ಟೀಕೆಗಳಿಗೆ ‘ಯಜಮಾನ’ನ ಪ್ರತಿಕ್ರಿಯೆ

Public TV
1 Min Read

ಬೆಂಗಳೂರು: ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಚುನಾವಣೆ ಪ್ರಚಾರಕ್ಕೆ ಧಮುಕಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಕೆಲವು ಟೀಕೆಗಳು ವ್ಯಕ್ತವಾಗಿವೆ. ಈ ಎಲ್ಲ ಟೀಕೆಗಳಿಗೆ ನಗು ನಗುತ್ತಲೇ ಡಿ ಬಾಸ್ ಪ್ರತಿಕ್ರಿಯೆ ನೀಡಿದ್ದಾರೆ.

ಮನೆಯ ಮೇಲೆ ಕಲ್ಲು ಹೊಡೆದಿದ್ದಕ್ಕೆ ಏನೆಂದು ಪ್ರತಿಕ್ರಿಯೆ ನೀಡಲಿ. ಸಿಎಂ ಕುಮಾರಸ್ವಾಮಿ ಅವರು ಏನೇ ಮಾತನಾಡಿದರು ನಾನು ಕೋಪ, ಬೇಜಾರು ಮಾಡಿಕೊಳ್ಳಲ್ಲ ಎಂದು ಈ ಹಿಂದೆ ಹೇಳಿದ್ದೇನೆ. ಮನೆಯಲ್ಲಿ ದರ್ಶನ್ ಎಂದು ಹೆಸರಿಟ್ಟರು. ಎಲ್ಲರಿಗೂ ಒಂದೊಂದು ಸ್ಟಾರ್ ಪಟ್ಟವನ್ನು ಕೊಟ್ಟಾಗ ನನಗೆ ಚಾಲೆಂಜಿಂಗ್ ಸ್ಟಾರ್ ಎಂದು ಕರೆದರು. ಇಂದು ನಾಡಿನ ಜನತೆಯೇ ನನ್ನನ್ನು ಡಿ ಬಾಸ್ ಎಂದು ಕರೆಯುತ್ತಿದ್ದಾರೆ. ಡಿ-ಬಾಸ್ ಎಂಬುವುದು ಅಭಿಮಾನಿಗಳು ಪ್ರೀತಿಯಿಂದ ನೀಡಿದ ಭಿಕ್ಷೆ. ಈ ಭಿಕ್ಷೆಯನ್ನು ಕೊನೆಯವರೆಗೂ ಇಟ್ಟುಕೊಳ್ಳುತ್ತೇನೆ ಎಂದು ಡಿ ಬಾಸ್ ಯಾರು ಎಂಬ ಸಿಎಂ ಪ್ರಶ್ನೆಗೆ ಉತ್ತರ ನೀಡಿದರು.

ಚುನಾವಣೆಗೆ ಸ್ಫರ್ಧೆ ಮಾಡಿಲ್ಲ, ಕೇವಲ ಸುಮಲತಾರ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ. ಏಪ್ರಿಲ್ 2ರಂದು ಮಂಡ್ಯಕ್ಕೆ ತೆರಳಿ ಸುಮಲತಾರ ಪರವಾಗಿ ಪ್ರಚಾರ ಮಾಡುತ್ತೇನೆ. ಈ ಮೊದಲು ಅಪ್ಪಾಜಿ ಪರ ಪ್ರಚಾರ ಮಾಡಿದಾಗ ಇಷ್ಟೊಂದು ಮಾತುಗಳು ಕೇಳಿರಲಿಲ್ಲ. ಇಂದು ಒಂದು ಕೈ ನಮ್ಮ ಮೇಲೆ ಇಲ್ಲ ಎಂದು ಎಲ್ಲರೂ ಮಾತನಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಸಿಎಂ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದರು.

ಟ್ವಿಟ್ಟರ್‍ನಲ್ಲಿ ಮನವಿ:
ಈ ಚುನಾವಣೆ ಸಮಯದಲ್ಲಿ ಆಪಾದನೆಗಳನ್ನು ಮಾಡುವುದು ಸರ್ವೇ ಸಾಮಾನ್ಯ. ಇದಕ್ಕೆಲ್ಲ ನಾನು ಬೇಜಾರು, ಕೋಪ ಏನು ಮಾಡ್ಕೊಳಲ್ಲ ಅಂತ ಮೊದಲೇ ಹೇಳಿದ್ದೇನೆ. ಅದೇ ರೀತಿ ನನ್ನ ಪ್ರೀತಿಯ ಅಭಿಮಾನಿಗಳು ಸಹ ಏನೇ ಹೇಳಿದರೂ ಅದರ ವಿರುದ್ಧ ಪೋಸ್ಟ್ ಮಾಡುವುದಾಗಲಿ, ವಿಡಿಯೋಗಳಾಗಲಿ ಮಾಡುವ ಗೋಜಿಗೆ ಹೋಗಬೇಡಿ. ಅವೆಲ್ಲದಕ್ಕೂ ಕಿವಿ ಕೊಡದೆ ಶಾಂತಿ ಕಾಪಾಡಿಕೊಂಡು ಆರಾಮಾಗಿರಬೇಕಾಗಿ ನಿಮ್ಮ ನಲ್ಮೆಯ ದಾಸ ಕಳಕಳಿಯ ವಿನಂತಿ ಎಂದು ದರ್ಶನ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *