ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾ ಪ್ರಕಟ: ಯಾರಿಗೆ ಸ್ಥಾನ ಸಿಕ್ಕಿದೆ?

Public TV
1 Min Read

ಮುಂಬೈ: ಇಂಗ್ಲೆಂಡ್‍ನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸುವ 15 ಜನ ಸದಸ್ಯರ ಟೀಂ ಇಂಡಿಯಾ ತಂಡ ಪ್ರಕಟವಾಗಿದೆ.

ಎಂಎಸ್ ಕೆ ಪ್ರಸಾದ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ತಂಡವನ್ನು ಪ್ರಕಟಿಸಿದೆ. ತಂಡದಲ್ಲಿ 6 ಜನ ಬ್ಯಾಟ್ಸ್ ಮನ್‍ಗಳಿಗೆ ಸ್ಥಾನ ನೀಡಲಾಗಿದ್ದು, ವಿಕೆಟ್ ಕೀಪರ್, ಆಲ್‍ರೌಂಡರ್ಸ್ ಮತ್ತು ಸ್ಪಿನ್ನರ್ ವಿಭಾಗದಲ್ಲಿ ತಲಾ ಇಬ್ಬರಿಗೆ ಸ್ಥಾನ ಕಲ್ಪಿಸಲಾಗಿದೆ. ಜೊತೆಗೆ ಐವರು ವೇಗಿಗಳನ್ನು ಆಯ್ಕೆ ಸಮಿತಿ ತಂಡದಲ್ಲಿ ಇರಿಸಿದೆ.

ಐಸಿಸಿಯ ನೂತನ ಹಣಕಾಸು ಹಂಚಿಕೆ ನೀತಿಗೆ ವಿರೋಧ ವ್ಯಕ್ತಪಡಿಸಿದ್ದ ಕಾರಣವನ್ನು ಮುಂದಿಟ್ಟುಕೊಂಡು ಬಿಸಿಸಿಐ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಟೀಂ ಇಂಡಿಯಾ ಕಳುಹಿಸಲು ಹಿಂದೇಟು ಹಾಕಿತ್ತು. ಬಳಿಕ ಸುಪ್ರೀಂ ಕೋರ್ಟ್ ನೇಮಿಸಿರುವ ಆಡಳಿತ ಸಮಿತಿಯ ಎಚ್ಚರಿಕೆಯ ನಂತರ ಆಯ್ಕೆ ಸಮಿತಿ ತಂಡವನ್ನು ಪ್ರಕಟಿಸಿದೆ.

ಭುಜದ ನೋವಿಗೆ ತುತ್ತಾಗಿ ಸದ್ಯ ಇಂಗ್ಲೆಂಡಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆಎಲ್ ರಾಹುಲ್ ಫಿಟ್ ಆಗದ ಕಾರಣ ಅವರ ಬದಲಿಗೆ ಅಜಿಂಕ್ಯಾ ರಹಾನೆ ಸ್ಥಾನ ಪಡೆದಿದ್ದಾರೆ. ಆರಂಭಿಕ ಬ್ಯಾಟ್ಸ್ ಮನ್‍ಗಳ ಪೈಕಿ ಗೌತಮ್ ಗಂಭೀರ್ ಮತ್ತು ಶಿಖರ್ ಧವನ್ ನಡುವೆ ಸ್ಪರ್ಧೆ ಇತ್ತು. ಆದರೆ ಆಯ್ಕೆ ಸಮಿತಿ ಶಿಖರ್ ಧವನ್ ಅವರಿಗೆ ಸ್ಥಾನ ನೀಡಿದ್ದಾರೆ.

ಜೂನ್ 1 ರಿಂದ 18ರ ವರೆಗೆ 18 ದಿನಗಳ ಅವಧಿಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‍ನ 3 ಕ್ರಿಕೆಟ್ ಮೈದಾನಗಳಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 ಪಂದ್ಯಗಳು ನಡೆಯಲಿವೆ.

ಟೀಂ ಇಂಡಿಯಾ ತಂಡ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ಅಜಿಂಕ್ಯಾ ರಹಾನೆ, ಧೋನಿ, ಯುವರಾಜ್ ಸಿಂಗ್, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯಾ, ಆರ್. ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ಜಸ್‍ಪ್ರೀತ್ ಬೂಮ್ರಾ ಮತ್ತು ಮನೀಷ್ ಪಾಂಡೆ.

Share This Article
Leave a Comment

Leave a Reply

Your email address will not be published. Required fields are marked *