ಅತಿಥಿ ಹಾರಿಸಿದ ಗುಂಡಿಗೆ ಮದುಮಗನ ಪ್ರಾಣವೇ ಹೋಯ್ತು!

Public TV
2 Min Read

ನವದೆಹಲಿ: ವಿವಾಹ ಸಮಾರಂಭದ ಸಂಭ್ರಮದಲ್ಲಿ ಗುಂಡು ಹಾರಿಸುವ ಪದ್ದತಿ ವಿವಿಧೆಡೆ ಚಾಲ್ತಿಯಲ್ಲಿದೆ. ಈ ಸಂಭ್ರಮವೇ ಸಾವಿಗೆ ಕಾರಣವಾಗುತ್ತಿದ್ದು, ಈಗ ಮತ್ತೊಂದು ಅಂತಹುದೇ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

ಈಶಾನ್ಯ ದೆಹಲಿಯ ಸೀಮಾಪುರಿಯಲ್ಲಿ ಮಂಗಳವಾರ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಮದುವೆ ಮೆರವಣಿಗೆಯಲ್ಲಿ ಬರುತ್ತಿದ್ದ ಮದುಮಗ ದೀಪಕ್ ಕುಮಾರ್ (21) ಸಂಭ್ರಮಾಚರಣೆಯ ಫೈರಿಂಗ್ ಗೆ ಬಲಿಯಾಗಿದ್ದಾನೆ.

ಮಂಗಳವಾರ ರಾತ್ರಿ ಸುಮಾರು 8 ಗಂಟೆಗೆ ಸೀಮಪುರಿಯಲ್ಲಿ ಮನೆಯಿಂದ ಮದುವೆಯ ಮೆರವಣಿಗೆ ಹೊರಟಿತ್ತು. ಮದುವೆಯ ಮೆರವಣಿಗೆಯ ಸಂದರ್ಭದಲ್ಲಿ ಕುಡುಕನೊಬ್ಬ ಎರಡು ಗುಂಡು ಹಾರಿಸಿದ್ದಾನೆ. ಒಂದು ಗುಂಡು ವರ ದೀಪಕ್ ತಲೆಯ ಹಿಂಭಾಗಕ್ಕೆ ಬಿದ್ದಿದೆ. ತಕ್ಷಣ ದೀಪಕ್ ಕುಮಾರ್ ಕುದುರೆಯಿಂದ ಕೆಳಗೆ ಕುಸಿದು ಬಿದ್ದಿದ್ದಾನೆ. ನಂತರ ಆತನನ್ನು ಗುರುತೇಜ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಸುಮಾರು 2 ಸಾವನ್ನಪ್ಪಿದ್ದಾನೆ.

ಆರೋಪಿಯನ್ನು ಪೂರ್ವ ದೆಹಲಿಯ ಶಹೀದ್ ನಗರ ನಿವಾಸಿ ಆದಿಲ್ ಎಂದು ಗುರುತಿಸಲಾಗಿದೆ. ಆದಿಲ್ ಮದುವೆ ಅತಿಥಿಯಾಗಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಕುಟುಂಬದ ಸದಸ್ಯರು ದೀಪಕ್ ಕುಮಾರ್ ನನ್ನು ಕೊಲೆ ಮಾಡಲಾಗಿದೆ. ಈ ಕೃತ್ಯದಲ್ಲಿ ನೆರೆಮನೆಯವರ ಪಾತ್ರ ಇದೆ ಎಂದು ಆರೋಪಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ನಪುರ್ ಪ್ರಸಾದ್ ತಿಳಿಸಿದ್ದಾರೆ.

ಈ ಅವಘಡದಲ್ಲಿ ಇನ್ನೊಂದು ಗುಂಡು ಕುದುರೆಯ ಮೇಲೆ ಕುಳಿತ್ತಿದ್ದ ಮಗುವಿಗೆ ಬಿದ್ದಿದೆ. ಆದರೆ ಅದೃಷ್ಟವಶಾತ್ ಮಗು ಪಾರಾಗಿದೆ. ಕುಟುಂಬ ಸದಸ್ಯರು ನೆರೆಮನೆಯ ಮುಂದೆ ರಸ್ತೆಯ ಮೇಲೆ ದೇಹವನ್ನು ಇಟ್ಟು ಪ್ರತಿಭಟನೆ ನಡೆಸುತ್ತಿದ್ದರು. ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಆರೋಪಿ ವಿರುದ್ಧ ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಮದುಮಗ ಆನಂದ್ ವಿಹಾರ್ ನಲ್ಲಿರುವ ಖಾಸಗಿ ಬಸ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಈತ ತಾಯಿ ರಾಧಾ ದೇವಿ, ಸಹೋದರ ಶಿವ ಮತ್ತು ಅವರ ಪತ್ನಿ, ಮತ್ತು ಇಬ್ಬರು ವಿವಾಹಿತ ಸಹೋದರಿಯಾದ ಸೋನಮ್ ಮತ್ತು ಮೀನಾಕ್ಷಿ ಜೊತೆ ವಾಸಿಸುತ್ತಿದ್ದನು. ಈ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *