ಚಂದನ್-ನಿವೇದಿತಾ ನಿಶ್ಚಿತಾರ್ಥ ಮಾಡ್ಕೊಂಡಿರೋದು ಅಕ್ಷಮ್ಯ ಅಪರಾಧ- ವಿ.ಸೋಮಣ್ಣ

Public TV
2 Min Read

– ಅವರಿಬ್ಬರಿಗೂ ಚಾಮುಂಡಿ ತಾಯಿಯೇ 6 ತಿಂಗ್ಳಲ್ಲಿ ಶಿಕ್ಷೆ ನೀಡ್ತಾಳೆ

ಮೈಸೂರು: ಯುವ ದಸರಾ ವೇದಿಕೆಯಲ್ಲಿ ಗಾಯಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಿಶ್ಚಿತಾರ್ಥ ಮಾಡಿಕೊಂಡಿರುವುದು ಅಕ್ಷಮ್ಯ ಅಪರಾಧ. ನಾಡಿನ ಅಧಿದೇವತೆಯ ನಾಡಹಬ್ಬದ ವೇದಿಕೆಯಲ್ಲಿ ಈ ರೀತಿ ಆಗಬಾರದಿತ್ತು ಎಂದು ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕಿಡಿ ಕಾರಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಪ್ಪೆಸಗಿರುವ ಅವರಿಬ್ಬರಿಗೂ ಬರುವ ಆರು ತಿಂಗಳಲ್ಲಿ ದೇವಿಯೇ ಶಿಕ್ಷೆ ನೀಡುತ್ತಾರೆ. ಈ ರೀತಿ ಆಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಇದಕ್ಕೆ ದಸರಾ ಉಪಸಮಿತಿ ಕಾರಣವಲ್ಲ. ಈ ಸಂಬಂಧ ಮೈಸೂರು ಜಿಲ್ಲಾ ಅಧೀಕ್ಷಕ ಹಾಗೂ ಯುವ ದಸರಾ ಉಪಸಮಿತಿಯ ಕಾರ್ಯಾಧ್ಯಕ್ಷರೂ ಆಗಿರುವ ರಿಷ್ಯಂತ್ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಚಂದನ್ ಶೆಟ್ಟಿ ಮತ್ತು ನಿವೇದಿತಾರಿಗೆ ಕಾರಣ ಕೇಳಿ ಪೊಲೀಸ್ ಇಲಾಖೆಯಿಂದ ನೋಟಿಸ್ ನೀಡಲಾಗುತ್ತದೆ ಎಂದು ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಕಳೆದ ರಾತ್ರಿ ಯುವ ದಸರಾ ವೇದಿಕೆಯಲ್ಲಿ ನಡೆದ ಘಟನೆಗೆ ನಾನು ತೀವ್ರ ವಿಷಾದ ವ್ಯಕ್ತಪಡಿಸುತ್ತೇನೆ. ಚಂದನ್ ಶೆಟ್ಟಿ ಸುಸಂಸ್ಕೃತ ವ್ಯಕ್ತಿ ಎಂದುಕೊಂಡಿದ್ದೆ. ಆತ ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುವ ಬೆಂಗಳೂರಿನ ನಾಗರಬಾವಿಯ ನಿವಾಸಿ. ಕಳೆದ ರಾತ್ರಿ ಯುವ ದಸರಾ ವೇದಿಕೆಯಲ್ಲಿ ಆತ ಮಾಡಿರುವುದು ಅತ್ಯಂತ ಹೇಯ ಕೃತ್ಯ ಎಂದು ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ.

ಪಾರಂಪರಿಕ ಮತ್ತು ಸಾಂಪ್ರದಾಯಿಕ ವೇದಿಕೆಯನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳಬಾರದಿತ್ತು. ನಾನು ಸಹ ಯುವ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ನಾನು ಅರಮನೆ ಕಾರ್ಯಕ್ರಮಕ್ಕೆ ಹೊರಡಲು ಮುಂದಾದಾಗ, ಚಂದನ್ ಶೆಟ್ಟಿ, ನಿವೇದಿತಾ ಪೋಷಕರು ನನ್ನನ್ನು ತಡೆದು ಇನ್ನೂ ಸ್ವಲ್ಪ ಸಮಯ ಇರುವಂತೆ ಒತ್ತಾಯಿಸಿದರು. ಆದರೆ ನಾನು ಅರಮನೆಗೆ ಹೋಗಬೇಕಾಗಿದ್ದರಿಂದ ಅಲ್ಲಿಂದ ನಿರ್ಗಮಿಸಿದೆ. ನಾನು ಹೊರಟ ನಂತರ ಈ ಘಟನೆ ನಡೆದಿರುವುದು ನನ್ನ ಗಮನಕ್ಕೆ ಬಂತು ಎಂದು ವಿವರಿಸಿದ್ದಾರೆ.

ಯುವ ದಸರಾ ವೇದಿಕೆಯಲ್ಲಿ ಶುಕ್ರವಾರ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರೂ ಸಹ ಯುವ ದಸರಾ ವೇದಿಕೆಯಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಗಾಯಕ ಚಂದನ್ ಶೆಟ್ಟಿ, ತಪ್ಪಾಗಿದ್ದರೆ ಕ್ಷಮೆ ಇರಲಿ. ಪ್ರೇಮ ನಿವೇದನೆ ಮಾಡಿಕೊಳ್ಳಲು ಒಳ್ಳೆಯ ದಿನ ಅಂದುಕೊಂಡು, ನನ್ನ ಜೀವನದಲ್ಲಿ ಸಹ ಪ್ರಮುಖ ದಿನ ಎಂದುಕೊಂಡು ಮೈಸೂರಿನ ಯುವ ದಸರಾದಲ್ಲಿ ಈ ರೀತಿ ಮಾಡಿದೆ. ನನಗನ್ನಿಸಿದ್ದನ್ನು ನಾನು ಹೇಳಿದೆ, ಈ ಕುರಿತು ತಪ್ಪಾಗಿದ್ದಲ್ಲಿ ಖಂಡಿತವಾಗಿಯೂ ಕ್ಷಮೆ ಕೇಳುತ್ತೇನೆ. ಶುಕ್ರವಾರದ ಆ ಕಾರ್ಯಕ್ರಮಕ್ಕೆ ಸೇರಿದವರಲ್ಲಿ ಬಹುತೇಕರು ನಮ್ಮ ಹಿತೈಶಿಗಳು. ಸಪ್ರ್ರೈಸ್ ಕೊಡಬೇಕು ಎಂದುಕೊಂಡು, ಯುವ ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಿದೆ ಎಂದು ತಿಳಿಸಿದ್ದರು.

ಆಗ ನನ್ನ ಹಾಗೂ ಅಲ್ಲಿ ಸೇರಿದ್ದ ಪ್ರತಿಯೊಬ್ಬರ ಮನಸ್ಸಿನಲ್ಲಿ ಖುಷಿ ಇತ್ತು. ಅಂತಹ ದೊಡ್ಡ ಕಾರ್ಯಕ್ರಮದಲ್ಲಿ ಸಪ್ರ್ರೈಸ್ ನೀಡುವುದರ ಜೊತೆಗೆ ನಮ್ಮಿಬ್ಬರ ಕುರಿತ ಊಹಾಪೋಹಗಳಿಗೆ ಸ್ಪಷ್ಟನೆ ನೀಡಬೇಕಾಗಿತ್ತು. ಈ ರೂಮರ್ಸ್‍ಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ವೇದಿಕೆಯ ಮೇಲೆ ಪ್ರಪೋಸ್ ಮಾಡಿದೆ. ನಾನೂ ಮೈಸೂರಿನಲ್ಲಿಯೇ ಓದಿದವನು, ಹೀಗಾಗಿ ದಸರಾದಲ್ಲಿ ಪ್ರಪೋಸ್ ಮಾಡಿದೆ ಎಂದು ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *