ಐಎಂಎ ಬಹುಕೋಟಿ ವಂಚನೆ ಪ್ರಕರಣ- ತನಿಖೆ ಪ್ರಾರಂಭಿಸಿದ ಸಿಬಿಐ

Public TV
1 Min Read

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧಿಸಿದಂತೆ ಇಂದು ಸಿಬಿಐ ಅಧಿಕೃತವಾಗಿ ತನಿಖೆ ಆರಂಭಿಸಿದೆ. ಎಸ್‍ಐಟಿ ಮುಖ್ಯಸ್ಥ ರವಿಕಾಂತೇಗೌಡ ಮತ್ತು ತನಿಖಾಧಿಕಾರಿ ಗಿರೀಶ್ ಭೇಟಿ ಮಾಡಿ ಸಿಬಿಐ ಅಧಿಕಾರಿಗಳು ತನಿಖೆಯ ಫೈಲ್ ಪಡೆದುಕೊಂಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಈ ಹಿಂದೆ ಎಸ್‍ಐಟಿಯ ಎಫ್‍ಐಆರ್‍ನಲ್ಲಿ ಮನ್ಸೂರ್ ಖಾನ್ ಸೇರಿದಂತೆ ಎಲ್ಲ ನಿರ್ದೇಶಕರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಈ ಎಲ್ಲರನ್ನು ಆರೋಪಿಗಳನ್ನಾಗಿಸಿ, ಐಎಂಎಗೆ ಸೇರಿದ ಮೂವತ್ತು ಸಂಸ್ಥೆಗಳ ಮೇಲೆ ಸಿಬಿಐ ಇದೀಗ ಮತ್ತೊಂದು ಹೊಸ ಎಫ್‍ಐಆರ್ ದಾಖಲಿಸಿದೆ.

ಅಲ್ಲದೆ ವಂಚನೆಗೊಳಗಾದ 40 ಸಾವಿರ ಜನರು ಕಮರ್ಶಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ್ದ ದೂರುಗಳನ್ನು ಸಹ ಸಿಬಿಐ ಪಡೆದಿದ್ದು, ಎಲ್ಲ ಆಯಾಮಗಳಿಂದಲೂ ತನಿಖೆ ಪ್ರಾರಂಭಿಸಿದೆ. ಮನ್ಸೂರ್ ಖಾನ್‍ನಿಂದ ಅಕ್ರಮವಾಗಿ ಹಣ ಪಡೆದು ಸದ್ಯ ಜೈಲಿನಲ್ಲಿರುವ ಎಲ್ಲ ಆರೋಪಿಗಳನ್ನು ಸಿಬಿಐ ಹಂತ ಹಂತವಾಗಿ ವಿಚಾರಣೆ ನಡೆಸಲಿದೆ.

ಬೆಂಗಳೂರು ಮತ್ತು ಹೈದ್ರಾಬಾದ್‍ನ ಸಿಬಿಐ ಅಧಿಕಾರಗಳ ತಂಡ ಐಎಂಎ ಪ್ರಕರಣದ ತನಿಖೆ ನಡೆಸುತ್ತಿದೆ. ಪ್ರಕರಣದ ಮಾಹಿತಿಯನ್ನು ಸಾಕ್ಷಿ ಸಮೇತ ಸಿಬಿಐ ಅಧಿಕಾರಿಗಳಿಗೆ ಹಂತ ಹಂತವಾಗಿ ಎಸ್‍ಐಟಿ ಅಧಿಕಾರಿಗಳು ನೀಡಲಿದ್ದಾರೆ. ತನಿಖೆಯನ್ನು ಸಿಬಿಐಗೆ ವಹಿಸಿರುವುದರಿಂದ ಮನ್ಸೂರ್ ಖಾನ್ ಸೇರಿದಂತೆ ಇತರ ವಂಚಕರಿಗೆ ನಡುಕ ಆರಂಭವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *