-300 ಹಾಸಿಗೆಗಳ ಪಾಲಿಟ್ರೌಮಾ ಕೇಂದ್ರಕ್ಕೆ ಹಣಕಾಸು ಸಚಿವಾಲಯದ ತಾತ್ವಿಕ ಅನುಮೋದನೆ
ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಕ್ಯಾಲಸನಹಳ್ಳಿಯಲ್ಲಿ NIMHANS ಸ್ನಾತಕೋತ್ತರ ಮತ್ತು 300 ಹಾಸಿಗೆಗಳ ಪಾಲಿಟ್ರೌಮಾ ಕೇಂದ್ರದ ನಿರ್ಮಾಣಕ್ಕೆ 498 ಕೋಟಿ ರೂ. ವೆಚ್ಚಕ್ಕೆ ತಾತ್ವಿಕ ಅನುಮೋದನೆ ನೀಡಿದೆ.
ಅಪಘಾತಕ್ಕೀಡಾದವರಿಗೆ `ನಿರ್ಣಾಯಕ’ ಸಮಯದಲ್ಲಿ ಆರೈಕೆ ದೊರೆಯುವುದು ಅತ್ಯಗತ್ಯ. NIMHANSನ ಪಾಲಿಟ್ರೌಮಾ ಕೇಂದ್ರವು ಈ ತುರ್ತು ಆರೈಕೆಯನ್ನು ಒದಗಿಸುವುದರ ಜೊತೆಗೆ, ಎತ್ತರದಿಂದ ಬಿದ್ದ, ಹಲ್ಲೆಗೊಳಗಾದ ಅಥವಾ ಯಾವುದೇ ಗಂಭೀರ ಗಾಯದಿಂದ, ಬಹು ಅಂಗಾAಗ ವೈಫಲ್ಯದಿಂದ ಬಳಲುತ್ತಿರುವವರಿಗೂ ಸೇವೆ ಸಲ್ಲಿಸಲಿದೆ. ಇದು ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಸಾವಿರಾರು ರೋಗಿಗಳ ಜೀವಗಳನ್ನು ಉಳಿಸಲು ಒಂದು ಪ್ರಮುಖ ಹೆಜ್ಜೆಯಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ರಸ್ತೆ ಸಂಚಾರ ಅಪಘಾತಗಳು 2030ರ ವೇಳೆಗೆ ಸಾವಿಗೆ ಐದನೇ ಪ್ರಮುಖ ಕಾರಣವಾಗುವ ಸಾಧ್ಯತೆಯಿದೆ. ಭಾರತದಲ್ಲಿ, 2022ರಲ್ಲಿ 4,61,312 ರಸ್ತೆ ಅಪಘಾತಗಳು ಸಂಭವಿಸಿದ್ದು, 1,68,491 ಜೀವಗಳನ್ನು ಬಲಿತೆಗೆದುಕೊಂಡಿವೆ ಮತ್ತು 4,43,366 ಜನರಿಗೆ ಗಾಯಗಳಾಗಿವೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಅಪಘಾತಗಳಲ್ಲಿ 11.9% ಮತ್ತು ಸಾವುಗಳಲ್ಲಿ 9.4% ಹೆಚ್ಚಳವನ್ನು ಪ್ರತಿನಿಧಿಸುತ್ತದೆ.
ಪಾಲಿಟ್ರೌಮಾ ಕೇಂದ್ರವು ಕಾರ್ಯಾರಂಭ ಮಾಡಿದ ನಂತರ, ರೋಗಿಗಳಿಗೆ ಬಹು ಆಯಾಮದ ತುರ್ತು ಆರೈಕೆ ನೀಡಲು ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಅದಲ್ಲದೆ, ರಾಷ್ಟ್ರೀಯ ಹೆದ್ದಾರಿ ಮತ್ತು ಕೆಐಎಗೆ ಹತ್ತಿರವಿರುವುದರಿಂದ, ಇತರ ನಗರಗಳಿಂದಲೂ ರೋಗಿಗಳು ಈ ಕೇಂದ್ರಕ್ಕೆ ಬರಲು ಅವಕಾಶವಿರುತ್ತದೆ.
ಕ್ಯಾಲಸನಹಳ್ಳಿಯಲ್ಲಿನ 39 ಎಕರೆ ಜಾಗವನ್ನು 2012-13ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ NIMHANSಗೆ ಹಂಚಿಕೆ ಮಾಡಲಾಗಿತ್ತು. ನಂತರ ಸಂಸ್ಥೆಯು 498 ಕೋಟಿ ರೂ. ಯೋಜನಾ ವೆಚ್ಚದಲ್ಲಿ 300 ಹಾಸಿಗೆಗಳ ಅತ್ಯಾಧುನಿಕ ಪಾಲಿಟ್ರೌಮಾ ಸೌಲಭ್ಯವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಭಾರತ ಸರ್ಕಾರದ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯಿಂದ ತಾತ್ವಿಕ ಅನುಮೋದನೆ ದೊರೆತಿದ್ದು, ಕೇಂದ್ರ ಆರೋಗ್ಯ ಸಚಿವಾಲಯದಿಂದ ಅಂತಿಮ ಅನುಮೋದನೆ ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ NIMHANSನ 300 ಹಾಸಿಗೆಗಳ ಪಾಲಿಟ್ರೌಮಾ ಘಟಕಕ್ಕೆ ಕೇಂದ್ರ ಸರ್ಕಾರದ ಅನುಮೋದನೆ ನೀಡಿರುವ ಸರ್ಕಾರದ ಈ ನಿರ್ಧಾರವನ್ನು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸ್ವಾಗತಿಸಿದ್ದು, ಬೆಂಗಳೂರು ಸುತ್ತಮುತ್ತಲಿನ ಅಪಘಾತಕ್ಕೀಡಾದವರಿಗೆ ಜೀವ ಉಳಿಸುವ ಮತ್ತು ತುರ್ತು ಆರೈಕೆಯನ್ನು ಒದಗಿಸುವಲ್ಲಿ ಇದು ಮಹತ್ವದ ಹೆಜ್ಜೆ ಎಂದು ಬಣ್ಣಿಸಿದ್ದಾರೆ.
ಬೆಂಗಳೂರಿನಲ್ಲಿ ಕೆಂಪೇಗೌಡ ಜಯಂತಿ ಆಚರಣೆಯೊಂದಿಗೆ ದೊರೆತಿರುವುದು ವಿಶೇಷ. ಇದೊಂದು ಸ್ವಾಗತಾರ್ಹ ಕ್ರಮ ಎಂದು ಕರೆದಿರುವ ಸಂಸದ ಸೂರ್ಯರವರು, ವಿಮಾನ ನಿಲ್ದಾಣದ ಸಮೀಪ ಪಾಲಿಟ್ರೌಮಾ ಕೇಂದ್ರದ ಸ್ಥಾಪನೆಯು ಅಪಘಾತಕ್ಕೀಡಾದವರಿಗೆ ತುರ್ತು ಪರಿಹಾರ ನೀಡಲು ಸಹಾಯ ಮಾಡುತ್ತದೆ. ಪ್ರಸ್ತುತ, ಈ ಪ್ರದೇಶದಲ್ಲಿ ಅಂತಹ ಆಘಾತ ಪ್ರಕರಣಗಳಿಗೆ ಸ್ಪಂದಿಸುವ ಯಾವುದೇ ಸಾರ್ವಜನಿಕ ಸೌಲಭ್ಯವಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಈ ಪಾಲಿಟ್ರೌಮಾ ಕೇಂದ್ರವನ್ನು 498 ಕೋಟಿ ರೂ. ವೆಚ್ಚದಲ್ಲಿ ಮಂಜೂರು ಮಾಡಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.