ಬಟ್ಟೆ ಒಗೆದುಕೊಡಲ್ಲ ಎಂದು ತುಂಬು ಗರ್ಭಿಣಿಯನ್ನ ಕೊಚ್ಚಿ ಕೊಂದ ಪಾಪಿ ಬಾವ

Public TV
1 Min Read

– ಸೀಮಂತದ ಖುಷಿಯಲ್ಲಿದ್ದ ಗರ್ಭಿಣಿ ಮಸಣ ಸೇರಿದ್ಳು

ಚಿಕ್ಕಬಳ್ಳಾಪುರ: ಆರು ತಿಂಗಳ ತುಂಬು ಗರ್ಭಿಣಿಯನ್ನ ಬಾವನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ಅನೆಮಡುಗು ಗ್ರಾಮದಲ್ಲಿ ನಡೆದಿದೆ.

ಅನೆಮಡುಗು ಗ್ರಾಮದ ಜ್ಯೋತಿ (26) ಕೊಲೆಯಾದ ತುಂಬು ಗರ್ಭಿಣಿ. ಹರೀಶ್ ಬಾಬು (40) ಕೊಲೆಗೈದ ಪಾಪಿ ಬಾವ. ಸೀಮಂತದ ಖುಷಿಯಲ್ಲಿದ್ದ ಜ್ಯೋತಿ ಮಸಣ ಸೇರಿದ್ದಾರೆ.

ಜ್ಯೋತಿ, ಅವರ ಗಂಡ, ಅತ್ತೆ, ಮಾವ ಸೇರಿದಂತೆ ಬಾವ ಒಂದೇ ಮನೆಯಲ್ಲಿ ವಾಸವಾಗಿದ್ದರು. ತವರು ಮನೆ ಚಿಂತಾಮಣಿಯಲ್ಲಿದ್ದ ತಾಯಿಯನ್ನು ಕರೆದುಕೊಂಡುಬರಲು ಇಂದು ಜ್ಯೋತಿಯ ಪತಿ ಹೋಗಿದ್ದ. ಇತ್ತ ಜ್ಯೋತಿ ಅವರ ಮಾವ ತೋಟದ ಮನೆ ಬಳಿ ಇದ್ದರಂತೆ. ಈ ವೇಳೆ ಮನೆಯಲ್ಲಿ ಏಕಾಂಗಿಯಾಗಿದ್ದ ಗರ್ಭಿಣಿಯ ಜೊತೆ ವಿನಾಕಾರಣ ಹರೀಶ್ ಬಾಬು ಜಗಳ ಆರಂಭಿಸಿದ್ದ.

ನನಗೆ ಬಟ್ಟೆ ಒಗೆದುಕೊಡುವುದಿಲ್ಲ. ಸರಿಯಾಗಿ ನೋಡಿಕೊಳ್ಳಲ್ಲ ಎಂದು ಹರೀಶ್ ತಗಾದೆ ತೆಗೆದು ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಕೋಪಗೊಂಡ ಹರೀಶ್ ತುಂಬು ಗರ್ಭಿಣಿ ಅಂತಲೂ ನೋಡದೆ ಮಚ್ಚಿನಿಂದ ತಲೆಗೆ ಬಲವಾಗಿ ಹೊಡೆದು ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ.

ಅದೇ ಗ್ರಾಮದ ಜ್ಯೋತಿ ತಾಯಿ ಮಗಳನ್ನ ನೋಡುವುದಕ್ಕೆ ಅಂತ ಮನೆಗೆ ಬಂದಾಗ ರಕ್ತದ ಮಡುವಿನಲ್ಲಿದ್ದ ಜ್ಯೋತಿ ಕೊನೆಯುಸಿರುನಲ್ಲಿ ವಿಲ ವಿಲ ಅಂತ ಒದ್ದಾಡುತ್ತಿದ್ದಳು. ಕೂಡಲೇ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅಷ್ಟರಲ್ಲೇ ಜ್ಯೋತಿ ಕೊನೆಯುಸಿರುಳೆದಿದ್ದಾರೆ.

ಜ್ಯೋತಿ ಅವರ ಪತಿ ರೈಲ್ವೆ ಇಲಾಖೆ ಉದ್ಯೋಗಿಯಾಗಿದ್ದು, 08 ವರ್ಷಗಳ ನಂತರ ಮಗು ಆಗುತ್ತಿದ್ದ ಸಂತಸದಲ್ಲಿ ಮನೆಮಂದಿಯೆಲ್ಲಾ ಇದ್ದರು. 10ರಿಂದ 12 ದಿನಗಳಲ್ಲಿ ಜ್ಯೋತಿಗೆ ಹೆರಿಗೆಯಾಗುವ ದಿನಾಂಕ ಸಹ ವೈದ್ಯರು ನೀಡಿದ್ದರು. ಇತ್ತ ಚಿಂತಾಮಣಿಗೆ ಹೋಗಿದ್ದ ಗಂಡ ಸಹ ತನಗೆ ಸೀಮಂತಕ್ಕೆ ಸೀರೆ ತರುವುದಾಗಿ ಹೇಳಿ ಹೋಗಿದ್ದ. ಆದರೆ ಅಷ್ಟರಲ್ಲೇ ಪಾಪಿ ಬಾವ ನಾದಿನಿಯ ಪ್ರಾಣವನ್ನ ಬಲಿ ಪಡೆದುಬಿಟ್ಟಿದ್ದಾನೆ.

ಈ ಸಂಬಂಧ ದಿಬ್ಬೂರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪಾಪಿ ಹರೀಶ್ ಬಾಬುನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *