ಬೆಂಗಳೂರನ್ನು ಬೆಚ್ಚಿ ಬೀಳಿಸಿದ್ದ ಟೆಕ್ಕಿ ಪಾಯಲ್ ಕೊಲೆ ಕೇಸ್ – ದೋಷಿ ಜೇಮ್ಸ್‌ಗೆ ಜೀವಾವಧಿ ಶಿಕ್ಷೆ

Public TV
2 Min Read

– ಸಿಬಿಐ ಕೋರ್ಟಿನಿಂದ ತೀರ್ಪು ಪ್ರಕಟ
– ದೋಷಿಗೆ ಶೀಘ್ರದಲ್ಲೇ ಶಿಕ್ಷೆ ಪ್ರಕಟ

ಬೆಂಗಳೂರು: 2010ರಲ್ಲಿ ನಡೆದಿದ್ದ ಡೆಲ್ ಕಂಪನಿ ಉದ್ಯೋಗಿ ಪಾಯಲ್ ಸುರೇಖಾ ಅವರ ಕೊಲೆ ಪ್ರಕರಣ ಸಿಲಿಕಾನ್ ಸಿಟಿ ಮಂದಿಯನ್ನು ಬೆಚ್ಚಿಬೀಳಿಸಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ ಆರೋಪಿ ಜೇಮ್ಸ್ ಕುಮಾರ್ ರಾಯ್‌ನನ್ನು ದೋಷಿ ಎಂದು ತೀರ್ಪು ನೀಡಿದ್ದು, ಜೀವಾವಧಿ ಶಿಕ್ಷೆ ವಿಧಿಸಿದೆ.

ಪಾಯಲ್ ಸುರೇಖಾ ಕೊಲೆ ಪ್ರಕರಣವನ್ನು ಭೇದಿಸಿದ ಪೋಲಿಸರು ಕೊಲೆಗಾರ ಜೇಮ್ಸ್ ಕುಮಾರ್ ಒಡಿಶಾದಲ್ಲಿದ್ದಾನೆ ಎಂಬ ಬಗ್ಗೆ ಮಾಹಿತಿ ಕಲೆಹಾಕಿ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗ ಒಡಿಶಾದಲ್ಲಿದ್ದ ಆಗಿನ ಇನ್‌ಸ್ಪೆಕ್ಟರ್ ಉಮೇಶ್ ಜೇಮ್ಸ್‌ನನ್ನು ಬಂಧಿಸಿದ್ದರು. ಆದರೆ ತನ್ನ ಮೇಲೆ ಮಾಡಿರುವ ಆರೋಪ ಸುಳ್ಳು ಎಂದು ಜೇಮ್ಸ್ ಸುಪ್ರಿಂ ಕೋರ್ಟ್ ತನಕ ಪ್ರಕರಣ ತೆಗೆದುಕೊಂಡು ಹೋಗಿ ಹೋರಾಡಿದ್ದನು. ಆದರೆ ಕೊನೆಗೆ ಸುಪ್ರಿಂ ಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಬಳಿಕ ಜೇಮ್ಸ್ ವಿರುದ್ಧ ಸಿಬಿಐ ದೋಷಾರೋಪ ಪಟ್ಟಿಯನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇದರ ಆಧಾರದ ಮೇಲೆ ವಾದ ಪ್ರತಿವಾದ ನಡೆದಿದ್ದು, ಸಾಕ್ಷ್ಯಗಳು ಜೇಮ್ಸ್ ವಿರುದ್ಧವೇ ಇರುವ ಕಾರಣ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ.

ಏನಿದು ಪ್ರಕರಣ?
ಅಸ್ಸಾಂ ಮೂಲದ ಪಾಯಲ್ ಸುರೇಖಾ ಬೆಂಗಳೂರಿನ ಡೆಲ್ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅವರನ್ನು 2010 ಡಿ. 17ರಂದು ಬೆಂಗಳೂರಿನ ಜೆ.ಪಿ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಕೊಲೆಗೈಯ್ಯಲಾಗಿತ್ತು. ಸುರೇಖಾ ಅವರ ಮೃತದೇಹ ಕೈಕಟ್ಟಿ, ಕುತ್ತಿಗೆ ಸೀಳಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣ ಬೆಂಗಳೂರು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಈ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು ಸುರೇಖಾ ಅವರನ್ನು ಒಡಿಶಾ ಮೂಲದ ಜೇಮ್ಸ್ ಕುಮಾರ್ ರಾಯ್ ಕೊಲೆ ಮಾಡಿದ್ದಾನೆ ಎನ್ನುವುದನ್ನ ಪತ್ತೆಹಚ್ಚಿದ್ದರು.

ಒಡಿಶಾದಲ್ಲಿ ಸುರೇಖಾ ಪತಿ ಅನಂತ್ ನಡೆಸುತ್ತಿದ್ದ ಜಿಮ್‌ನನ್ನು ದಂಪತಿ ಬೆಂಗಳೂರಿಗೆ ಬಂದ ಬಳಿಕ ಜೇಮ್ಸ್ ನೋಡಿಕೊಳ್ಳುತ್ತಿದ್ದ. ಆದರೆ ಜೇಮ್ಸ್ ಜಿಮ್‌ಗೆ ಬರುವ ಹುಡುಗಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಕಾರಣ ಆತನನ್ನು ಅನಂತ್ ತಂದೆ ಕೆಲಸದಿಂದ ಕಿತ್ತು ಹಾಕಿದ್ದರು. ಬಳಿಕ ಬೆಂಗಳೂರಿಗೆ ಅನಂತ ಅವರನ್ನು ಹುಡಿಕಿ ಬಂದ ಜೇಮ್ಸ್, ಅನಂತ್ ಬೆಂಗಳೂರಿನಲ್ಲಿ ನಡೆಸುತ್ತಿದ್ದ ಜಿಮ್ ಮೇಲೂ ಕಣ್ಣಾಕಿದ್ದ. ಹೇಗೋ ಅನಂತ್ ಅವರನ್ನು ಪುಸಲಾಯಿಸಿ ಜಿಮ್ ಉಸ್ತುವಾರಿ ವಹಿಸಿಕೊಂಡ. ಆದರೆ ಇಲ್ಲೂ ತನ್ನ ಹಳೆಯ ಚಾಳಿ ಪ್ರದರ್ಶಿಸಿದ ಜೇಮ್ಸ್ ಜಿಮ್‌ಗೆ ನಷ್ಟವಾಗುವಂತೆ ಮಾಡಿದ. ಹೀಗಾಗಿ ಬೆಂಗಳೂರಿನ ಜಿಮ್ ಮುಚ್ಚಬೇಕಾಯಿತು.

ಆ ನಂತರ ಅನಂತ್ ಹಾಗೂ ಸುರೇಖಾ ಒಡಿಶಾಗೆ ಹಿಂತಿರುಗಿದ್ದರು. 2010ರಲ್ಲಿ ಸುರೇಖಾಗೆ ಡೆಲ್ ಕಂಪನಿಯಲ್ಲಿ ಕೆಲಸ ಸಿಕ್ಕಿದ ನಂತರ ದಂಪತಿ ಮತ್ತೆ ಬೆಂಗಳೂರಿಗೆ ವಾಪಸ್ಸಾಗಿದ್ದರು. ಆದರೆ ಆಗಲೂ ಜೇಮ್ಸ್ ಮತ್ತೆ ಅನಂತ್ ಬಳಿ ಬಂದು ಹಣ ಸಹಾಯ ಮಾಡುವಂತೆ ಕೇಳಿದ್ದನು. ಮೊದಲು ಬೈದಿದ್ದ ಅನಂತ್ ಬಳಿಕ ಜೇಮ್ಸ್ಗೆ ಊಟ ಹಾಕಿ ಕಳುಹಿಸಿದ್ದರು. ಈ ಬಗ್ಗೆ ಸುರೇಖಾ ಅವರಿಗೆ ತಿಳಿದು ಜೇಮ್ಸ್  ಗೆ ನಿಂದಿಸಿ, ಪತಿ ಜೊತೆ ಜಗಳ ಮಾಡಿದ್ದರು.

ತನಗೆ ಸುರೇಖಾ ನಿಂದಿಸಿದ ಬಗ್ಗೆ ತಿಳಿದ ಜೇಮ್ಸ್ ಕುಮಾರ್ ಸುರೇಖಾ ವಿರುದ್ಧ ದ್ವೇಷವಿಟ್ಟುಕೊಂಡಿದ್ದನು. ಇದೇ ದ್ವೇಷಕ್ಕೆ 2010ರ ಡಿ 17ರಂದು ಸುರೇಖಾ ಅಪಾರ್ಟ್‌ಮೆಂಟ್‌ ಗೆ ನುಗ್ಗಿ ಉಸಿರುಗಟ್ಟಿಸಿ, ಅವರ ಕೈಕಾಲು ಕಟ್ಟಿ, ಚಾಕುವಿನಿಂದ ಮನಬಂದಂತೆ ಚುಚ್ಚಿ ಕೊಲೆಗೈದು ಒಡಿಶಾಕ್ಕೆ ಪರಾರಿಯಾಗಿದ್ದನು. ಡಿ. 23ರಂದು ಒಡಿಶಾದಲ್ಲಿ ಜೇಮ್ಸ್‌ನನ್ನು ಪೊಲೀಸರು ಬಂಧಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *