ಬಾಲಕಿಯರ ಹಾಸ್ಟೆಲ್‌ನಲ್ಲಿ ಅವ್ಯವಸ್ಥೆ – ವಾರ್ಡನ್‌ಗೆ ನೋಟಿಸ್ ಜಾರಿ ಮಾಡಲು ಜಿಪಂ ಸಿಇಓ ಸೂಚನೆ

Public TV
2 Min Read

– ಅವ್ಯವಸ್ಥೆ ಸರಿಪಡಿಸಲು ಒಂದು ವಾರ ಗಡುವು

ಮಂಡ್ಯ: ಇಲ್ಲಿನ ಜಿಪಂ ಸಿಒಓ ಕೆ.ಆರ್ ನಂದಿನಿ ಅವರು ಮದ್ದೂರು ತಾಲ್ಲೂಕಿನ ಅಣ್ಣೂರು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಕ್ಕೆ (Hostel) ಶುಕ್ರವಾರ ದಿಢೀರ್ ಭೇಟಿ ನೀಡಿದ್ದಾರೆ. ವಿದ್ಯಾರ್ಥಿನಿಲಯದಲ್ಲಿ ಅವ್ಯವಸ್ಥೆಗಳನ್ನು ಪರಿಶೀಲಿಸಿ ವಾರ್ಡನ್‌ಗೆ ನೋಟಿಸ್ ಜಾರಿ ಮಾಡುವಂತೆ ಮದ್ದೂರು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ವಿದ್ಯಾರ್ಥಿಗಳು ಯಾವುದೇ ತೊಂದರೆ ಇಲ್ಲದೇ ವಿದ್ಯಾಭ್ಯಾಸ ನಡೆಸಬೇಕು ಎಂದು ಸರ್ಕಾರ ಮೆಟ್ರಿಕ್ ಪೂರ್ವ, ನಂತರದ ವಿದ್ಯಾರ್ಥಿ ನಿಲಯಗಳನ್ನು ನಡೆಸುತ್ತಿದೆ. ವಿದ್ಯಾರ್ಥಿಗಳಿಗೆ ಸರಿಯಾದ ಸೌಲಭ್ಯ ನೀಡದೇ ಇದ್ದರೆ ಅವರ ಆರೋಗ್ಯ ಮತ್ತು ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ವಿದ್ಯಾರ್ಥಿ ನಿಲಯಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಯೋಜಿಸಿದ್ದಾರೆ. ಇದನ್ನೂ ಓದಿ: 2ನೇ ಗಂಡನೊಂದಿಗೆ ನಂಟು -3ನೇ ಗಂಡನಿಂದ ಪತ್ನಿ ಸೇರಿ ನಾಲ್ವರ ಬಾಳಿಗೆ ಕತ್ತಿಯೇಟು

ಅಣ್ಣೂರು ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ನೀಡುವ ಆಹಾರ ಶುಚಿ ಹಾಗೂ ರುಚಿಕರವಾಗಿರುವುದಿಲ್ಲ. ಅವರಿಗೆ ನಿದ್ರೆ ಮಾಡಲು ಹಾಸಿಗೆ ವ್ಯವಸ್ಥೆ ಇರುವುದಿಲ್ಲ. ಸ್ನಾನದ ಕೊಠಡಿಗಳು ಅಶುಚಿತ್ವದಿಂದ ಕೂಡಿರುತ್ತವೆ. ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ವಿಸರ್ಜಿಸಲು ನೀಡಿರುವ ಇನ್ಸಿನೇಟರ್ ಯಂತ್ರ ದುರಸ್ತಿಯಲ್ಲಿರುತ್ತದೆ. ಸ್ನಾನ ಮಾಡಲು ಸರಿಯಾದ ಸಮಯಕ್ಕೆ ನೀರಿನ ವ್ಯವಸ್ಥೆ ಇಲ್ಲದಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದ ಸಿಇಒ ಅವರು ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳಿಗೆ ತಕ್ಷಣ ಎಲ್ಲಾ ಅವ್ಯವಸ್ಥೆಗಳನ್ನು 7 ದಿನದೊಳಗಾಗಿ ಸರಿಪಡಿಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಕೆಲವೇ ದಿನಗಳಲ್ಲಿ ಪುನಃ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಲಿದ್ದು, ಇಂತಹ ಅವ್ಯವಸ್ಥೆಗಳು ಕಂಡುಬಂದಲ್ಲಿ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಲಿಂಗಾಯತರು ಯಡಿಯೂರಪ್ಪ ಜೊತೆಗಿಲ್ಲ, ಜನರೇ ಹೊಸ ಪಕ್ಷ ಕಟ್ಟಲು ಸಲಹೆ ಕೊಡ್ತಿದ್ದಾರೆ – ಯತ್ನಾಳ್‌

ಎಲ್ಲ ವಿದ್ಯಾರ್ಥಿನಿಲಯಗಳಲ್ಲಿ ಸಹಾಯವಾಣಿ:
ಸಮಾಜ ಕಲ್ಯಾಣ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿದ್ಯಾರ್ಥಿ ನಿಲಯಗಳಲ್ಲಿ ಸಹಾಯವಾಣಿ ಸಂಖ್ಯೆಯನ್ನು ಅನಾವರಣಗೊಳಿಸಲಾಗುವುದು. ವಿದ್ಯಾರ್ಥಿಗಳು ಯಾವುದಾದರೂ ವ್ಯವಸ್ಥೆಯಲ್ಲಿ ತೊಂದರೆಯಿದ್ದಲ್ಲಿ ಕರೆ ಮಾಡಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಕೆ.ಆರ್ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ರಾಜೇಂದ್ರ ಹತ್ಯೆಗೆ ಸುಪಾರಿ ಕೇಸ್ – ಪ್ರಭಾವಿಯನ್ನ ನೀವೇ ಹುಡುಕಿ, ನಿಮಗೆ ಸಿಕ್ಕೇ ಸಿಕ್ತಾರೆ: ಸತೀಶ್‌ ಜಾರಕಿಹೊಳಿ

ಅಣ್ಣೂರು ಗ್ರಾಮದಲ್ಲಿ ಅಂಗನವಾಡಿಗೆ ಭೇಟಿ ನೀಡಿ ಅಂಗನವಾಡಿಗಳು ಹೈಟೆಕ್ ರೂಪದಲ್ಲಿ ಮಕ್ಕಳು ಹಾಗೂ ಪೋಷಕರನ್ನು ಆಕರ್ಷಿಸುವ ರೀತಿ ಇರಬೇಕು. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ ಮಕ್ಕಳ ಉತ್ತಮ ಬೆಳವಣಿಗೆಯ ಬಗ್ಗೆ ಸದಾ ನಿಗಾ ವಹಿಸಬೇಕು. ಭಾರತೀನಗರದ ಮಣಿಗೆರೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಬೂದು ನೀರು ತ್ಯಜ್ಯ ನಿರ್ವಹಣೆಯನ್ನು ಪರಿಶೀಲಿಸಿ, ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ತಿಳಿಸಿದರು. ಇದನ್ನೂ ಓದಿ: 1ನೇ ತರಗತಿಗೆ ವಯೋಮಿತಿ ಗೊಂದಲ – ಪರಿಹಾರ ಕೇಳಲು ಬಂದ ಪೋಷಕರ ವಿರುದ್ಧ ಮಧು ಬಂಗಾರಪ್ಪ ಗರಂ!

ಮನರೇಗಾ ಯೋಜನೆಯಡಿ ಕ್ರಿಯಾ ಯೋಜನೆ ರೂಪಿಸಲಾಗಿದ್ದು, ಗ್ರಾಮೀಣ ಭಾಗದ ಜನರಿಗೆ ವರದಾನವಾಗಿರುವ ಮನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅಧಿಕಾರಿಗಳು ಅನುಷ್ಠಾನ ಮಾಡಬೇಕು.

ಯಾರೂ ಕೂಡ ವಲಸೆ ಹೋಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಮಾಡಿಸಿದ್ದು ವಿಜಯೇಂದ್ರ & ಡಿಕೆಶಿ, ಹನಿಟ್ರ್ಯಾಪ್‌ ಕೇಸ್‌ನಲ್ಲೂ ಇದೇ ಟೀಂ ಇದೆ – ಯತ್ನಾಳ್‌ ಬಾಂಬ್‌

Share This Article