ರಾತ್ರಿ ಬಂದು ಬೆಳಗ್ಗೆ ಮಾಯವಾಗೋ ಹುಳುವಿಗೆ ರೈತರು ಕಂಗಾಲು

Public TV
1 Min Read

-ಕೊರೊನಾ ಮಧ್ಯೆ ಭಯ ಹುಟ್ಟಿಸಿದ ರಾತ್ರಿ ಹುಳು
-ಹಿಪ್ಪುನೇರಳೆಗೆ ರಾತ್ರಿಯೇ ದಾಳಿ

ಚಿಕ್ಕಬಳ್ಳಾಪುರ: ಕೊರೊನಾ ಲಾಕ್‍ಡೌನ್ ನಿಂದ ರೈತರು ತತ್ತರಿಸಿ ಹೋಗಿದ್ದಾರೆ. ಈ ನಡುವೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕು ಜಂಗಮಕೋಟೆ ಹೋಬಳಿಯ ರೇಷ್ಮೆಬೆಳೆಗಾರರು ಮತ್ತಷ್ಟು ಸಂಕಷ್ಟಕ್ಕೀಡಾಗುಂತೆ ಮಾಡಿದೆ. ಅಂದಹಾಗೆ ಹಿಪ್ಪುನೇರಳೆ ಸೊಪ್ಪಿಗೆ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಹೊಸ ಕೀಟಭಾದೆಯೊಂದು ಕಾಣಿಸಿಕೊಂಡಿದ್ದು ರೇಷ್ಮೆ ಬೆಳೆಗಾರರು ಆತಂಕಕ್ಕೀಡಾಗುವಂತೆ ಮಾಡಿದೆ.

ಜೀರುಂಡೆ ರೀತಿಯ ಈ ಕೀಟಗಳು ಸೂರ್ಯ ಮುಳುಗಿ ಕತ್ತಲಾಗುತ್ತಿದ್ದಂತೆ ತೋಟಗಳ ಮೇಲೆ ದಾಳಿ ಮಾಡಿ ಇಡೀ ಹಿಪ್ಪುನೇರಳೆ ಸೊಪ್ಪನ್ನ ತಿಂದು ತೇಗುತ್ತಿವೆ. ಜೇನು ನೊಣಗಳಂತೆ ಲಕ್ಷಾಂತರ ಸಂಖ್ಯೆಯಲ್ಲಿ ದಾಳಿ ಮಾಡ್ತಿರೋ ಈ ಕೀಟಗಳನ್ನ, ಬೇರು ಹುಳಿ ದುಂಬಿಗಳು ಎನ್ನಲಾಗಿದೆ. ಬೇಸಿಗೆಯಲ್ಲಿ ಮೊದಲ ಮಳೆ ನಂತರ ಕೆಲ ದಿನಗಳು ಭೂಮಿಯಿಂದ ಈ ದುಂಬಿಗಳು ಹೊರಬರುತ್ತವಂತೆ. ಕತ್ತಲಾದ ನಂತರ ಭೂಮಿಯಿಂದ ಹೊರಬಂದು ನಂತರ ಸೊಪ್ಪನ್ನ ಹೊಟ್ಟೆ ತುಂಬ ತಿಂದು ತೇಗಿ ಬೆಳಗಾಗುವಷ್ಟರಲ್ಲಿ ಮರಳಿ ಮಣ್ಣಿನೊಳಗೆ ಸೇರಿಕೊಂಡುಬಿಡುತ್ತವಂತೆ.

ದೊಡ್ಡ ಪ್ರಮಾಣದಲ್ಲಿ ಹಿಪ್ಪುನೇರಳೆ ಸೊಪ್ಪನ್ನ ತಿಂದು ತೇಗುವುದರಿಂದ ರೈತನಿಗೆ ಹೊರೆಯಾಗ್ತಿದ್ದು, ರೇಷ್ಮೆ ಬೆಳೆಗಾರರು ಕಂಗಾಲಾಗುವಂತೆ ಮಾಡಿದೆ. ಇತ್ತೀಚೆಗೆ ನೆರೆಯ ರಾಜ್ಯ ಆಂಧ್ರದಲ್ಲಿ ಕಾಣಿಸಿಕೊಂಡಿದ್ದ ಈ ಕೀಟಗಳು ಈಗ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಣಿಸಿಕೊಂಡಿವೆ. ಜಂಗಮಕೋಟೆ ಹೋಬಳಿ ಬಸವಪಟ್ಟಣ ಗ್ರಾಮದ ರೈತರೊಬ್ಬರ ಹಿಪ್ಪುನೇರಳೆ ತೋಟದಲ್ಲಿ ಕಾಣಿಸಿಕೊಂಡಿದ್ದ ಈ ದುಂಬಿಗಳು, ಈಗ ಅಕ್ಕ-ಪಕ್ಕದ ರೈತರ ತೋಟಗಳಲ್ಲೂ ಕಾಣಿಸಿಕೊಳ್ತಿವೆ.

ಮೊದಲೇ ಕೊರೊನಾ ವೈರಸ್ ಭೀತಿ ನಡುವೆ ರೇಷ್ಮೆಗೂಡು ಧಾರಣೆ ಕಡಿಮೆ ಆಗಿ ರೈತರು ಸಂಕಷ್ಟಕ್ಕೀಡಾಗಿದ್ರು. ಈಗ ಈ ರಾತ್ರಿ ಬಂದು ಬೆಳಗ್ಗೆ ಮಾಯ ಆಗೋ ಈ ಕೀಟ ಭಾದೆ ಸಹ ರೈತರನ್ನ ಮತ್ತಷ್ಟು ಕಂಗೆಡುವಂತೆ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *