ಪತ್ನಿ ಜೊತೆ ಅಕ್ರಮ ಸಂಬಂಧ ಶಂಕೆ – ಹಾಡಹಗಲೇ ಇಬ್ಬರ ಮಧ್ಯೆ ಮಾರಾಮಾರಿ

Public TV
1 Min Read

ಚಿಕ್ಕಬಳ್ಳಾಪುರ: ಇಬ್ಬರು ಯುವಕರು ಹಾಡಹಗಲೇ ನಡು ರಸ್ತೆಯಲ್ಲಿ ಮಾರಾಮಾರಿ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ನಡೆದಿದೆ.

ನಗರದ ನದಿಗಟ್ಟೆ ಆಂಜನೇಯಸ್ವಾಮಿ ದೇವಾಲಯದ ಸಂತೆಮೈದಾನದ ಬಳಿ ಈ ಘಟನೆ ನಡೆದಿದ್ದು, ವೆಂಕಟೇಶ್ ಹಾಗೂ ಮನೋಹರ್ ರಕ್ತ ಬರುವ ಹಾಗೆ ಬಡಿದಾಡಿಕೊಂಡಿದ್ದಾರೆ. ವೆಂಕಟೇಶ್ ತನ್ನ ಹೆಂಡತಿ ಜೊತೆ ಆಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ವೆಂಕಟೇಶ್ ಮೇಲೆ ಮನೋಹರ್ ಮೊದಲಿಗೆ ಗಲಾಟೆ ಮಾಡಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಘಟನೆಯಲ್ಲಿ ಸ್ಕ್ರೂ ಡ್ರೈವರ್ ನಿಂದ ವೆಂಕಟೇಶ್ ತಲೆಗೆ ತಿವಿದ ಪರಿಣಾಮ ವೆಂಕಟೇಶ್ ತಲೆಯಿಂದ ತೀವ್ರವಾದ ರಕ್ತಸ್ರಾವವಾಗಿದೆ. ಈ ವೇಳೆ ರಕ್ತದ ನಡುವೆಯೇ ನಡುರಸ್ತೆಯಲ್ಲಿ ಇಬ್ಬರು ನಾನಾ ನೀನಾ ಎಂದು ಪೈಪೋಟಿಗೆ ಬಿದ್ದು ಜಗಳ ನಡೆಸಿದ್ದಾರೆ. ಸ್ಥಳೀಯರು ಸಂಬಂಧಿಕರು ಎಷ್ಟೇ ಬಿಡಿಸಿದರೂ ಮರಳಿ ಗಲಾಟೆ ಮಾಡಿಕೊಳ್ಳುತ್ತಿದ್ದ ಯುವಕರ ಕಾದಾಟ ನೋಡುಗರಿಗೆ ಉಚಿತ ಮನರಂಜನೆ ನೀಡಿತ್ತು.

ಕೊನೆಗೆ ವೆಂಕಟೇಶ್ ಗೌರಿಬಿದನೂರು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ. ಸದ್ಯ ಗಾಯಾಳು ವೆಂಕಟೇಶ್ ಸೇರಿದಂತೆ ಮನೋಹರ್ ಹಾಗೂ ಆತನ ಪತ್ನಿಯನ್ನು ವಶಕ್ಕೆ ಪಡೆದಿರುವ ಗೌರಿಬಿದನೂರು ನಗರ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಗೌರಿಬಿದನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *