ಬೆಂಗಳೂರು: ಇಂದು ಬಾಕ್ಸ್ ಆಫೀಸ್ ಸುಲ್ತಾನನಿಗೆ 41ನೇ ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರದಲ್ಲಿರೋ ತಮ್ಮ ನಿವಾಸದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ.
ಸಹಸ್ರಾರು ಅಭಿಮಾನಿಗಳು ದರ್ಶನ್ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಿದ್ದು, ಸರತಿ ಸಾಲಲ್ಲಿ ಕಾದು ನಿಂತು, ತಮ್ಮ ಆರಾಧ್ಯ ದೈವ ದರ್ಶನ್ ಗೆ ಹುಟ್ಟು ಹಬ್ಬದ ಭರಪೂರ ಶುಭಾಶಯಗಳನ್ನ ಸಲ್ಲಿಸಿದ್ದಾರೆ. ಕುಟುಂಬದ ಸದಸ್ಯರು, ತಮ್ಮ ದಿನಾಕರ್ ತೂಗುದೀಪ, ಕಾಮಿಡಿ ಸ್ಟಾರ್ ಸೃಜನ್ ಲೋಕೇಶ್, ವಿನೋದ್ ಪ್ರಭಾಕರ್, ರವಿಚೇತನ್, ತರುಣ್ ಸುಧೀರ್ ಇತರ ನಟರು ದರ್ಶನ್ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.
ರಾಜ್ಯದ ಮೂಲೆ ಮೂಲೆಯಿಂದ ಸಾರಥಿಯ ಹುಟ್ಟುಹಬ್ಬವನ್ನ ಕಣ್ತುಂಬಿಕೊಳ್ಳಲು ಸಹಸ್ರೋಪಾದಿಯಾಗಿ ಅಭಿಮಾನಿಗಳು ಆಗಮಿಸಿದ್ದರು. ಕೇಕ್ ಕತ್ತರಿಸುವ ಮೂಲಕ ದರ್ಶನ್ ಹುಟ್ಟುಹಬ್ಬದ ಸಿಹಿಘಳಿಗೆಯನ್ನ ಝೇಂಕಾರದೊಂದಿಗೆ ಆಚರಿಸಿಕೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್ ಗಳನ್ನ ಹಾಕಿ, ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿತ್ತು.
ಪ್ರತಿ ವರ್ಷದಂತೆ ಈ ವರ್ಷ ಕೂಡ ಅಭಿಮಾನಿಗಳು ಹಾಗೂ ಕುಟುಂಬಸ್ಥರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ನಿಜಕ್ಕೂ ವಿಶೇಷವಾಗಿದೆ. ಇದೇ ವೇಳೆ ಮಾತಾನಾಡಿ ದರ್ಶನ್, ಅಭಿಮಾನಿಗಳೇ ನನಗೆಲ್ಲಾ ಸ್ನೇಹಿತರು ದಿನಾ ಸಿಗುತ್ತಾರೆ. ಅಭಿಮಾನಿಗಳು ಇವತ್ತು ಮಾತ್ರ ಸಿಗುತ್ತಾರೆ. ಅವರಿಗೋಸ್ಕರ ಅವರ ಜೊತೆ ಇರುತ್ತೀನಿ. ನಾನಾ ಜಿಲ್ಲೆಗಳಿಂದ ಬಂದು ಶುಭ ಹಾರೈಸಲು ಬಂದಿರೋ ಅಭಿಮಾನಿಗಳಿಗೆ ನಾನು ಚಿರುಋಣಿಯಾಗಿರುತ್ತೀನಿ. ಯುವಕರಿಗೆ ನಾನಿಷ್ಟೇ ಹೇಳಲು ಬಯಸುತ್ತೇನೆ. ಅದೇನೆಂದ್ರೆ ಟೈಂ ಇಂಪಾರ್ಟೆಂಟ್.. ಟೈಂ ವೇಸ್ಟ್ ಮಾಡಬೇಡಿ.. ಎಂದು ಹೇಳಿ ಇನ್ನೂ ಒಳ್ಳೋಳ್ಳೆ ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ.