ಚಿರತೆಗೆ ಮತ್ತೊಂದು ಬಲಿ- ಎರಡೂವರೆ ವರ್ಷದ ಮಗುವನ್ನ ಕೊಂದು ತಿಂದ ಚೀತಾ

Public TV
1 Min Read

– ಹೆತ್ತವರ ಆಕ್ರಂದನ, ಸಚಿವರ ಭೇಟಿ ಸಾಂತ್ವನ

ತುಮಕೂರು: ಜಿಲ್ಲೆಯ ತುಮಕೂರು ತಾಲೂಕಿನಲ್ಲಿ ಚಿರತೆ ಮತ್ತೆ ಅಟ್ಟಹಾಸ ಮೆರೆದಿದ್ದು, ಆಟವಾಡುತ್ತಿದ್ದ ಕಂದಮ್ಮನನ್ನ ಎಳೆದುಕೊಂಡು ಹೋಗಿ ಕೊಂದು ತಿಂದಿದೆ.

ಚಂದನಾ ಮೃತ ಮಗು. ತುಮಕೂರು ತಾಲೂಕಿನ ಹೆಬ್ಬರೂ ಹೋಬಳಿಯ ಬೈಚೇನಳ್ಳಿಯ ತೋಟದ ಮನೆಯ ಶ್ರೀನಿವಾಸ್ ಹಾಗೂ ಶಿಲ್ಪಾ ದಂಪತಿಯ ಮಗಳು ಚಂದನಾ ಮನೆ ಅಂಗಳದಲ್ಲಿ ಆಡುತ್ತಿದ್ದಳು. ಏಕಾಏಕಿ ಚಿರತೆ ಬಂದು ಆಡಾವಾಡುತ್ತಿದ್ದ ಕಂದಮ್ಮನನ್ನ ನೋಡನೋಡುತ್ತಲೇ ಎಳೆದುಕೊಂಡು ಹೋಗಿದೆ.

ತಾಯಿ ಕಾಪಾಡಿ ಕಾಪಾಡಿ ಎಂದು ಕೂಗಿಕೊಂಡರು ಚಿರತೆ ಮಾತ್ರ ಮಗುವಿನ ಎಳೆದುಕೊಂಡು ಹೋಗಿ ಕೊಂದು ತಿಂದಿದೆ. ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ಮಗುವಿನ ಕುತ್ತಿಗೆ ಹಾಗೂ ತುಟಿ ಭಾಗವನ್ನ ಚಿರತೆ ತಿಂದಿದೆ. ಅಲ್ಲದೇ ತೋಟದ ಸುತ್ತಮುತ್ತಲೆಲ್ಲಾ ಎಳೆದಾಡಿದೆ. ಮಗುವಿನ ಅವಸ್ಥೆ ಕಂಡು ತಂದೆ ತಾಯಿ ಇಬ್ಬರು ಬಿಕ್ಕಿಬಿಕ್ಕಿ ಅತ್ತಿದ್ದಾರೆ.

ಅರಣ್ಯಾಧಿಕಾರಿಗಳಿಗೆ ಈ ಮುಂಚೆಯೇ ಇಲ್ಲೊಂದು ಬೋನ್ ಇಡುವಂತೆ ಮನವಿ ಮಾಡಿದ್ವಿ. ಆದರೆ ಅರಣ್ಯಾಧಿಕಾರಿಗಳು ಗಮನ ಕೊಡಲಿಲ್ಲ. ರಾತ್ರಿಯೂ ಕೂಡ ಏನಾಗಿದೆ ಅಂತ ನೋಡಿಲ್ಲ ಎಂದು ಚಂದನಾಳ ತಂದೆ ಶ್ರೀನಿವಾಸ್ ಅರಣ್ಯ ಇಲಾಖೆಯ ಮೇಲೆ ಅಕ್ರೋಶ ವ್ಯಕ್ತಪಡಿಸಿದರು.

ಮಧ್ಯರಾತ್ರಿಯಲ್ಲೇ ಮಾಜಿ ಶಾಸಕ ಸುರೇಶ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಚಂದನಾಳ ತಂದೆ-ತಾಯಿಗೆ ಧೈರ್ಯ ತುಂಬಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅರಣ್ಯ ಸಚಿವ ಆನಂದ್ ಸಿಂಗ್ ಬರುತ್ತಾರೆ. ಆ ನರಭಕ್ಷಕ ಚಿರತೆಗೆ ಶೂಟ್ ಅಟ್ ಸೈಟ್ ಆರ್ಡರ್ ಇಲ್ಲಿಯೇ ಕೊಡುತ್ತಾರೆ ಎಂದು ಭರವಸೆ ನೀಡಿದ್ದಾರೆ.

ಶ್ರೀನಿವಾಸ್‍ಗೆ ಇಬ್ಬರು ಮಕ್ಕಳು, ಒಬ್ಬಳಿಗೆ ಐದು ವರ್ಷ ಹಾಗೂ ಈಗ ಮೃತ ಪಟ್ಟಿರುವ ಚಂದನಾಗೆ ಇನ್ನೂ ಎರಡೂವರೆ ವರ್ಷ. ಕಳೆದ ವಾರ ಊರ ಹಬ್ಬಕ್ಕೆ ಬಂದಿದ್ದ ಚಂದನಾ ಇಲ್ಲಿಯೇ ಇದ್ದಳು. ಕಳೆದ ತಿಂಗಳು ಒಬ್ಬ ಬಾಲಕನನ್ನು ಚಿರತೆ ಬಲಿ ತೆಗೆದುಕೊಂಡಿತ್ತು. ಒಟ್ಟು 6 ತಿಂಗಳಲ್ಲಿ ಮೂವರ ಬಲಿಪಡೆದಿದೆ ನರಭಕ್ಷಕ ಚೀತಾ. ಅರಣ್ಯ ಇಲಾಖೆ ಮಾತ್ರ ಯಾವುದೇ ಕ್ರಮವನ್ನು ಕೈಗೊಂಡಿಲ್ಲ.

Share This Article
Leave a Comment

Leave a Reply

Your email address will not be published. Required fields are marked *