ಪ್ರವಾಹ ಪೀಡಿತ ರಾಜ್ಯಗಳಿಗೆ ಗೃಹ ಇಲಾಖೆಯಿಂದ 5858.60 ಕೋಟಿ ಪರಿಹಾರ ಬಿಡುಗಡೆ

Public TV
2 Min Read

ನವದೆಹಲಿ: ಪ್ರವಾಹ ಪೀಡಿತ ರಾಜ್ಯಗಳಿಗೆ ಕೇಂದ್ರ ಗೃಹ ಇಲಾಖೆಯಿಂದ ಪರಿಹಾರ ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಸಭೆ ಬಳಿಕ 5858.60 ಕೋಟಿ ರೂ. ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ (SDRF) ಕೇಂದ್ರ ಪಾಲು ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ (NDRF) ಮುಂಗಡವಾಗಿ ಬಿಡುಗಡೆ ಮಾಡಿದೆ.

ಇದರಲ್ಲಿ ಮಹಾರಾಷ್ಟ್ರಕ್ಕೆ 1,492 ಕೋಟಿ ರೂ., ಆಂಧ್ರಪ್ರದೇಶಕ್ಕೆ 1,036 ಕೋಟಿ ರೂ., ಅಸ್ಸಾಂಗೆ 716 ಕೋಟಿ ರೂ., ಬಿಹಾರಕ್ಕೆ 655.60 ಕೋಟಿ ರೂ., ಗುಜರಾತ್‌ಗೆ 600 ಕೋಟಿ ರೂ., ಹಿಮಾಚಲ ಪ್ರದೇಶಕ್ಕೆ 189.20 ಕೋಟಿ ರೂ., ಕೇರಳಕ್ಕೆ 145.60 ಕೋಟಿ ರೂ., ಮಣಿಪುರಕ್ಕೆ 50 ಕೋಟಿ ರೂ., ಮಿಜೋರಾಂಗೆ ತಲಾ 21.60 ಕೋಟಿ ರೂ., ನಾಗಾಲ್ಯಾಂಡ್‌ಗೆ 19.20 ಕೋಟಿ ರೂ., ಸಿಕ್ಕಿಂಗೆ 23.60 ಕೋಟಿ ರೂ., ತೆಲಂಗಾಣಕ್ಕೆ 416.80 ಕೋಟಿ ರೂ., ತ್ರಿಪುರಾಕ್ಕೆ 25 ಕೋಟಿ ರೂ. ಮತ್ತು ಪಶ್ಚಿಮ ಬಂಗಾಳಕ್ಕೆ 468 ಕೋಟಿ ರೂ. ಬಿಡುಗಡೆ ಮಾಡಿದೆ.

 

ಅಸ್ಸಾಂ, ಮಿಜೋರಾಂ, ಕೇರಳ, ತ್ರಿಪುರಾ, ನಾಗಾಲ್ಯಾಂಡ್, ಗುಜರಾತ್, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಣಿಪುರದ ಪ್ರವಾಹ ಪೀಡಿತ ರಾಜ್ಯಗಳಲ್ಲಿ ಹಾನಿಯ ಸ್ಥಳದ ಮೌಲ್ಯಮಾಪನಕ್ಕಾಗಿ ಅಂತರ-ಸಚಿವಾಲಯದ ಕೇಂದ್ರ ತಂಡಗಳನ್ನು (IMCT) ಕಳುಹಿಸಲಾಗಿದೆ. ಇದಲ್ಲದೆ, ಇತ್ತೀಚೆಗೆ ಪ್ರವಾಹದಿಂದ ಹಾನಿಗೊಳಗಾದ ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿನ ಹಾನಿಯ ಸ್ಥಳದಲ್ಲೇ ಮೌಲ್ಯಮಾಪನ ಮಾಡಲು IMCT ಗಳನ್ನು ಶೀಘ್ರದಲ್ಲೇ ಕಳುಹಿಸಲಾಗುವುದು. IMCT ಗಳ ಮೌಲ್ಯಮಾಪನ ವರದಿಗಳನ್ನು ಸ್ವೀಕರಿಸಿದ ನಂತರ NDRF ನಿಂದ ಹೆಚ್ಚುವರಿ ಹಣಕಾಸಿನ ನೆರವನ್ನು ವಿಪತ್ತು ಪೀಡಿತ ರಾಜ್ಯಗಳಿಗೆ ಅನುಮೋದಿಸಲಾಗುತ್ತದೆ ಎಂದು ಗೃಹ ಇಲಾಖೆ ಹೇಳಿದೆ.

ಪ್ರಸುತ್ತ ವರ್ಷ 14,958 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು 21 ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಎಸ್‌ಡಿಆರ್‌ಎಫ್‌ನಿಂದ 21 ರಾಜ್ಯಗಳಿಗೆ 9044.80 ಕೋಟಿ ರೂ., ಎನ್‌ಡಿಆರ್‌ಎಫ್‌ನಿಂದ 15 ರಾಜ್ಯಗಳಿಗೆ 4528.66 ಕೋಟಿ ರೂ., ರಾಜ್ಯ ವಿಪತ್ತು ತಗ್ಗಿಸುವಿಕೆ ನಿಧಿಯಿಂದ (ಎಸ್‌ಡಿಎಂಎಫ್) 11 ರಾಜ್ಯಗಳಿಗೆ 1385.45 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಮಾಧ್ಯಮ ಪ್ರಕರಣೆಯಲ್ಲಿ ಸಚಿವಾಲಯ ತಿಳಿಸಿದೆ.

Share This Article