ಮುಸ್ಲಿಮ್‌ ಬಾಹುಳ್ಯ ಜಾಗದಲ್ಲಿ ಅಣ್ಣಮ್ಮ ದೇವಿ ಮೆರವಣಿಗೆ – ದಾರಿ ಬದಲಾವಣೆ ಮಾಡುವಂತೆ ಮನವಿ

Public TV
1 Min Read

ಬೆಂಗಳೂರು: ರಾಜ್ಯದಲ್ಲಿ ಧರ್ಮ ದಂಗಲ್ ಬಿಸಿ ಈಗ ಅಣ್ಣಮ್ಮ ದೇವಿ ಮೆರವಣಿಗೆಗೂ ತಟ್ಟಿದೆ. ಮುಸ್ಲಿಮ್‌ ಜನ ನೆಲೆಸಿರುವ ಜಾಗದಲ್ಲಿ ಸಾಗುವ ಅಣ್ಣಮ್ಮ ದೇವಿ ಮೆರವಣಿಗೆಯ ದಾರಿಯನ್ನು ಬದಲಾವಣೆ ಮಾಡಿ ಎಂದು ವ್ಯಕ್ತಿಯೊಬ್ಬರು ಬೆಂಗಳೂರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಗುಲಾಬ್‌ ಪಾಶಾ ಎಂಬವರು ಬೆಂಗಳೂರು ದಕ್ಷಿಣ ಡಿಸಿಪಿಗೆ ಮನವಿ ಮಾಡಿ ಮೆರವಣಿಗೆ ಸಾಗುವ ದಾರಿಯನ್ನು ಬದಲಾವಣೆ ಮಾಡಿ ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಯಲೇಚನಹಳ್ಳಿಯ ಬಿಬಿಎಂಪಿಯ ವಾರ್ಡ್‌ ಬಿಜೆಪಿ ಸದಸ್ಯ ಬಾಲಕೃಷ್ಣ ಅವರ ನೇತೃತ್ವದಲ್ಲಿ ಈ ಮೆರವಣಿಗೆ ಆಯೋಜನೆ ಮಾಡಲಾಗಿದೆ ಎಂದು ಗುಲಾಬ್‌ ಪಾಶಾ ತಿಳಿಸಿದ್ದಾರೆ.  ಇದನ್ನೂ ಓದಿ: ಹುಬ್ಬಳ್ಳಿ ಗಲಭೆಗೆ ಮುಂಬೈ ನಂಟು!

ಮನವಿಯಲ್ಲಿ ಏನಿದೆ?
ಏಪ್ರಿಲ್‌ 23 ಶನಿವಾರ ರಾತ್ರಿ 8 ಗಂಟೆಗೆ ಹಿಂದೂ ಸಂಘಟನೆ ಅಣ್ಣಮ್ಮ ದೇವಿ ಮೆರವಣಿಗೆಯನ್ನು ಆಯೋಜಿಸಿದೆ. ಇಲ್ಲಿಯವರೆಗೆ ಅಣ್ಣಮ್ಮ ದೇವಿ ಮೆರವಣಿಗೆ ಆಯೋಜನೆ ಆಗಿರಲಿಲ್ಲ. ಮೊದಲ ಬಾರಿಗೆ ನಡೆಯುತ್ತಿರುವ ಈ ಮೆರವಣಿಗೆ ಮುಸ್ಲಿಮ್‌ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಫಯಾಜ್‌ಬಾದ್‌ ಮತ್ತು ಕನಕ ನಗರದಲ್ಲಿ ಸಾಗಲಿದೆ. ಕರ್ನಾಟಕ ಮತ್ತು ಭಾರತದ ಹಲವು ಭಾಗದಲ್ಲಿ ಕೋಮು ಸಾಮಾರಸ್ಯಕ್ಕೆ ಧಕ್ಕೆ ಆಗುತ್ತಿರುವ ಹಿನ್ನೆಲೆಯಲ್ಲಿ ನಮಗೆ ಬಹಳ ಹೆದರಿಕೆ ಆಗುತ್ತಿದೆ.

ಮೆರವಣಿಗೆ ಸಾಗುವ ಜಾಗದಲ್ಲಿ ಮಸೀದಿ ಇದೆ. ಅಷ್ಟೇ ಅಲ್ಲದೇ ರಂಜಾನ್‌ ಪ್ರಾರ್ಥನೆ ಸಹ ನಡೆಯುತ್ತಿದೆ. ಹೀಗಾಗಿ ಈ ಕೂಡಲೇ ಫಯಾಜ್‌ಬಾದ್‌ ಮತ್ತು ಕನಕ ನಗರದಲ್ಲಿ ಸಾಗುವ ಮೆರವಣಿಗೆ ದಾರಿಯನ್ನು ಬದಲಾವಣೆ ಮಾಡಬೇಕೆಂದು ಕೇಳಿಕೊಳ್ಳುತ್ತೇವೆ ಎಂದು ಮನವಿ ಮಾಡಲಾಗಿದೆ.

ಹೆಚ್ಚಿನ ಪೊಲೀಸರನ್ನು ನಿಯೋಜಿಸಿ:
ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಜಾಗದಲ್ಲಿ ಅಣ್ಣಮ್ಮ ದೇವಿ ಮೆರವಣಿಗೆ ಸಾಗಲಿದೆ. ರಾತ್ರಿ ಎಂಟು ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಮೆರವಣಿಗೆ ನಡೆಯಲಿದೆ. ಸೂಕ್ಷ್ಮ ಪ್ರದೇಶದಲ್ಲಿ ಮೆರವಣಿಗೆ ನಡೆಯುತ್ತಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಿ ಎಂದು ಜನಾಧಿಕಾರ ಸಂಘರ್ಷ ಪರಿಷತ್‌ ಉಪಾಧ್ಯಕ್ಷ ಅದರ್ಶ ಅಯ್ಯರ್‌ ಪೊಲೀಸ್‌ ಆಯುಕ್ತರಲ್ಲಿ ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *