ಹಸಿವು ತಾಳಲಾಗದೇ ಮನೆಯಂಗಳದಲ್ಲಿ ಎದ್ದು ಬಿದ್ದು ಒದ್ದಾಡಿ ಚಿರತೆ ಸಾವು: ವಿಡಿಯೋ ನೋಡಿ

Public TV
1 Min Read

ಉಡುಪಿ: ಹೆಣ್ಣು ಚಿರತೆಯೊಂದು ಮನೆಯಂಗಳದಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಎರ್ಲಪ್ಪಾಡಿಯಲ್ಲಿ ನಡೆದಿದೆ. ಈ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ.

ತಾಲೂಕಿನ ಎರ್ಲಪ್ಪಾಡಿ ಗ್ರಾಮದ ಕಾಂತರಗೋಡಿಯ ವಿಲಿಎಂ ಎಂಬವರ ಮನೆಯ ಅಂಗಳಕ್ಕೆ ದೊಡ್ಡ ಗಾತ್ರದ ಹೆಣ್ಣು ಚಿರತೆಯೊಂದು ಏಕಾಏಕಿ ಬಂದಿದೆ. ಆದರೆ ಚಿರತೆಗೆ ಇರಬೇಕಾದ ಘರ್ಜನೆ ಮಾತ್ರ ಮನೆಗೆ ಬಂದ ಚಿರತೆಗೆ ಇರಲಿಲ್ಲ. ಬದಲಾಗಿ ಚಿರತೆ ತಲೆ ಸುತ್ತು ಬಂದವರಂತೆ ಬೀಳುತ್ತಿತ್ತು. ಮತ್ತೆ ಏಳಲು ಪ್ರಯತ್ನ ಮಾಡಿ ಮತ್ತೆ ಮತ್ತೆ ಬೀಳುತ್ತಿತ್ತು. ಸುಮಾರು 10 ರಿಂದ 15 ನಿಮಿಷಗಳ ಕಾಲ ಎಲ್ಲರ ಕಣ್ಣಮುಂದೆಯೇ ಒದ್ದಾಡಿ, ಕೊನೆಗೆ ಸತ್ತುಹೋಗಿದೆ.

ಕೂಡಲೇ ವಿಲಿಯಂ ಅವರು ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಬರುಷ್ಟರಲ್ಲಿ ಚಿರತೆ ಸಾವನ್ನಪ್ಪಿದೆ. ಅರಣ್ಯ ಇಲಾಖೆ ಚಿರತೆಯ ಮೃತದೇಹವನ್ನು ಪರೀಕ್ಷೆ ಮಾಡಿದ್ದು, ಚಿರತೆ ಹೊಟ್ಟೆಯಲ್ಲಿ ಹುಲ್ಲು ಕಂಡುಬಂದಿದೆ. ತೀವ್ರ ಹಸಿವಿನಿಂದ ಚಿರತೆ ಬಳಲುತ್ತಿದ್ದು, ಹಸಿವು ತಾಳಲಾರದೆ ಹುಲ್ಲನ್ನು ತಿಂದಿರಬಹುದು. ಜೊತೆಗೆ ಹಸಿವು ಜೋರಾಗಿ ಸತ್ತಿರಬಹುದು ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

ಇನ್ನೂ ಕಾರ್ಕಳ ತಾಲೂಕಿನ ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮತ್ತೊಂದು ಗಂಡು ಚಿರತೆಯ ಮೃತದೇಹ ಪತ್ತೆಯಾಗಿದೆ. ಎರಡು ಚಿರತೆಗಳು ಒಟ್ಟೊಟ್ಟಿಗೆ ಸತ್ತಿರುವುದರಿಂದ ವಿಷಾಹಾರವನ್ನು ತಿಂದಿರಬಹುದು ಎಂಬ ಶಂಕೆಯಿದೆ. ಅಂತಿಮ ಮರಣೋತ್ತರ ವರದಿ ಬಂದ ಮೇಲೆ ಚಿರತೆಗಳ ಸಾವಿಗೆ ನಿಖರ ಕಾರಣ ತಿಳಿಯಬಹುದು ಎಂದು ಅರಣ್ಯಾಧಿಕಾರಿಗಳ ಹೇಳಿದ್ದಾರೆ.

ಬೆಳೆ ನಾಶ ಮಾಡಲು ಬರುವ ಕಾಡು ಹಂದಿಗಳಿಗೆ ಹಳ್ಳಿಕಡೆ ವಿಷಾಹಾರ ಇಡಲಾಗುತ್ತದೆ. ಈ ಎರಡು ಚಿರತೆಗಳು ವಿಷಾಹಾರ ಸೇವನೆ ಮಾಡಿರಬಹುದು ಎಂಬ ಸಂಶಯ ಇದೆ. ವಿಷಾಹಾರ ತಿಂದು ಎರ್ಲಪ್ಪಾಡಿವರೆಗೆ ಚಿರತೆ ಬಂದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಎರಡು ಜೊತೆಗೆ ಓಡಾಡುತ್ತಿದ್ದ ಚಿರತೆಗಳು ಒಂದೇ ಕಡೆ ವಿಷ ತಿಂದು ಸತ್ತಿರಬಹುದು ಎಂದು ಹೇಳಲಾಗುತ್ತಿದೆ.

https://www.youtube.com/watch?v=kNIncCNQCuU

Share This Article
Leave a Comment

Leave a Reply

Your email address will not be published. Required fields are marked *