ಪರಿವರ್ತನಾ ಯಾತ್ರೆಗೆ ಜನರನ್ನು ಸೆಳೆಯಲು ಬಿಜೆಪಿಯಿಂದ ಆರ್ಕೆಸ್ಟ್ರಾ ಆಯೋಜನೆ!

Public TV
2 Min Read

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಭದ್ರಕೋಟೆಯಾದ ಪಂಚಗಿರಿಗಳ ನಾಡು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ ಇಂದು ಬಿಜೆಪಿಯ ಪರಿವರ್ತನಾ ಯಾತ್ರೆ ಭರ್ಜರಿಯಾಗಿ ನಡೆದಿದೆ. ಆದರೆ ಪರಿವರ್ತನಾ ಯಾತ್ರೆಗೆ ಜನರನ್ನು ಸೆಳೆಯಲು ಆರ್ಕೆಸ್ಟ್ರಾ ಆಯೋಜನೆ ಮಾಡಿದ್ದು ಈಗ ಭಾರೀ ವಿರೋಧಕ್ಕೆ ಕಾರಣವಾಗಿದೆ.

ಮೊದಲಿಗೆ ಯಾತ್ರೆ ಗೌರಿಬಿದನೂರು ನಗರದಲ್ಲಿ ಆರಂಭವಾಗಿತ್ತು. ಆದರೆ ಜನರನ್ನು ಬಾಗೇಪಲ್ಲಿ ಪಟ್ಟಣದ ಯಾತ್ರೆಗೆ ಸೆಳೆಯಲು ಆರ್ಕೆಸ್ಟ್ರಾ ಆಯೋಜಿಸಿದ್ದರು. ಬಾಗೇಪಲ್ಲಿ ಪಟ್ಟಣದ ಗೂಳೂರು ವೃತ್ತದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿರುವ ಅರಿಕೆರೆ ಕೃಷ್ಣಾರೆಡ್ಡಿ ಅವರು ಆರ್ಕೆಸ್ಟ್ರಾ ಆಯೋಜನೆ ಮಾಡಿದ್ದರು.

ಆರ್ಕೆಸ್ಟ್ರಾ ದಲ್ಲಿ ಬೆಡಗಿಯರು ಮಸ್ತ್ ಮಸ್ತ್ ಸಾಂಗ್ ಗಳಿಗೆ ಸ್ಟೆಪ್ಸ್ ಹಾಕಿದ್ದಾರೆ. ಈ ವೇಳೆ ಜನರು ನಾ ಮುಂದು ತಾ ಮುಂದು ಎಂದು ನೋಡೋಕೆ ಮುಗಿಬಿದ್ದಿದ್ದರು. ಇನ್ನೂ ಕಾರ್ಯಕ್ರಮದ ವೇಳೆ ವಯಸ್ಸದ ವ್ಯಕ್ತಿಯೊಬ್ಬರು ಸ್ಟೇಜ್ ಹತ್ತಿ ಡ್ಯಾನ್ಸ್ ಆಡೋಕೆ ಮುಂದಾದರು. ಇದು ನೆರೆದಿದ್ದವರ ಗಮನ ಸೆಳೆದಿತ್ತು. ಮತ್ತೊಂದೆಡೆ ಹಲವರು ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಅಶ್ಲೀಲ ನೃತ್ಯ ಆಯೋಜಿಸಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಕಾರ್ಯಕ್ರಮದ ಆರಂಭ ವೇಳೆಗೆ ತಲೆಯ ಮೇಲೆ ಕಳಶ ಹೊತ್ತು ಕುಂಭ ಮೇಳದೊಂದಿಗೆ ಮಾಜಿ ಸಿಎಂ ಯಡಿಯೂರಪ್ಪ ನವರ ಜೊತೆ ಜನರು ಹೆಜ್ಜೆ ಹಾಕಿದರು. ಮೊದಲಿಗೆ ಗೌರಿಬಿದನೂರು ನಗರಕ್ಕೆ ಆಗಮಿಸಿದ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಮುರುಳೀಧರ್, ಕೇಂದ್ರ ಸಚಿವ ಸದಾನಂದಗೌಡರಿಗೆ ಭರ್ಜರಿ ಸ್ವಾಗತ ಸಿಕ್ಕಿತ್ತು. ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಿದ್ದ ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನೂ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ್, ಬಿಜೆಪಿ ಪರಿವರ್ತನಾ ಯಾತ್ರೆಗೆ ಹರಿದು ಬರುತ್ತಿರುವ ಜನಸ್ತೋಮ ಕಂಡು ಸಿಎಂ ಸಿದ್ದರಾಮಯ್ಯ ತಮ್ಮ ಬಟ್ಟೆ ಹರಿದು ಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಭದ್ರ ಕೋಟೆಯಲ್ಲಿ ಬಿಜೆಪಿಯ ಪರಿವರ್ತನಾ ಯಾತ್ರೆಯ ದರ್ಬಾರ್ ಭರ್ಜರಿಯಾಗೇ ನಡೆದರೂ ಆರ್ಕೆಸ್ಟ್ರಾ ಆಯೋಜನೆ ಹಲವು ಆಕ್ಷೇಪಗಳಿಗೆ ಕಾರಣವಾಗಿ ವಿಪಕ್ಷಗಳಿಗೆ ಟೀಕಾಸ್ತ್ರವಾಯಿತು. ಇನ್ನು ಪರಿವರ್ತನಾ ಯಾತ್ರೆ ಕಾರ್ಯಕ್ರಮದ ನಂತರ ಸೀರೆ ಟೋಕನ್ ವಿತರಣೆ ಮಾಡುತ್ತಿದ್ದಾರೆ ಎಂಬ ಆರೋಪವು ಕೇಳಿ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *