Chhattisgarh | ತಲೆಗೆ 11 ಲಕ್ಷ ಬಹುಮಾನ ಹೊಂದಿದ್ದ ಮೂವರು ಸೇರಿ 8 ನಕ್ಸಲರು ಶರಣು

Public TV
1 Min Read

ರಾಯ್‌ಪುರ್: ಛತ್ತೀಸ್‌ಗಢದ (Chhattisgarh) ಬಿಜಾಪುರ ಜಿಲ್ಲೆಯಲ್ಲಿ ‌8 ನಕ್ಸಲರು (Naxalites) ಪೊಲೀಸರಿಗೆ (Police) ಶರಣಾಗಿದ್ದಾರೆ. ಅವರಲ್ಲಿ ಮೂವರ ತಲೆಗೆ 11 ಲಕ್ಷ ರೂ. ನಗದು ಬಹುಮಾನವನ್ನು ಘೋಷಿಸಲಾಗಿತ್ತು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಓರ್ವ ಮಹಿಳೆ ಸೇರಿದಂತೆ 8 ನಕ್ಸಲರು ಗಂಗಲೂರು ಮತ್ತು ಉಸೂರ್ ಪಮೇಡ್ ಪ್ರದೇಶಗಳಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಮಾವೋವಾದಿ) ವಿವಿಧ ವಿಭಾಗಗಳಲ್ಲಿ ಸಕ್ರಿಯರಾಗಿದ್ದರು ಎಂದು ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಯಾದವ್ ಹೇಳಿದ್ದಾರೆ. ಇದನ್ನೂ ಓದಿ: ಅಮರ್ ಪ್ರೀತ್ ಸಿಂಗ್ ವಾಯುಸೇನಾ ಮುಖ್ಯಸ್ಥರಾಗಿ ನೇಮಕ

ಶರಣಾದ ನಕ್ಸಲ್‌ ಚಂದರ್ ಕುರ್ಸಮ್ (38) ಕಮಾಂಡರ್ ಆಗಿದ್ದು, ಅವನ ತಲೆಗೆ 8 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಆತ 2003 ರಿಂದ ಕಾನೂನುಬಾಹಿರ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ. 2008 ರ ಮೋದಕ್‌ಪಾಲ್-ತುಂಕಿಗುಟ್ಟಾ (ಬಿಜಾಪುರ) ದಾಳಿಯಲ್ಲಿ 10 ಪೊಲೀಸ್ ಸಿಬ್ಬಂದಿ ಮತ್ತು ನೂಕನ್‌ಪಾಲ್-ಧಾರಾವರಂ ಹೊಂಚುದಾಳಿಯಲ್ಲಿ ಇಬ್ಬರು ಜವಾನರು ಕೊಲ್ಲಲ್ಪಟ್ಟ ಪ್ರಕರಣದಲ್ಲಿ ಭಾಗಿಯಾಗಿದ್ದ.

ಮಹಿಳಾ ಕೇಡರ್ ಮಾಂಗ್ಲಿ ಪೋತಮ್ (25), ಮತ್ತು ಆಯ್ತು ಕೊರ್ಸಾ (52) ಮಂಕೇಲಿ ‘ಜನ್ತಾನ ಸರ್ಕಾರ್’ ತಂಡದ ಮುಖ್ಯಸ್ಥರಾಗಿದ್ದರು. ಪೋತಮ್ ಮತ್ತು ಕೊರ್ಸಾ ತಲೆಗೆ ಕ್ರಮವಾಗಿ 2 ಲಕ್ಷ ರೂ. ಮತ್ತು 1 ಲಕ್ಷ ರೂ. ನಗದು ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಶರಣಾದ ನಕ್ಸಲೀಯರಿಗೆ ತಲಾ 25,000 ರೂ. ನೆರವು ನೀಡಲಾಗಿದ್ದು, ರಾಜ್ಯ ಸರ್ಕಾರದ ನೀತಿಯಂತೆ ಮತ್ತಷ್ಟು ಪುನರ್ವಸತಿ ಕಲ್ಪಿಸಲಾಗುತ್ತದೆ. ಜಿಲ್ಲೆಯಲ್ಲಿ ಈ ವರ್ಷ ಇದುವರೆಗೆ 178 ನಕ್ಸಲೀಯರು ಶರಣಾಗಿದ್ದು, 378 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರೈಲು ಹಳಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು- ಫಿಶ್‌ ಪ್ಲೇಟ್‌ ಕತ್ತರಿಸಿದ ದುಷ್ಕರ್ಮಿಗಳು

Share This Article