ರಾಮಮಂದಿರ ಉದ್ಘಾಟನೆಗೆ ಬರಬೇಡಿ – ಅಡ್ವಾಣಿ, ಜೋಶಿಯಲ್ಲಿ ಮನವಿ – ಬರಲಿರುವ VIP ಗಣ್ಯರು ಯಾರು?

Public TV
3 Min Read

– 4,000 ಸಂತರು, 2,200 ಅತಿಥಿಗಳಿಗೆ ಆಹ್ವಾನ
– ಮುಕೇಶ್ ಅಂಬಾನಿ, ಅಮಿತಾಬ್ ಬಚ್ಚನ್, ರಜನಿಕಾಂತ್‌ಗೂ ಆಹ್ವಾನ
– ಅತಿಥಿಗಳ ವಾಸ್ತವ್ಯಕ್ಕೆ 600 ಕೊಠಡಿಗಳ ವ್ಯವಸ್ಥೆ

ಲಕ್ನೋ (ಅಯೋಧ್ಯೆ): ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ಉದ್ಘಾಟನೆಗೆ ದಿನಗಳು ಹತ್ತಿರವಾಗುತ್ತಿದ್ದಂತೆ ಮಹತ್ವದ ಬೆಳವಣಿಗೆಗಳು ಕಂಡುಬರುತ್ತಿವೆ. ಈ ಮಧ್ಯೆ ಉದ್ಘಾಟನಾ ಸಮಾರಂಭಕ್ಕೆ ಬರಬೇಡಿ ಎಂದು ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಬಿಜೆಪಿಯ ಹಿರಿಯ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿ (LK Advani) ಹಾಗೂ ಮುರಳಿ ಮನೋಹರ್ ಜೋಶಿ (Murli Manohar Joshi) ಅವರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿರುವ ಚಂಪತ್ ರೈ, ಆರೋಗ್ಯ ಮತ್ತು ವಯೋಸಹಜ ಕಾರಣಗಳಿಂದಾಗಿ ಮುರಳಿ ಮನೋಹರ್ ಜೋಶಿ ಮತ್ತು ಲಾಲ್ ಕೃಷ್ಣ ಅಡ್ವಾಣಿ ಅವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇಬ್ಬರೂ ಹಿರಿಯರು, ಅವರ ವಯಸ್ಸನ್ನು ಪರಿಗಣಿಸಿ ಉದ್ಘಾಟನಾ ಸಮಾರಂಭಕ್ಕೆ ಬಾರದಂತೆ ಮನವಿ ಮಾಡಿದ್ದೇವೆ. ಅದಕ್ಕೆ ಅವರೂ ಸಮ್ಮತಿ ಸೂಚಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀರಾಮ ಮಂದಿರ ಉದ್ಘಾಟನೆಗೆ 2,500 ಸಂತರಿಗೆ ಆಹ್ವಾನ – ದಂಡ, ಚನ್ವಾರ್, ಛತ್ರ, ಪಾದುಕೆ ತರದಂತೆ ಮನವಿ

ಮುಂದುವರಿದು ಮಾತನಾಡಿ, 2024ರ ಜನವರಿ 15ರ ಒಳಗೆ ಧಾರ್ಮಿಕ ಕಾರ್ಯಕ್ರಮಕ್ಕೆ ಸಂಬಂಧಿಸಿದ ಸಿದ್ಧತೆಗಳು ಪೂರ್ಣಗೊಳ್ಳಲಿವೆ. `ಪ್ರಾಣ ಪ್ರತಿಷ್ಠೆ’ (Pran Pratishtha) ಪೂಜೆಯು ಜನವರಿ 16 ರಂದು ಪ್ರಾರಂಭವಾಗಿ ಜ.22ರ ವರೆಗೆ ನಡೆಯಲಿದೆ. ಸುಮಾರು 150 ಸಂತರು ಮತ್ತು ಋಷಿಮುನಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಂತಶ್ರೇಷ್ಠ ಶಂಕರಾಚಾರ್ಯ ತತ್ವಶಾಸ್ತ್ರ ಪರಂಪರೆಯ 6 ಸಂತರು ಭಾಗವಹಿಸಲಿದ್ದಾರೆ. ಅಷ್ಟುಮಾತ್ರವಲ್ಲದೇ ಸಮಾರಂಭಕ್ಕೆ ಸುಮಾರು 4,000 ಸಂತರು, 2,200 ಅತಿಥಿಗಳನ್ನು ಆಹ್ವಾನಿಸಲಾಗಿದೆ. ಕಾಶಿ ವಿಶ್ವನಾಥ, ವೈಷ್ಣೋದೇವಿಯಂತಹ (Vaishnodevi) ಪ್ರಮುಖ ದೇವಾಲಯಗಳ ಮುಖ್ಯಸ್ಥರು ಮತ್ತು ಧಾರ್ಮಿಕ ಮತ್ತು ಸಾಂವಿಧಾನಿಕ ಸಂಸ್ಥೆಗಳ ಪ್ರತಿನಿಧಿಗಳನ್ನೂ ಆಹ್ವಾನಿಸಲಾಗಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆಗೆ ದಿನಗಣನೆ- ಅಂತಿಮ ಹಂತದಲ್ಲಿ ತಯಾರಿ, ವಿಶೇಷ ಸಾರಿಗೆ ವ್ಯವಸ್ಥೆ

ಅಲ್ಲದೇ, ಆಧ್ಯಾತ್ಮಿಕ ಗುರು ದಲೈಲಾಮಾ, ಕೇರಳದ ಮಾತಾ ಅಮೃತಾನಂದಮಯಿ, ಯೋಗ ಗುರು ಬಾಬಾ ರಾಮ್‌ದೇವ್, ನಟರಾದ ರಜನಿಕಾಂತ್, ಅಮಿತಾಬ್ ಬಚ್ಚನ್, ಮಾಧುರಿ ದೀಕ್ಷಿತ್, ಅರುಣ್ ಗೋವಿಲ್, ಚಲನಚಿತ್ರ ನಿರ್ದೇಶಕ ಮಧುರ್ ಭಂಡಾರ್‌ಕರ್, ಪ್ರಮುಖ ಉದ್ಯಮಿಗಳಾದ ಮುಕೇಶ್ ಅಂಬಾನಿ, ಅನಿಲ್ ಅಂಬಾನಿ, ಖ್ಯಾತ ಚಿತ್ರಕಲಾವಿದ ವಾಸುದೇವ್ ಕಾಮತ್, ಇಸ್ರೋದ ನಿರ್ದೇಶಕ ನೀಲೇಶ್ ದೇಸಾಯಿ ಸೇರಿದಂತೆ ಹಲವು ಖ್ಯಾತ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಅತಿಥಿಗಳ ವಾಸ್ತವ್ಯಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ವಿವಿಧ ಮಠಗಳು, ದೇವಸ್ಥಾನಗಳು ಮತ್ತು ಮನೆಗಳು ಸೇರಿದಂತೆ 600 ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪಟ್ಟಾಭಿಷೇಕದ ನಂತರ ಜನವರಿ 24 ರಿಂದ ಉತ್ತರ ಭಾರತದ ಸಂಪ್ರದಾಯದಂತೆ 48 ದಿನಗಳ ಕಾಲ ಮಹಾಮಂಡಲ ಪೂಜೆ ನಡೆಯಲಿದೆ. ಇದೇ ವೇಳೆ ಜನವರಿ 23 ರಿಂದ ಶ್ರೀಸಾಮಾನ್ಯರು ಶ್ರೀರಾಮನ ದರ್ಶನ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಿನ್ನ ಲೇಪಿತ ಅಮೃತಶಿಲೆಯ ಸಿಂಹಾಸನದ ಮೇಲೆ ತಲೆ ಎತ್ತಲಿದೆ ಶ್ರೀರಾಮನ ಮೂರ್ತಿ

Share This Article