ಪತ್ನಿಯ ಕುತ್ತಿಗೆಯನ್ನು 3 ತುಂಡು ಮಾಡಿದ ಪತಿರಾಯ!

Public TV
2 Min Read

– ಅಕ್ರಮ ಸಂಬಂಧ ಹೊಂದಿದ್ದಕ್ಕೆ ಕೊಲೆ
– ದಾರಿ ಮಧ್ಯೆಯೇ ಹೆಂಡ್ತಿಯ ಹತ್ಯೆಗೈದ

ಚೆನ್ನೈ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆಗೈದು ಬಳಿಕ ಪೊಲೀಸರಿಗೆ ಶರಣಾದ ವಿಲಕ್ಷಣ ಘಟನೆಯೊಂದು ತಮಿಳುನಾಡಿನ ತಿರುನೆಲ್ ವಳ್ಳಿ ಎಂಬಲ್ಲಿ ನಡೆದಿದೆ.

ಪತ್ನಿ ರಾಮ್ಲತಾಳನ್ನು ಪತಿ ಸೊರಿಮುತ್ತು ಕೊಲೆ ಮಾಡಿದ್ದಾನೆ. ಸೊರಿಮುತ್ತು ತಿರುನೆಲ್ವೇಲಿಯ ತಲೈತು ಸಮೀಪದ ಕುರಿಚಿಕುಲಂ ಗ್ರಾಮದವನಾಗಿದ್ದು, ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ.

ಸೊರಿಮುತ್ತು ಈ ಹಿಂದೆ ಕೇರಳದಲ್ಲಿ ಕೆಲಸ ಮಾಡುತ್ತಿದ್ದನು. ಈ ವೇಲೆ ಆತನಿಗೆ ರಾಮ್ಲತಾ ಎಂಬಾಕೆಯ ಮೇಲೆ ಪ್ರೇಮಾಂಕುರವಾಗಿದೆ. ಅಲ್ಲದೆ ಆಕೆಯನ್ನು ಮದುವೆ ಕೂಡ ಮಾಡಿಕೊಂಡಿದ್ದಾನೆ. ನಂತರ ಕೆಲ ವರ್ಷಗಳ ಬಳಿಕ ದಂಪತಿ ಸೊರಿಮುತ್ತು ಸ್ವಗ್ರಾಮಕ್ಕೆ ವಾಪಸ್ ಆಗಿದ್ದಾರೆ. ಆ ನಂತರ ದಂಪತಿಗೆ ಇಬ್ಬರು ಮಕ್ಕಳು ಹುಟ್ಟಿದರು. ಆದರೆ ಸೊರಿಮುತ್ತು ಮಾತ್ರ ಕೆಲಸಕ್ಕಾಗಿ ಮತ್ತೆ ಕೇರಳಕ್ಕೆ ತೆರಳಬೇಕಾಗಿತ್ತು.

ಕೋಣೆಯೊಳಗೆ ಕೂಡಾಕಿದ್ದ ಆರೋಪಿ ಕುಟುಂಬ:
ಪತಿ ಕೆಲಸಕ್ಕೆ ಕೇರಳಕ್ಕೆ ತೆರಳಿದ ಬಳಿಕ ಇತ್ತ ರಾಮ್ಲತಾಳಿಗೆ ಅದೇ ಗ್ರಾಮದ ಮತ್ತೊಬ್ಬ ವ್ಯಕ್ತಿಯ ಜೊತೆ ಸಂಬಂಧ ಬೆಳೆದಿದೆ. ಈ ವಿಚಾರ ಸೊರಿಮುತ್ತು ಕುಟುಂಬದವರ ಗಮನಕ್ಕೆ ಬಂದಿದೆ. ಅಲ್ಲದೆ ಈ ಬಗ್ಗೆ ಸೊರಿಮುತ್ತುಗೂ ಮಾಹಿತಿ ನೀಡಿದ್ದಾರೆ.

ಇತ್ತ ಸೊರಿಮುತ್ತು ಕುಟುಂಬಸ್ಥರು ಸೇರಿ ರಾಮ್ಲಾತಾಳನ್ನು ಮನೆಯ ಕೋಣೆಯಲ್ಲಿ ಲಾಕ್ ಮಾಡಿದ್ದಾರೆ. ಆದರೆ ಸೋಮವಾರ ರಾಮ್ಲಾತಾ ಹೆಂಗೋ ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಈ ವೇಳೆ ಸೊರಿಮುತ್ತು ಕುಟುಂಬಸ್ಥರು ಮಹಿಳೆ ನಾಪತ್ತೆ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ರಾಮ್ಲತಾಳಿಗಾಗಿ ಹುಡುಕಾಟ ಆರಂಭಿಸಿದ್ದು, ಸೊರಿಮುತ್ತು ಕೂಡ ಕೇರಳದಿಂದ ವಾಪಸ್ ಆಗಿದ್ದಾನೆ. ಅಲ್ಲದೆ ಪತ್ನಿಯನ್ನು ಫೋನ್ ಮೂಲಕ ಸಂಪರ್ಕಿಸಿದ್ದಾನೆ. ಈ ಬೆನ್ನಲ್ಲೇ ಸೋರಿಮುತ್ತು ಮಂಗಳವಾರ ಕೋವಿಡ್ 19 ಪರೀಕ್ಷೆಗಾಗಿ ತಿರುನೆಲ್ವೇಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತೆರಳಿದ್ದಾನೆ. ಅಲ್ಲಿ ಪತ್ನಿಯನ್ನು ಭೇಟಿಯಾಗಿದ್ದಾನೆ. ಬಳಿಕ ಬುಧವಾರ ಮಧ್ಯಾಹ್ನ 12.30ರ ಸುಮಾರಿಗೆ ತನ್ನ ಪತ್ನಿಯೊಂದಿಗೆ ಸೊರಿಮುತ್ತು ಮನೆಗೆ ವಾಪಸ್ಸಾಗುವಾಗ ದಾರಿ ಮಧ್ಯೆ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.

ಹಲ್ಲೆಯ ಪರಿಣಾಮ ರಾಮ್ಲತಾ ಕುತ್ತಿಗೆ 3 ಪೀಸ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಪ್ರಕರಣ ದಾಖಲಿಸಲಾಗಿದೆ ಎಂದು ಡಿಎಸ್‍ಪಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *