ಕೊರೊನಾ ಎಫೆಕ್ಟ್ – ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಲು ಸೂಚಿಸುವಂತೆ ಸುಪ್ರೀಂಗೆ ಅರ್ಜಿ

Public TV
1 Min Read

ನವದೆಹಲಿ: ಕೊರೊನಾ ವೈರಸ್ ಹರಡುವಿಕೆ ಹಿನ್ನಲೆ ಭಾರತ ಸಂಕಷ್ಟಕ್ಕೆ ಸಿಲುಕಿದ್ದು, ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಲು ಕೇಂದ್ರ ಗೃಹ ಇಲಾಖೆಗೆ ಸೂಚಿಸುವಂತೆ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿದೆ.

ದಿ ಸೆಂಟ್ರಲ್ ಫಾರ್ ಅಕೌಂಟೆಬಿಲಿಟಿ ಮತ್ತು ಸಿಸ್ಟಮ್ ಚೇಂಜ್ ಹೆಸರಿನ ಸಂಸ್ಥೆ ಈ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ವಿಚಾರಣೆ ನಡೆಸುವಂತೆ ಸಂಸ್ಥೆ ಮನವಿ ಮಾಡಿಕೊಂಡಿದೆ. ಅಲ್ಲದೇ ಶೀಘ್ರವೇ ಈ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟಿಗೆ ಸಂಸ್ಥೆ ಒತ್ತಾಯಿಸಿದೆ.

ಸಂವಿಧಾನದ 360ನೇ ವಿಧಿ ಅನ್ವಯ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಬಹುದಾಗಿದ್ದು, ಕೇಂದ್ರಕ್ಕೆ ಆರ್ಥಿಕ ತುರ್ತು ಪರಿಸ್ಥಿತಿ ಎಂದು ಘೋಷಿಸುವಂತೆ ಸೂಚನೆ ನೀಡಲು ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

ಕೊರೊನಾ ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಲಾಕ್‍ಡೌನ್ ಹೆಸರಿನಲ್ಲಿ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ. ಇದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆ ಆಗಲಿದೆ. ಸ್ವತಂತ್ರ ಬಂದ ಬಳಿಕ ಇದೇ ಮೊದಲ ಬಾರಿಗೆ ದಿನ ಪತ್ರಿಕೆಗಳು ಸಿಗುತ್ತಿಲ್ಲ. ಈಗ ದೇಶದಲ್ಲಿ ನಿಜ ಅರ್ಥದ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ, ಹೀಗಾಗಿ ಕೂಡಲೇ ಕೇಂದ್ರ ಸರ್ಕಾರ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸುವಂತೆ ಸೂಚಿಸಿ ಎಂದು ಅರ್ಜಿಯಲ್ಲಿ ಸಂಸ್ಥೆ ಉಲ್ಲೇಖಿಸಿದೆ.

ಲಾಕ್‍ಡೌನ್ ಸಂದರ್ಭದಲ್ಲಿ ಜನಕ್ಕೆ ವಿನಾಯಿತಿ ನೀಡಬೇಕು. ವಿದ್ಯುತ್, ನೀರು, ಗ್ಯಾಸ್, ತೆರಿಗೆಗಳನ್ನು ಮುಕ್ತಗೊಳಿಸಲು ಸೂಚಿಸಬೇಕು ಎಂದು ಸಿಎಎಸ್‍ಸಿ ಪರವಾಗಿ ವಕೀಲ ವಿರಾಗ್ ಗುಪ್ತಾ ಸುಪ್ರೀಂ ಕೋರ್ಟಿಗೆ ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *