ಚಿಕ್ಕಬಳ್ಳಾಪುರ: ಬಾವಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಹೋದ ತಾಯಿ ಸೇರಿ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಮನಕಲಕುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
30 ವರ್ಷದ ತಾಯಿ ವಿಜಯಲಕ್ಷ್ಮೀ ಹಾಗೂ ಮಕ್ಕಳಾದ 10 ವರ್ಷದ ಅಜಯ್ ಹಾಗೂ 8 ವರ್ಷದ ಧನಲಕ್ಷ್ಮೀ ಮೃತರು. ಬಟ್ಟೆ ತೊಳೆಯಲು ಗ್ರಾಮ ಹೊರವಲಯದ ರೈತ ಮುನಿಯಪ್ಪನವರ ಬಾವಿ ಬಳಿ ತೆರಳಿದ್ದ ತಾಯಿ ತೆರಳಿದ್ದರು.
ಈ ವೇಳೆ ಅಲ್ಲೇ ಆಟವಾಡುತ್ತಿದ್ದ ಮಕ್ಕಳು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿರಬಹುದು ಎನ್ನಲಾಗಿದ್ದು, ಈ ವೇಳೆ ಮಕ್ಕಳನ್ನು ರಕ್ಷಿಸಲು ಹೋಗಿ ತಾಯಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ವಿಜಯಲಕ್ಷ್ಮೀ ಪತಿ ನಾಗರಾಜು ಮನೆಯಲ್ಲಿ ಯಾರೂ ಇಲ್ಲದಿದ್ದನ್ನು ಕಂಡು ಬಟ್ಟೆ ತೊಳೆಯಲು ಹೋಗಿರುವ ವಿಷಯ ತಿಳಿದು ಬಾವಿ ಬಳಿ ಹೋಗಿದ್ದಾನೆ.
ಬಾವಿ ಬಳಿ ಬಟ್ಟೆ ಮಾತ್ರ ಇದ್ದು ಹೆಂಡತಿ ಮಕ್ಕಳು ಕಂಡಿಲ್ಲ. ಹೀಗಾಗಿ ಅನುಮಾನಗೊಂಡು ಬಾವಿಯಲ್ಲಿ ಹುಡುಕಾಡಿದಾಗ ಮೊದಲು ವಿಜಯಲಕ್ಷ್ಮೀ ಮೃತದೇಹ ಪತ್ತೆಯಾಗಿದ್ದು ತದನಂತರ ಮಕ್ಕಳ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.