ಉತ್ತರ ಕರ್ನಾಟಕದ ಜನರ ನೆರವಿಗೆ ನಿಂತ ಚಾಲೆಂಜಿಂಗ್ ಸ್ಟಾರ್

Public TV
2 Min Read

ಬೆಂಗಳೂರು: ವರುಣನ ಅಬ್ಬರ ಹಾಗೂ ಪ್ರವಾಹದ ಮಟ್ಟ ಮೀರಿ ಹರಿಯುತ್ತಿರುವ ನದಿಗಳಿಂದ ತತ್ತರಿಸಿರುವ ಉತ್ತರ ಕರ್ನಾಟಕದ ಜನರ ನೆರವಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿಂತಿದ್ದಾರೆ.

ಪ್ರವಾಹ ಪೀಡಿತ ಪ್ರದೇಶದ ಜನರಿಗೆ ತಲುಪಿಸಲು ಅಗತ್ಯ ವಸ್ತುಗಳನ್ನು ನೀಡುವಂತೆ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳು ಹಾಗೂ ಜನರಿಗೆ ದರ್ಶನ್ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ತಮ್ಮ ತಂಡವನ್ನು ಸಂಪರ್ಕಿಸಲು ದೂರವಾಣಿ ಸಂಖ್ಯೆಯನ್ನು ನೀಡಿದ್ದಾರೆ. ದರ್ಶನ್ ಅವರ ಜನಪರ ಕಾಳಜಿಗೆ ಭಾರೀ ಮೆಚ್ಚಿಗೆ ವ್ಯಕ್ತವಾಗಿದೆ.

ಉತ್ತರ ಕರ್ನಾಟಕದಲ್ಲಿ ಪ್ರವಾಹದ ರಭಸಕ್ಕೆ ತುತ್ತಾಗಿರುವ ಹಲವು ಹಳ್ಳಿಗಳ ಜನರಿಗೆ ಮೂಲಭೂತ ಸಾಮಗ್ರಿಗಳ ಅವಶ್ಯಕತೆ ಇದೆ. ನಮ್ಮ ಡಿ ಕಂಪನಿ ಬಳಗದಿಂದಲೂ ಸಹ ನಮ್ಮ ಕೈಲಾದ ಅಳಿಲು ಸೇವೆಯನ್ನು ಮುಂದುವರಿಸೋಣ. ತಮ್ಮ ಕೈಲಾದ ಸಹಾಯದೊಂದಿಗೆ ಈ ಕಾರ್ಯದಲ್ಲಿ ಭಾಗವಹಿಸಲು ಕೆಳಗಿನ ದೂರವಾಣಿ ನಂಬರ್ ಗಳಿಗೆ ಸಂಪರ್ಕಿಸತಕ್ಕದ್ದು ಎಂದು ಚಾಲೆಂಜಿಂಗ್ ಸ್ಟಾರ್ ಫೇಸ್‍ಬುಕ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಏನು ಕೊಡಬೇಕು?:
ಬಟ್ಟೆ, ಬೇಳೆ, ಅಕ್ಕಿ, ದವಸ ಧಾನ್ಯಗಳು, ಬಿಸ್ಕತ್ ಮತ್ತು ಸಂರಕ್ಷಿತ ಆಹಾರ ಪದಾರ್ಥಗಳನ್ನು ಕೊಡಬಹುದು. ಜೊತೆಗೆ ಅಗತ್ಯ ವಸ್ತುಗಳಾದ ಚಪ್ಪಲಿ, ರೈನ್ ಕೋರ್ಟ್, ವಾಟರ್ ಬಾಟಲ್, ಜನರಲ್ ಮೆಡಿಸನ್ಸ್, ಅಡುಗೆ ಎಣ್ಣೆ, ಟೂತ್ ಬ್ರಷ್, ಟೂತ್ ಪೇಸ್ಟ್, ಸಾಬೂನು, ಟೆಟ್ರಾ ಪ್ಯಾಕ್ ಹಾಲು ನೀಡಬಹುದು ಎಂದು ದಚ್ಚು ಮನವಿ ಮಾಡಿದ್ದಾರೆ.

ಈ ವಸ್ತುಗಳನ್ನು ನೀಡಲು ರಾಹುಲ್ 99861 03219, ಶರತ್ 90361 97999 ಅಥವಾ ಚೇತನ್ 96206 29646 ಅವರನ್ನು ಸಂಪರ್ಕಿಸಬಹುದು ಎಂದು ಚಾಲೆಂಜಿಂಗ್ ಸ್ಟಾರ್ ಮಾಹಿತಿ ನೀಡಿದ್ದಾರೆ.

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಪಶ್ಚಿಮ ತೀರದ ರಾಜ್ಯಗಳಲ್ಲಿ ಮುಂಗಾರ ಆರ್ಭಟ ಮುಂದುವರಿದಿದೆ. ಭಾರೀ ವರ್ಷಧಾರೆ, ಪ್ರವಾಹದಿಂದಾಗಿ ರಾಜ್ಯಾದ್ಯಂತ 8 ಮಂದಿ ಜಲಾಸುರನಿಗೆ ಬಲಿಯಾಗಿದ್ದಾರೆ. ಬೆಳಗಾವಿ, ಚಿಕ್ಕೋಡಿ, ರಾಯಚೂರು, ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ, ಮಂಗಳೂರು, ಉಡುಪಿ, ಶಿವಮೊಗ್ಗ ಹಾಗೂ ಕೊಡಗಿನಲ್ಲಿ ಭಾರೀ ಅವಾಂತರ ಸೃಷ್ಟಿಯಾಗಿದೆ. ಚಿಕ್ಕಮಗಳೂರಿನಲ್ಲಿ 5 ದಿನ, ಬೆಳಗಾವಿ, ಧಾರವಾಡ, ಕೊಡಗು, ಮಂಗಳೂರು, ಹಾವೇರಿ, ಹಾಸನ, ಶಿವಮೊಗ್ಗದಲ್ಲಿ ಎರಡು ದಿನ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಹುಬ್ಬಳ್ಳಿಯಲ್ಲಿ 300ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಪ್ರವಾಹ ಬಾಧಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ಜೋರಾಗಿದ್ದು, ನಿಧಾನವಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಹೆಜ್ಜೆ ಹಾಕಿದ್ದಾರೆ. ಎಲ್ಲಾ ಕಡೆ ಕರೆಂಟ್ ವ್ಯತ್ಯಯವಾಗಿದ್ದು, ಸುತ್ತಲೂ ನೀರಿದ್ದರೂ ಕುಡಿಯುವುದಕ್ಕೆ ನೀರು ಇಲ್ಲದಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *