಾಖಲಿಸಿದ್ದಾರೆ.

ಘಟನೆಯ ವಿವರ
ಕಿಡ್ನಿ ಸ್ಟೋನ್ ಸಂಬಂಧಿತ ಚಿಕಿತ್ಸೆಗೆ ಎಂದು ಯುವತಿ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದು, ಜನವರಿ 16ರ ರಾತ್ರಿ 10 ಗಂಟೆ ಸುಮಾರಿಗೆ ಕಮ್ಮನಹಳ್ಳಿಯಿಂದ ಓಲಾ ಕ್ಯಾಬ್ ಬುಕ್ ಮಾಡಿಕೊಂಡು ಕ್ಯಾಬ್ ಮುಖಾಂತರ ನವಜ್ಯೋತಿ ಸ್ಟ್ರೀಟ್ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಆದರೆ ಓಲಾ ಕ್ಯಾಬ್ ನಲ್ಲಿದ್ದ ಚಾಲಕ ಹಾಗೂ ಇತರ ಅಪರಿಚಿತರು ಚಾಕು ತೋರಿಸಿ ಬೆದರಿಕೆ ಹಾಕಿ ಆಕೆಯ ಬಳಿಯಿದ್ದ ಚಿನ್ನಾಭರಣ, ಮೊಬೈಲ್ ಹಾಗೂ ಹಣವನ್ನು ಕಸಿದುಕೊಂಡಿದ್ದಾರೆ.

ಬಟ್ಟೆಗಳನ್ನು ಕಿತ್ತುಹಾಕಿ ವಿವಸ್ತ್ರಗೊಳಿಸಿ ಕೊನೆಗೆ ಆಲಹಳ್ಳಿ ಬಳಿ ನಡುರಸ್ತೆಯಲ್ಲೇ ಬಿಟ್ಟುಹೋಗಿದ್ದಾರೆ. ತದನಂತರ ಯುವತಿ ಅಲ್ಲೇ ತೋಟದ ಮನೆಯೊಂದರ ಬಳಿ ಹೋಗಿ ಮನೆಯಲ್ಲಿದ್ದವರ ಬಟ್ಟೆಯನ್ನು ಪಡೆದು ಧರಿಸಿಕೊಂಡಿದ್ದಾರೆ. ಈ ಬಗ್ಗೆ ನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದು, ಮೂವರು ಸಹ ಅಪ್ರಾಪ್ತ ಬಾಲಕರು ಎಂದು ತಿಳಿದು ಬಂದಿದೆ.

ಪ್ರಕರಣದಲ್ಲಿ ಕ್ಯಾಬ್ ಚಾಲಕ ನಾಪತ್ತೆಯಾಗಿದ್ದು, ಚಾಲಕನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಆದರೆ ಬಂಧಿತ ಅಪ್ರಾಪ್ತ ಬಾಲಕರು ಬೇರೆಯೇ ಹೇಳುತ್ತಿದ್ದು, ಯುವತಿ ವೇಶ್ಯಾವಾಟಿಕೆ ನಡೆಸುತ್ತಿದ್ದು ನಮ್ಮ ಜೊತೆ ಬಂದಿದ್ದಳು. ಹಣ ಪಡೆದುಕೊಳ್ಳುವ ವಿಚಾರದಲ್ಲಿ ತಗಾದೆ ಉಂಟಾಗಿ ನಾವು ಆಕೆಯನ್ನು ಅಲ್ಲೇ ಬಿಟ್ಟು ಹೋದೆವು ಎಂದು ಹೇಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *