ಪಿಎಲ್‍ಡಿ ಚುನಾವಣೆ: ಸುಧಾಕರ್ ತಂದೆ ವರ್ಸಸ್ ‘ಕೈ-ತೆನೆ’ ಮುಖಂಡರ ನಡುವೆ ಮಾರಮಾರಿ

Public TV
1 Min Read

ಚಿಕ್ಕಬಳ್ಳಾಪುರ: ಪಿಎಲ್‍ಡಿ ಬ್ಯಾಂಕ್ ಚುನಾವಣೆ ವೇಳೆ ಕ್ಷೇತ್ರದ ಶಾಸಕ, ವೈದ್ಯಕೀಯ ಸಚಿವ ಡಾ ಕೆ.ಸುಧಾಕರ್ ತಂದೆ ಪಿ.ಎನ್ ಕೇಶವರೆಡ್ಡಿ ಹಾಗೂ ಕಾಂಗ್ರೆಸ್-ಜೆಡಿಎಸ್ ಮುಖಂಡರ ನಡುವೆ ಮಾರಾಮಾರಿ ನಡೆದಿದೆ.

ಪಿಎಲ್‍ಡಿ ಬ್ಯಾಂಕ್‍ಗೆ ಇಂದು ಬೆಳಗ್ಗೆ 9 ಗಂಟೆಯಿಂದ ಚುನಾವಣೆ ನಡೆಯುತ್ತಿದ್ದು, ಮತದಾನ ಪ್ರಕ್ರಿಯೆ ಚಿಕ್ಕಬಳ್ಳಾಪುರ ತಾಲೂಕು ಪಂಚಾಯತ್ ಆವರಣದಲ್ಲಿನ ಮತಗಟ್ಟೆಗಳಲ್ಲಿ ಆರಂಭವಾಗಿದೆ. 12 ಕ್ಷೇತ್ರಗಳ ಪೈಕಿ ಪೇರೇಸಂದ್ರ ಸೇರಿ 2 ಕ್ಷೇತ್ರಗಳಿಗೆ ಅವಿರೋಧ ಆಯ್ಕೆಯಾಗಿದ್ದು, 10 ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದೆ.

ಈ ವೇಳೆ ಶಾಸಕ ಸುಧಾಕರ್ ತಂದೆ ಕೇಶವರೆಡ್ಡಿ ತಮ್ಮ ಬೆಂಬಲಿಗರೊಂದಿಗೆ ಮತಕೇಂದ್ರದತ್ತ ಹೆಜ್ಜೆ ಹಾಕಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡ, ವಕೀಲ ನಾರಾಯಣಸ್ವಾಮಿ, ಮತದಾರರಲ್ಲದ ಕೇಶವರೆಡ್ಡಿ, ಅವರ ತಮ್ಮಂದಿರಾದ ಚನ್ನಕೃಷ್ಣಾರೆಡ್ಡಿ ಹಾಗೂ ರವೀಂದ್ರರೆಡ್ಡಿ ಅವರನ್ನು ಒಳಗೆ ಬಿಟ್ರೀ ಸರಿ ಇರುವುದಿಲ್ಲ ಅಂತ ಗಲಾಟೆ ನಡೆಸಿದ್ದಾರೆ. ಇದರಿಂದಾಗಿ ಕೇಶವರೆಡ್ಡಿ ಹಾಗೂ ಕಾಂಗ್ರೆಸ್ ಮುಖಂಡ ನಾರಾಯಣಸ್ವಾಮಿ ನಡುವೆ ಮಾತಿನ ಚಕಮಕಿ ನಡೆದು ನಾನಾ ನೀನಾ ಅಂತ ಅವಾಚ್ಯ ಪದಗಳಿಂದ ನಿಂದಿಸಿಕೊಂಡಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ಕೇಶವರೆಡ್ಡಿ ಅವರು ಖಾಸಗಿ ಭದ್ರತಾ ಸಿಬ್ಬಂದಿ ಚೇತನ್ ಕಾಂಗ್ರೆಸ್ ಮುಖಂಡ ನಾರಾಯಣಸ್ವಾಮಿ ಮೇಲೆ ಮುಗಿಬಿದ್ದು ಹಲ್ಲೆಗೆ ಮುಂದಾಗಿ ಪರಸ್ಪರ ತಳ್ಳಾಟ ನಡೆಸಿದ್ದಾರೆ. ಕೂಡಲೇ ಪಿಎಸ್‍ಐ ಚೇತನ್ ಹಾಗೂ ಡಿವೈಎಸ್‍ಪಿ ರವಿಶಂಕರ್ ಗಲಾಟೆ ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲೇ ಕೇಶವರೆಡ್ಡಿ ಬೆಂಬಲಿಗರು ವಿರುದ್ಧ ಕಾಂಗ್ರೆಸ್‍ನ ಮತ್ತೋರ್ವ ಮುಖಂಡ ಅಂಜಿನಪ್ಪ ಹಾಗೂ ಜೆಡಿಎಸ್‍ನ ಕೆಲ ಮುಖಂಡರು ಒಂದಾಗಿ ಕೈ ಕೈ ಮಿಲಾಯಿಸುವುದಕ್ಕೆ ಮುಂದಾಗಿದ್ದರಿಂದ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ.

ತಳ್ಳಾಟ ನೂಕಾಟದಲ್ಲಿ ಡಿವೈಎಸ್‍ಪಿ ರವಿಶಂಕರ್ ಅವರಿಗೂ ಸಣ್ಣ ಗಾಯವಾಗಿದೆ. ಘಟನೆ ನಡೆಸ ನಂತರ ಸ್ಥಳಕ್ಕೆ ಸಚಿವ ಸುಧಾಕರ್ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿದರು. ಮತ್ತೊಂದೆಡೆ ಪ್ರಭಾರ ಎಸ್‍ಪಿ ಕಾರ್ತಿಕ್ ರೆಡ್ಡಿ ಸಹ ಭೇಟಿ ನೀಡಿ ಪರೀಶಿನೆ ನಡೆಸಿದರು. ಸದ್ಯ ಶಾಂತಿಯುತವಾಗಿ ಚುನಾವಣಾ ಪ್ರಕ್ರಿಯೆ ನಡೆಸಿದ್ದು, ಇಂದು ಸಂಜೆ ಫಲಿತಾಂಶ ಹೊರಬೀಳಲಿದೆ.

Share This Article
Leave a Comment

Leave a Reply

Your email address will not be published. Required fields are marked *