ಕೆಮಿಕಲ್ ಸೋರಿಕೆಯಿಂದ ಸುಟ್ಟು ಕರಕಲಾದ ಮರಗಳು

Public TV
1 Min Read

ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಕೆಮಿಕಲ್ ಸಾಗಿಸುತ್ತಿದ್ದ ಲಾರಿಯಿಂದ ಕೆಮಿಕಲ್ ಸೋರಿಕೆಯಾಗಿ ಮರಗಳು ಸುಟ್ಟು ಹೋಗಿರುವ ಘಟನೆ ಕಾಳಿ ನದಿಯ ಬಳಿ ನಡೆದಿದೆ.

ಕೈಗಾಗೆ ಹೋಗಬೇಕಿದ್ದ ಲಾರಿ ದಾರಿ ತಪ್ಪಿ ಕದ್ರಾ ಕಡೆ ಬಂದಿದೆ. ಕೈಗಾ ಕಡೆ ಲಾರಿ ತಿರುಗಿಸುವಾಗ ಕೆಮಿಕಲ್ ಸೋರಿಕೆಯಾಗಿ ಮರಗಳು ಸುಟ್ಟು ಹೋಗಿವೆ. ಪಕ್ಕದಲ್ಲೇ ಹರಿಯುತ್ತಿದ್ದ ನೀರಿಗೂ ಕೆಮಿಕಲ್ ಸೇರಿಕೊಂಡಿದೆ. ಇದರಿಂದ ನೂರಾರು ಮೀನುಗಳು ಸಾವನ್ನಪ್ಪಿವೆ ಹಾಗೂ ಒಂದು ಎಮ್ಮೆ ಸತ್ತಿದೆ ಎಂದು ತಿಳಿದುಬಂದಿದೆ.

ಕದ್ರಾ ಗ್ರಾಮಕ್ಕೆ ಸರಬರಾಜಾಗುವ ಕುಡಿಯುವ ನೀರು ಇದಾಗಿದ್ದು, ಮುನ್ನೇಚ್ಚರಿಕಾ ಕ್ರಮವಾಗಿ ಗ್ರಾಮಕ್ಕೆ ಎರಡು ದಿನ ಕುಡಿಯುವ ನೀರನ್ನು ಸ್ಥಗಿತಗೊಳಿಸಿದ್ದಾರೆ. ನೀರಿನ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕದ್ರಾ ಗ್ರಾಮದಲ್ಲಿ ಸುಮಾರು 5 ಸಾವಿರ ಜನ ವಾಸಮಾಡುತ್ತಾರೆ. ಎರಡು ದಿನ ಕುಡಿಯುವ ನೀರನ್ನು ಸ್ಥಗಿತ ಮಾಡಿದಲ್ಲಿ ತೊಂದರೆಯಾಗುತ್ತದೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಗ್ರಾಮಸ್ಥರು ಅಳಲನ್ನು ತೋಡಿಕೊಂಡಿದ್ದಾರೆ.

ಕರ್ನಾಟಕ ವಿದ್ಯುತ್ ನಿಗಮ, ಎನ್ ಪಿ ಸಿ ಕಾಲೋನಿಗಳು ಇದೇ ಗ್ರಾಮದಲ್ಲಿ ಇವೆ. ಎರಡು ದಿನ ಕುಡಿಯುವ ನೀರನ್ನು ಬಂದ್ ಮಾಡಿದಲ್ಲಿ ಬೇರೆ ನೀರಿನ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಲಾರಿ ಸಿಬ್ಬಂದಿಗಳು ಸೋರಿಕೆಯನ್ನು ಸರಿಪಡಿಸಿಕೊಂಡು ಸ್ಥಳದಿಂದ ಹೊರಟು ಹೋಗಿದ್ದಾರೆ. ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಯಾವುದೇ ದೂರು ದಾಖಲಾಗಿಲ್ಲ.

Share This Article
Leave a Comment

Leave a Reply

Your email address will not be published. Required fields are marked *