ಪೌರತ್ವ ಕಾಯ್ದೆ ವಿರುದ್ಧ ರಂಗೋಲಿ ಪ್ರತಿಭಟನೆ – 8 ಮಂದಿ ವಶಕ್ಕೆ

Public TV
1 Min Read

ಚೆನ್ನೈ: ಪೌರತ್ವ ಕಾಯ್ದೆ ಮತ್ತು ಎನ್‍ಆರ್‍ಸಿ ವಿರುದ್ಧ ರಸ್ತೆಯಲ್ಲಿ ರಂಗೋಲಿ ಬರೆದು ಪ್ರತಿಭಟನೆ ಮಾಡುತ್ತಿದ್ದ ಐದು ಜನ ಮಹಿಳೆಯರು ಸೇರಿ ಎಂಟು ಜನರನ್ನು ಚೆನ್ನೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಂದು ದಕ್ಷಿಣ ಚೆನ್ನೈನ ಬೆಸೆಂಟ್ ನಗರ ಪ್ರದೇಶದಲ್ಲಿ ಎಂಟು ಜನರ ತಂಡವೊಂದು ಪೌರತ್ವ ವಿಧೇಯಕ ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ ವಿರುದ್ಧ ರಂಗೋಲಿ ಬರೆದು ಪ್ರತಿಭಟನೆ ಮಾಡಿದ್ದಕ್ಕೆ ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದಾರೆ.

ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಚೆನ್ನೈ ದಕ್ಷಿಣ ಪ್ರಾಂತ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ದಕ್ಷಿಣ ಚೆನ್ನೈನ ಬೆಸೆಂಟ್ ನಗರದಲ್ಲಿ ಅನುಮತಿ ಇಲ್ಲದೆ ಪೌರತ್ವ ಕಾಯ್ದೆಯ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಐದು ಜನ ಮಹಿಳೆಯರನ್ನು ಸೇರಿ ಒಟ್ಟು ಎಂಟು ಜನರನ್ನು ವಶಕ್ಕೆ ಪಡೆದಿದ್ದೇವೆ. ಪೌರತ್ವ ಕಾಯ್ದೆ ವಿರುದ್ಧ ರಂಗೋಲಿ ಬಿಟ್ಟು ಪ್ರತಿಭಟನೆ ಮಾಡಿ ಸಮಾಜದ ಶಾಂತಿಯನ್ನು ಹಾಳು ಮಾಡಲು ಯತ್ನಿಸುತ್ತಿದ್ದ 8 ಜನರನ್ನು ವಶಕ್ಕೆ ಪಡೆದು ನಂತರ ಬಿಟ್ಟು ಕಳುಹಿಸಿದ್ದೇವೆ ಎಂದು ಹೇಳಿದ್ದಾರೆ.

ಪೌರತ್ವ ಕಾಯ್ದೆ ವಿರೋಧ ಮಾಡುತ್ತಿದ್ದ ಎಂಟು ಜನರ ವಶಕ್ಕೆ ಪಡೆದು ನಂತರ ಅವರಿಗೆ ಈ ರೀತಿಯ ಅನುಮತಿ ಇಲ್ಲದೇ ಪ್ರತಿಭಟನೆ ಮಾಡಬೇಡಿ ಎಂದು ಎಚ್ಚರಿಕೆ ಕೊಟ್ಟು ಬಿಟ್ಟು ಕಳುಹಿಸಲಾಗಿದೆ. ಆದರೆ ಅವರು ಪೊಲೀಸರು ನಮ್ಮ ಮೇಲೆ ಹಲ್ಲೆ ಮಾಡಿದರು ಮತ್ತು ನಮ್ಮ ಮೊಬೈಲ್ ಫೋನ್ ಗಳನ್ನು ಕಿತ್ತುಕೊಂಡಿದ್ದರು ಎಂದು ಆರೋಪ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚೆನ್ನೈನಲ್ಲಿ ಪೌರತ್ವ ವಿರುದ್ಧದ ಪ್ರತಿಭಟನೆಯ ಕಿಚ್ಚು ಇನ್ನು ಕಮ್ಮಿ ಆಗಿಲ್ಲ. ಕಾಯ್ದೆ ವಿರೋಧಿಸಿ, ರಾಜಕೀಯೇತರ ಇಸ್ಲಾಮಿಕ್ ಸಂಘಟನೆಯಾದ ತಮಿಳುನಾಡು ಥೌಹೀದ್ ಜಮಾತ್ (ಟಿಎನ್‍ಟಿಜೆ) ಶನಿವಾರ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿತ್ತು. ಪ್ರತಿಭಟನಾಕಾರರು ತಮ್ಮ ತಲೆಯ ಮೇಲೆ ದೊಡ್ಡದಾದ ರಾಷ್ಟ್ರೀಯ ಧ್ವಜವನ್ನು ಇಟ್ಟುಕೊಂಡು ಅಲಂದೂರಿನಿಂದ ಚೆನ್ನೈನ ರಾಜ್ ಭವನದವರೆಗೆ ಮೆರವಣಿಗೆ ನಡೆಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *