ಜಾಮೀನಿನ ಮೇಲೆ ಬಂದು ಸರಗಳ್ಳತನಕ್ಕಾಗಿ ಬೈಕ್ ಕದ್ದರು-ಚೈನ್ ಕದ್ದು ಬಂದ ಜಾಗ ಸೇರಿದ್ರು

Public TV
1 Min Read

-ಒಂಟೆ ಮಹಿಳೆಯರೇ ಇವರ ಟಾರ್ಗೆಟ್

ರಾಮನಗರ: ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಬೈಕ್‌ನಲ್ಲಿ ಬಂದು ಸರ ಎಗರಿಸಿ ಪರಾರಿಯಾಗುತ್ತಿದ್ದ ಕಳ್ಳರನ್ನು ಬಂಧಿಸುವಲ್ಲಿ ಬ್ಯಾಡರಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ದುಬಾಯ್ ನಗರದ ನಿವಾಸಿ ಯತೀಶ್, ಬೆಂಗಳೂರಿನ ಬಾಪೂಜಿ ನಗರದ ನಿವಾಸಿ ಅರ್ಜುನ ಬಂಧಿತ ಸರಗಳ್ಳರು. ಮನೆಯಲ್ಲಿನ ಒಂಟಿ ಮಹಿಳೆಯರು, ಸಾಯಂಕಾಲ ಹಾಗೂ ಮುಂಜಾನೆಯ ವೇಳೆ ವಾಕಿಂಗ್ ಮಾಡುವ ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿಕೊಂಡು ಇವರಿಬ್ಬರು ಬೈಕ್‌ನಲ್ಲಿ ತೆರಳಿ ಸರಗಳ್ಳತನ ಮಾಡುತ್ತಿದ್ದರು.

ಬಂಧಿತರಿಂದ 235 ಗ್ರಾಂ ಚಿನ್ನಾಭರಣ ಹಾಗೂ 4 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬ್ಯಾಡರಹಳ್ಳಿ, ಬಿಡದಿ, ಕಗ್ಗಲೀಪುರ, ಹಾರೋಹಳ್ಳಿ, ಆನೇಕಲ್‌ನ ಅತ್ತಿಬೆಲೆ, ಸರ್ಜಾಪುರ, ಬೆಂಗಳೂರಿನ ಜ್ಙಾನಭಾರತಿ, ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದಿದ್ದ 10 ಸರಗಳ್ಳತನ ಹಾಗೂ ನಾಲ್ಕು ಬೈಕ್ ಕಳ್ಳತನ ಪ್ರಕರಣಗಳನ್ನು ಭೇಧಿಸುವಲ್ಲಿ ರಾಮನಗರ ಜಿಲ್ಲೆಯ ಬ್ಯಾಡರಹಳ್ಳಿ ಪೊಲೀಸ್‌ರು ಯಶಸ್ವಿಯಾಗಿದ್ದಾರೆ.

ಅಂದಹಾಗೇ ಬಂಧಿತ ಆರೋಪಿಗಳು ಹೆಚ್ಚಿನದಾಗಿ ಬೈಕ್‌ಗಳಲ್ಲಿ ಹೋಗುತ್ತಿದ್ದ ಹಾಗೂ ಒಂಟಿಯಾಗಿ ನಡೆದುಕೊಂಡು ಹೋಗ್ತಿದ್ದ ಮಹಿಳೆಯರನ್ನು ಟಾರ್ಗೆಟ್ ಮಾಡ್ತಿದ್ರು. ಸರಗಳ್ಳತನಕ್ಕಾಗಿ ಈ ಖದೀಮರು ನಾಲ್ಕು ಬೈಕ್‌ಗಳನ್ನು ಕಳ್ಳತನ ಮಾಡಿದ್ದರು. ಕಳ್ಳತನ ಮಾಡಿದ್ದ ಬೈಕ್‌ಗಳಲ್ಲೇ ತೆರಳಿ ಬೈಕ್‌ನಲ್ಲಿ ಹಿಂಬದಿ ಕುಳಿತು ಹೋಗುತ್ತಿದ್ದ ಮಹಿಳೆಯರ ಕುತ್ತಿಗೆಯಲ್ಲಿದ್ದ ಸರ, ಮಾಂಗಲ್ಯ ಸರವನ್ನು ಕ್ಷಣ ಮಾತ್ರದಲ್ಲಿ ಕಿತ್ತುಕೊಂಡು ಪರಾರಿಯಾಗುತ್ತಿದ್ರು.

ಬಂಧಿತ ಯತೀಶ್ ಈ ಸರಗಳ್ಳರ ಟೀಮ್‌ನಲ್ಲಿ ಪ್ರಮುಖನಾಗಿದ್ದು ಈ ಹಿಂದೆ ಹಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳವು ಮಾಡಿ ಜೈಲು ಸೇರಿದ್ದ. ಆದರೆ ಜಾಮೀನಿನ ಮೇಲೆ ಹೊರಬಂದಿದ್ದ ಯತೀಶ್ ತನ್ನ ಹಳೇ ಚಾಳಿಯನ್ನೇ ಮುಂದುವರಿಸಿ ಇದೀಗ ಮತ್ತೆ ಪೊಲೀಸ್‌ರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸರಗಳ್ಳತನ ಮಾಡುವುದನ್ನೇ ಕಾಯಂ ಕಸುಬನ್ನಾಗಿ ಮಾಡಿಕೊಂಡಿದ್ದ ಈ ಗ್ಯಾಂಗ್‌ನ ಚಂದ್ರಶೇಖರ್ ಅಲಿಯಾಸ್ ಮಾಟ ಕೋಲಾರ ಜೈಲಿನಲ್ಲಿದ್ರೆ, ಕಾರ್ತಿಕ್ ಎಂಬಾತ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಇದೀಗ ಬಂಧಿತವಾಗಿರೋ ಇಬ್ಬರು ಸರಗಳ್ಳರು ತಮ್ಮ ಜೊತೆಗಾರರ ಜೊತೆ ಜೈಲಿನಲ್ಲಿ ಮುದ್ದೆ ಮುರಿಯೋಕೆ ರೆಡಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *