ಅಪಘಾತದಲ್ಲಿ ಸಾವನ್ನಪ್ಪಿದ ಅಭಿಮಾನಿಗೆ ದರ್ಶನ್ ಸಂತಾಪ

Public TV
1 Min Read

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರನಿಗೆ ಜನ್ಮದಿನದ ಶುಭ ಕೋರಿ ಮನೆಗೆ ಹಿಂತಿರುಗುತ್ತಿದ್ದ ಅಭಿಮಾನಿಯೊಬ್ಬ ತುಮಕೂರು-ಕೊರಟಗೆರೆ ಮುಖ್ಯರಸ್ತೆಯ ಮುಗ್ಗೊಂಡನಹಳ್ಳಿ ಬಳಿ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದು, ಈಗ ನಟ ದರ್ಶನ್ ಅಭಿಮಾನಿಯ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಮಧುಗಿರಿಯ ಬೆಂಕಿಪುರದ ನಿವಾಸಿ ರಾಕೇಶ್(21) ಮೃತ ಯುವಕ. ಬೆಂಗಳೂರಿನಿಂದ ಮರುಳುತ್ತಿದ್ದಾಗ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಕಾರ್ತಿಕ್ ಗೆ ಗಂಭೀರ ಗಾಯವಾಗಿದೆ. ಆತನನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ಸುದ್ದಿ ಕೇಳಿ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ತನ್ನ ಅಭಿಮಾನಿಯ ಸಾವಿಗೆ ಸಂತಾಪ ಸೂಚಿಸಿದ್ದಾರೆ. ದರ್ಶನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ, “ನಿನ್ನೆ ನಡೆದ ರಸ್ತೆ ಅಪಘಾತದಲ್ಲಿ ಅಭಿಮಾನಿಯೊಬ್ಬ ಸಾವನಪ್ಪಿದ್ದನ್ನು ಕೇಳಿ ತುಂಬಾ ಬೇಸರವಾಗಿದೆ. ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ಅಭಿಮಾನಿಗಳಲ್ಲಿ ಕಳಕಳಿಯ ಮನವಿ ಗಾಡಿಯಲ್ಲಿ ಚಲಿಸುವಾಗ ದಯಮಾಡಿ ಅತೀ ಜಾಗೃಕತೆಯಿಂದ ಓಡಿಸಿ. ನಿಮ್ಮ ಕುಟುಂಬ ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ಎಂದೂ ಮರೆಯದಿರಿ. ಕೆಲವೊಮ್ಮೆ ನಮ್ಮ ಪ್ರಜ್ಞೆಯಲ್ಲಿದ್ದರೂ ಸಹ ದುರದೃಷ್ಟವಶಾತ್ ಅಪಘಾತಗಳು ಸಂಭವಿಸುತ್ತವೆ. ದೂರದ ಸ್ಥಳಗಳಿಗೆ ಹೋಗುವಾಗ ದ್ವಿಚಕ್ರ ವಾಹನಗಳನ್ನು ಆದಷ್ಟು ಉಪಯೋಗಿಸಬೇಡಿ” ಎಂದು ಪೋಸ್ಟ್ ಮಾಡಿದ್ದಾರೆ.

ಆಗಿದ್ದೇನು?:
ರಾಕೇಶ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಟ್ಟಾ ಅಭಿಯಾನಿಯಾಗಿದ್ದ. ಹೀಗಾಗಿ ತನ್ನ ಸ್ನೇಹಿತ ಕಾರ್ತಿಕ್ ಜೊತೆಗೆ ಬೈಕಿನಲ್ಲಿ ದರ್ಶನ್ ಪುತ್ರ ವಿನೀಶ್‍ಗೆ ಜನ್ಮದಿನದ ಶುಭಕೋರಲು ಬುಧವಾರ ಬೆಳಗ್ಗೆ ಬೆಂಗಳೂರಿಗೆ ಬಂದಿದ್ದ. ವಿನೀಶ್ ನಿಂದ ಕೇಕ್ ಕತ್ತರಿಸಿ ಸಂಭ್ರಮಿಸಿ ಶುಭ ಕೋರಿದ್ದ ರಾಕೇಶ್ ಮತ್ತು ಕಾರ್ತಿಕ್ ಬೈಕಿನಲ್ಲಿ ಗ್ರಾಮಕ್ಕೆ ಮರಳುತ್ತಿದ್ದರು. ಕಾರ್ತಿಕ್ ಬೈಕ್ ಚಲಾಯಿಸುತ್ತಿದ್ದರೆ ರಾಕೇಶ್ ಹಿಂಬದಿಯಲ್ಲಿ ಕುಳಿತಿದ್ದ.

ತುಮಕೂರು-ಕೊರಟಗೆರೆ ಮುಖ್ಯರಸ್ತೆಯ ಮುಗ್ಗೊಂಡನಹಳ್ಳಿ ಬಳಿ ಬೈಕ್ ಬರುತ್ತಿದ್ದಂತೆ, ಕಾರ್ತಿಕ್ ತಳ್ಳೋಗಾಡಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಹಿಂಬದಿಯಲ್ಲಿ ಕುಳಿತ್ತಿದ್ದ ರಾಕೇಶ್ ಬೈಕ್‍ನಿಂದ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಸವಾರ ಕಾರ್ತಿಕ್ ಗಂಭೀರವಾಗಿ ಗಾಯಗೊಂಡಿದ್ದನು. ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *