ಬೆಂಗಳೂರು: ಹಾಡಗಲೇ ನಡುರಸ್ತೆಯಲ್ಲಿ ರೌಡಿ ಲಕ್ಷ್ಮಣನನ್ನು ಕೊಚ್ಚಿ ಕೊಲೆ ಮಾಡಿದ್ದ ಪ್ರಕರಣವನ್ನು ಪೊಲೀಸ್ ಕಮಿಷನರ್ ಸುನಿಲ ಕುಮಾರ್ ಸಿಸಿಬಿಗೆ ವರ್ಗಾಯಿಸಿದ್ದಾರೆ.
ಸದ್ಯ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿರುವ ಅಲೋಕ್ ಕುಮಾರ್ ಪ್ರಕರಣವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಪ್ರಕರಣದ ವರ್ಗಾವಣೆ ಹಿನ್ನೆಲೆಯಲ್ಲಿ ಇಂದಿನಿಂದ ಸಿಸಿಬಿ ತಂಡ ಹಂತಕರ ಬೇಟೆಗೆ ಅಖಾಡಕ್ಕಿಳಿದಿದೆ.
ನಗರದ ಸೋಪ್ ಫ್ಯಾಕ್ಟರಿ ಬಳಿ ರೌಡಿ ಲಕ್ಷ್ಮಣ ತೆರಳುತ್ತಿದ್ದ ಕಾರನ್ನು ತಡೆದ ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಘಟನೆ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಮಹಾಲಕ್ಷ್ಮೀ ಲೇಔಟ್ ಪೊಲೀಸರು ತನಿಖೆ ಆರಂಭಿಸಿದ್ದರು.
ಘಟನಾ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಗಳ ಆಧಾರದಿಂದ ದುಷ್ಕರ್ಮಿಗಳು ಬ್ಲಾಕ್ ಸ್ಕಾರ್ಪಿಯೋ ಕಾರು ಬಳಕೆ ಮಾಡಿದ್ದರು ಎಂಬುವುದು ಖಚಿತವಾಗಿತ್ತು. ಆದರೆ ಕಾರಿನ ನಂಬರ್ ಪ್ಲೇಟಿನ ಅಕ್ಷರಗಳು ಕಡಿಮೆ ಗಾತ್ರ ಹೊಂದಿದ್ದ ಕಾರಣ ನಂಬರ್ ಪತ್ತೆ ಮಾಡುವುದು ಕಷ್ಟ ಸಾಧ್ಯವಾಗಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
ರೌಡಿಶೀಟರ್ ಲಕ್ಷ್ಮಣ ಇನ್ನೋವಾ ಕಾರಲ್ಲಿ ಹೋಗುತ್ತಿದ್ದನು. ಈ ವೇಳೆ ಮತ್ತೊಂದು ಕಾರಿನಲ್ಲಿ ದುಷ್ಕರ್ಮಿಗಳ ಗ್ಯಾಂಗ್ ಬಂದು ಲಕ್ಷ್ಮಣನ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿತ್ತು. ಬಳಿಕ ಮಚ್ಚು, ಲಾಂಗ್ಗಳಿಂದ ಲಕ್ಷ್ಮಣನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತಕ್ಷಣ ಗಾಯಗೊಂಡಿದ್ದ ಲಕ್ಷ್ಮಣನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆಯೇ ಲಕ್ಷ್ಮಣ ಕೊನೆಯುಸಿರೆಳೆದಿದ್ದ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆ ಆಗಿದ್ದ ಲಕ್ಷ್ಮಣ್ ಕೊಲೆ ಮಾಡಲು ಪೂರ್ವ ಸಿದ್ಧತೆ ನಡೆಸಿಯೇ ದುಷ್ಕರ್ಮಿಗಳು ಆಗಮಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv