ಕೇಂದ್ರ ಸರ್ಕಾರ ಮುಸ್ಲಿಂ ವಿರೋಧಿ ಅಲ್ಲ, ಹಿಂದೂ ವಿರೋಧಿ: ಪ್ರಕಾಶ್ ಅಂಬೇಡ್ಕರ್

Public TV
2 Min Read

ಧಾರವಾಡ: ಸಂವಿಧಾನ ಅಷ್ಟೇ ಅಲ್ಲ, ಈ ದೇಶದ ಜನರೇ ತೊಂದರೆಯಲ್ಲಿದ್ದಾರೆ. ಈಗ ಸರ್ಕಾರ ಮುಸ್ಲಿಮರ ಮುಖ ತೋರಿಸುತ್ತಿದೆ, ಆದರೆ ನಿಜವಾಗಿ ಇದು ಹಿಂದೂ ವಿರೋಧಿ ಸರ್ಕಾರ ಎಂಬ ಆರೋಪ ಇದೆ ಎಂದು ಬಿ.ಆರ್ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಪ್ರಕಾಶ್ ಅಂಬೇಡ್ಕರ್, 70 ವರ್ಷದಲ್ಲಿ ಜನರು ಜಾಗೃತರಾಗಿದ್ದಾರೆ. ರಾಜಕಾರಣಿಗಳು ನಿಜ ಹೇಳುತ್ತಾರೋ? ಸುಳ್ಳು ಹೇಳ್ಳುತ್ತಾರೋ ಎಂಬುದನ್ನು ಜನರು ತಿಳಿಯುತ್ತಿದ್ದಾರೆ. ಮೋದಿ ಅವರು ಜನರ ದಾರಿ ತಪ್ಪಿಸುವ ಮಾತು ಹೇಳಬಾರದು ಎಂದು ಕಿಡಿಕಾರಿದರು.

ಅಸ್ಸಾಂನಲ್ಲಿ 5 ಲಕ್ಷ ಮುಸ್ಲಿಂ ಹಾಗೂ 14 ಲಕ್ಷ ಹಿಂದೂ ಜನರಿದ್ದಾರೆ. 6 ಕೋಟಿ ಜನಸಂಖ್ಯೆ ಇರುವ ರಾಜ್ಯದ ಸ್ಥಿತಿ ಏನಾಗಬಹುದು ವಿಚಾರ ಮಾಡಿ. ಜೆಎನ್‍ಯು ಗಲಾಟೆ ಒಳಗಿನ ವಿಷಯದಲ್ಲಿ ಹಿಂದೂ ಸಂಘಟನೆ ಹೆಸರಿನಲ್ಲಿ ಅಲ್ಲಿ ಗುಂಡಾಗಿರಿ ನಡೆದಿದ್ದಕ್ಕೆ ನಾನು ವಿರೋಧ ವ್ಯಕ್ತಪಡಿಸುತ್ತೇನೆ ಎಂದರು.

ಆರ್‌ಎಸ್‌ಎಸ್‌ ಮುಖ ಇದು, ನಮ್ಮ ಮಾತು ಕೇಳದೆ ಇದ್ರೆ ಹೊಡೆಯುತ್ತೇವೆ ಎನ್ನುವುದೇ ಇದರ ಅರ್ಥ ಎಂದು ಆರೋಪಿಸಿದರು. ಸಂವಿಧಾನ ಸುಡುವ ಮಾತನ್ನ ಪ್ರಸಾದ ಎನ್ನುವವರು ಮಾತನಾಡಿದ್ದಾರೆ. ಆರ್‌ಎಸ್‌ಎಸ್‌ ಮುಖವೇ ಹಿಟ್ಲರಿಸಂ, ನಮ್ಮ ಜೊತೆ ಬರದೆ ಇದ್ದರೆ ಹೊಡೆಯುತ್ತೇವೆ ಅಂತ ಮುಸೊಲಿನಿ ಹಾಗೂ ಹಿಟ್ಲರ್ ಕೂಡಾ ಹೇಳುತ್ತಿದ್ದರು. ಅದನ್ನೇ ಆರ್‌ಎಸ್‌ಎಸ್‌ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

2024ಕ್ಕೆ ಚುನಾವಣೆ ಇದೆ, ಅಲ್ಲಿವರೆಗೆ ಇವರು ಸರ್ಕಾರ ತೆಗೆದುಕೊಂಡು ಹೋಗಬೇಕಿದೆ. ಅದಕ್ಕೆ ಎನ್‌ಆರ್‌ಸಿ ತಂದಿದ್ದಾರೆ. ಇದರಿಂದಲೇ ಅವರು ತುರ್ತು ಪರಿಸ್ಥಿತಿಯನ್ನ ತಂದು ಜನರನ್ನ ಒತ್ತೆಯಿಡುವ ಕೆಲಸ ಮಾಡುತಿದ್ದಾರೆ. ಈ ಹಿಂದೆ ಅನಂತ್‍ಕುಮಾರ ಹೆಗಡೆ ಸಂವಿಧಾನ ಬದಲಾವಣೆ ಮಾಡುವ ಮಾತನ್ನ ಹೇಳಿದ್ದರು. ಆರ್‌ಎಸ್‌ಎಸ್‌ ಮನಸ್ಸಿನ ಮಾತನ್ನ ಅವರು ಹೇಳಿದ್ದರು ಎಂದು ಪ್ರಕಾಶ್ ಹರಿಹಾಯ್ದರು.

ಪ್ರತಿ 10 ವರ್ಷಕ್ಕೊಮ್ಮೆ ಸೆನ್ಸಸ್ ಆಗುತ್ತೆ. ಅದರಲ್ಲಿ ಜನಸಂಖ್ಯೆ ಗೊತ್ತಾಗುತ್ತೆ. ದೇಶದಲ್ಲಿ ಹಲವು ಸಮಸ್ಯೆಗಳಿವೆ, ಫೆಬ್ರವರಿಗೆ ಹೊಸ ಬಜೆಟ್ ಬರಲಿದೆ. ಸರ್ಕಾರದ ಬಳಿ 11 ಲಕ್ಷ ಕೋಟಿ ಹಣ ಮಾತ್ರ ಇದೆ. ಆದರೆ ಸರ್ಕಾರ ನಡೆಸಲು 13 ಲಕ್ಷ ಕೋಟಿ ಬೇಕು. ಅವರ ಬಳಿ ಅಷ್ಟು ಹಣ ಇಲ್ಲದ ಕಾರಣ ಸರ್ಕಾರ ಇಂಥದ್ದೆಲ್ಲ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ನಿಜ ಮುಚ್ಚಿ ಹಾಕಲು ಪ್ರಯತ್ನ ನಡೆದಿದ್ದು ದನ್ನ ನಾವು ಜನರ ಬಳಿ ತೆಗೆದುಕೊಂಡು ಹೋಗುತಿದ್ದೆವೆ. ಜನ ಕೂಡಾ ಅರ್ಥಿಕತೆ ಬಗ್ಗೆ ಮಾತನಾಡುತ್ತಿದ್ದಾರೆ. ಸರ್ಕಾರದ ವಿರುದ್ಧ ಧ್ವನಿ ಎತ್ತುವ ಅವಶ್ಯಕತೆ ಇದೆ ಎಂದು ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *