ಮಾಜಿ ಸಚಿವ ಡಿ.ಕೆ ಶಿವಕುಮಾರ್, ಡಿ.ಕೆ ಸುರೇಶ್‍ಗೆ ಸಿಬಿಐನಿಂದ ಶಾಕ್

Public TV
2 Min Read

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದೇ ವಾರದಲ್ಲಿ ಹೊಂದಾಣಿಕೆ ಹಿಂದಿನ ಸೂತ್ರಧಾರರೆನಿಸಿಕೊಂಡಿರೋ ಮಾಜಿ ಇಂಧನ ಸಚಿವ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್‍ಗೆ ಸಿಬಿಐ ಆಘಾತ ನೀಡಿದೆ.

ನೋಟು ನಿಷೇಧದ ವೇಳೆ ಎಸಗಿದ್ದ ಅಕ್ರಮ ಸಂಬಂಧ ಗುರುವಾರ ಬೆಂಗಳೂರು ರಾಮನಗರ, ಕನಕಪುರದ ಐದು ಕಡೆ ಶೋಧ ನಡೆಸಿದೆ. ಡಿಕೆ ಸುರೇಶ್ ಆಪ್ತ ಸಹಾಯಕ ಪದ್ಮನಾಭಯ್ಯಗೆ ಸೇರಿದ ನೆಲಮಂಗಲದ ಟಿ ಬೇಗೂರಲ್ಲಿರುವ ಮನೆ, ಕನಕಪುರ ಉಪ ತಹಶೀಲ್ದಾರ್ ಶಿವಾನಂದ, ಚುನಾವಣಾ ಶಾಖೆಯ ಎಫ್‍ಡಿಎ ನಂಜಪ್ಪಗೆ ಸೇರಿದ ಕನಕಪುರದಲ್ಲಿರುವ ಮನೆಯಲ್ಲಿ ಹುಡುಕಾಟ ನಡೆಸಿತ್ತು. ಕನಕಪುರ ತಹಶೀಲ್ದಾರ್ ಕಚೇರಿ, ರಾಮಜನಗರ ಜಿಲ್ಲಾಧಿಕಾರಿ ಕಚೇರಿಯಲ್ಲೂ ಸಿಬಿಐ ತಡಕಾಡಿದೆ.

ರಾಮನಗರದಲ್ಲಿರುವ ಕಾರ್ಪೋರೇಷನ್ ಬ್ಯಾಂಕ್‍ನ ಚೀಫ್ ಮ್ಯಾನೇಜರ್ ಸೇರಿ ಆರು ಮಂದಿ ಎಫ್‍ಐಆರ್ ದಾಖಲಿಸಿದೆ. ಹಾಗಾದ್ರೆ ಆರೋಪಗಳು ಏನೂ ಅಂತಾ ನೋಡೋದಾದ್ರೆ:

ಆರೋಪ 1: ನೋಟು ನಿಷೇಧ ವೇಳೆ 10 ಲಕ್ಷ ರೂಪಾಯಿ ಮೊತ್ತದ ಹಳೆಯ ನೋಟು ಅಕ್ರಮ ವಿನಿಮಯ ಮಾಡಿರುವ ಬಗ್ಗೆ ಸಂಸದ ಡಿಕೆ ಸುರೇಶ್ ಅಪ್ತ ಸಹಾಯಕ ಪದ್ಮನಾಭಯ್ಯ ವಿರುದ್ಧ ಅಕ್ರಮದ ಆರೋಪ ಕೇಳಿ ಬಂದಿತ್ತು.

ಆರೋಪ 2: ಮತದಾರರಿಗೆ ಗೊತ್ತೇ ಇಲ್ಲದಂತೆ ಅವರ ನಕಲಿ ವೋಟರ್ ಐಡಿ, ನಕಲಿ ಡ್ರೈವಿಂಗ್ ಲೈಸನ್ಸ್ ಗಳನ್ನು ರಾಮನಗರ ಶಾಖೆಯ ಕಾರ್ಪೋರೇಷನ್ ಬ್ಯಾಂಕ್ ಚೀಫ್ ಮ್ಯಾನೇಜರ್ ಬಿ. ಪ್ರಕಾಶ್‍ಗೆ ಸಲ್ಲಿಕೆ ಮಾಡಿರುವ ಆರೋಪ ಕೇಳಿಬಂದಿತ್ತು.

ಆರೋಪ 3: ನೋಟು ನಿಷೇಧವಾದ ಎರಡೇ ದಿನದಲ್ಲಿ 120 ನಕಲಿ ವೋಟರ್ ಐಡಿಗಳ ಸೃಷ್ಟಿ ಮಾಡಲಾಗಿತ್ತು. ನವೆಂಬರ್ 10, 11ರಂದು ತಹಶೀಲ್ದಾರ್ ಸೀಲ್, ಚುನಾವಣಾಧಿಕಾರಿಯ ಸ್ಟ್ಯಾಂಪ್ ಬಳಸಿ ನಕಲಿ ವೋಟರ್ ಐಡಿಗಳನ್ನು ಮಾಡಲಾಗಿತ್ತು. ಈ ಅಕ್ರಮಕ್ಕೆ ಕನಕಪುರ ಉಪ ತಹಶೀಲ್ದಾರ್ (ಚುನಾವಣಾ ವಿಭಾಗದ ಉಸ್ತುವಾರಿ) ಶಿವಾನಂದ, ಚುನಾವಣಾಧಿಕಾರಿ ಕಚೇರಿಯ ಎಫ್‍ಡಿಎ ನಂಜಪ್ಪ ಸಹರಿಸಿದ್ದರು. ಈ ನಕಲಿ ವೋಟರ್ ಐಡಿಗಳನ್ನು ಡಿಕೆ ಸುರೇಶ್ ಪಿಎ ಬ್ಯಾಂಕ್ ಮ್ಯಾನೇಜರ್‍ಗೆ ಕೊಟ್ಟಿದ್ದರು ಎನ್ನಲಾಗಿತ್ತು. ಇದನ್ನೂ ಓದಿ: ಸರ್ಚ್ ವಾರೆಂಟ್‍ಗೂ ರಾಜ್ಯ ಸರ್ಕಾರಕ್ಕೂ ಸಂಬಂಧವಿಲ್ಲ: ಸಿಎಂ ಕುಮಾರಸ್ವಾಮಿ

ಅರೋಪ 4: ಹಳೆ-ಹೊಸ ನೋಟುಗಳ ವಿನಿಮಯಕ್ಕಾಗಿ 250 ನಕಲಿ ಸ್ಲಿಪ್‍ಗಳಿಗೆ ನಕಲಿ ಸಹಿ ಮಾಡಿಸಿದ್ದ ಡಿಕೆ ಸುರೇಶ್ ಪಿಎ ಪದ್ಮನಾಭಯ್ಯ ಬ್ಯಾಂಕ್‍ಗೆ ನಕಲಿ ಸ್ಲಿಪ್ ಸಲ್ಲಿಕೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಆರೋಪ 5: ನೋಟು ನಿಷೇಧವಾದ 6 ದಿನಗಳ ಬಳಿಕ ಅಕ್ರಮ ನಡೆದಿತ್ತು. ಅವತ್ತು ಚೀಫ್ ಮ್ಯಾನೇಜರ್ ಪ್ರಕಾಶ್ ಮತ್ತು ಮತ್ತಿಬ್ಬರು ಹಣ ವಿನಿಮಯದ ಉಸ್ತುವಾರಿಗಳಾಗಿದ್ದರು. ಬೆಂಗಳೂರಿನ ಎಂಜಿ ರೋಡ್‍ನಲ್ಲಿರುವ ಕರೆನ್ಸಿ ಚೆಸ್ಟ್‍ನಿಂದ 12.25 ಕೋಟಿ ರೂ.ನೊಂದಿಗೆ ನಿರ್ಗಮಿಸಿದ್ದರು. ಆದ್ರೆ ಅವತ್ತೇ ದಿನದ ಬ್ಯಾಂಕ್ ವ್ಯವಹಾರ ಮುಗಿಯೋವಾಗ ಅವರ ಬಳಿ 10.03 ಲಕ್ಷ ರೂಪಾಯಿ ಹೆಚ್ಚುವರಿ ಹಣವಿತ್ತು ಎನ್ನಲಾಗಿತ್ತು.

ಒಟ್ಟಿನಲ್ಲಿ ಸದ್ಯಕ್ಕೆ ಡಿಕೆ ಶಿವಕುಮಾರ್, ಡಿಕೆ ಸುರೇಶ್ ವಿರುದ್ಧ ಸಿಬಿಐ ಕೇಸ್ ಹಾಕಿಲ್ಲ. ಆರೋಪಿಗಳ ಹೇಳಿಕೆ ಆಧರಿಸಿ ಭವಿಷ್ಯದಲ್ಲಿ ಎಫ್‍ಐಆರ್‍ಗೆ ಸಿಬಿಐಗೆ ಅವಕಾಶವಿದೆ. ಒಂದು ವೇಳೆ ಸಿಬಿಐ ಕೇಸ್ ಹಾಕಿದ್ರೆ ಆಗ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಬಹುದು. ನಿರೀಕ್ಷಣಾ ಜಾಮೀನು ಮಂಜೂರಾದ್ರೆ ಡಿಕೆ ಬ್ರದರ್ಸ್‍ಗೆ ತಾತ್ಕಾಲಿಕವಾದ್ರೂ ಬಂಧನ ಭೀತಿಯಿಂದ ಮುಕ್ತಿ ದೊರೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *