ಕೊರೊನಾ ಭೀತಿ ನಡುವೆ ರಕ್ತದಾನ- ದಾನಿಗಳಿಗೆ ಆರೋಗ್ಯ ಸಚಿವರಿಂದ ಮೆಚ್ಚುಗೆ

Public TV
1 Min Read

– ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದ ಸರ್ಕಾರಿ ನೌಕರರು

ಚಾಮರಾಜನಗರ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ರಕ್ತದ ಕೊರತೆ ಎದುರಾಗಿದೆ. ಲಾಕ್‍ಡೌನ್ ಹಾಗೂ ಕೊರೊನಾ ಬರುತ್ತೆ ಎಂಬ ತಪ್ಪು ಕಲ್ಪನೆಯಿಂದ ರಕ್ತದಾನಿಗಳು ರಕ್ತದಾನಕ್ಕೆ ಮುಂದೆ ಬಾರದೆ ರಕ್ತನಿಧಿ ಕೇಂದ್ರದಲ್ಲಿ ರಕ್ತ ಸಂಗ್ರಹ ಕಡಿಮೆಯಾಗಿದೆ.

ಇದರಿಂದ ಸಿಜೇರಿಯನ್ ನಂತಹ ಪ್ರಕರಣಗಳಲ್ಲಿ ರಕ್ತ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ರಕ್ತದಾನ ಮಾಡುವ ಮೂಲಕ ಜಿಲ್ಲಾ ಸರ್ಕಾರಿ ನೌಕರರು ಮಾನವೀಯತೆ ಮೆರೆದಿದ್ದಾರೆ. ರಕ್ತನಿಧಿ ಕೇಂದ್ರದಲ್ಲಿ ರಕ್ತದ ಕೊರತೆ ಇರುವುದನ್ನು ಅರಿತ ಜಿಲ್ಲಾ ಸರ್ಕಾರಿ ನೌಕರರ ಸಂಘ ಇಂದು ಸ್ವಯಂಪ್ರೇರಿತ ರಕ್ತದಾನ ಆಯೋಜಿಸುವ ಮೂಲಕ ರೋಗಿಗಳ ಸಮಸ್ಯೆಗೆ ಮಿಡಿದಿದೆ.

30ಕ್ಕೂ ಹೆಚ್ಚು ಸರ್ಕಾರಿ ನೌಕರರು ಸಂಕಷ್ಟದ ಸಮಯದಲ್ಲಿ ರಕ್ತದಾನ ಮಾಡಿದ್ದು ಇತರರಿಗೆ ಮಾದರಿಯಾಗಿದ್ದಾರೆ. ಇದೆ ವೇಳೆ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಆರೋಗ್ಯ ಸಚಿವ ಶ್ರೀರಾಮುಲು ರಕ್ತದಾನ ಮಾಡಿದ ನೌಕರರಿಗೆ ಪ್ರಮಾಣ ಪತ್ರ ವಿತರಿಸಿದರಲ್ಲದೆ ನೌಕರರ ಮಾನವೀಯತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *