ಲಾಲೂ ಪ್ರಸಾದ್ ಯಾದವ್‍ಗೆ ಸಿಬಿಐ ಶಾಕ್- 12 ಕಡೆ ದಾಳಿ

Public TV
1 Min Read

ನವದೆಹಲಿ: ಆರ್‍ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್‍ಗೆ ಬೆಳ್ಳಂಬೆಳಗ್ಗೆ ಸಿಬಿಐ ಶಾಕ್ ನೀಡಿದೆ.

2006ರಲ್ಲಿ ಲಾಲೂ ಪ್ರಸಾದ್ ಯಾದವ್ ರೈಲ್ವೆ ಮಂತ್ರಿಯಾಗಿದ್ದಾಗ ಹೋಟೆಲ್‍ಗಳಿಗೆ ನೀಡಿದ ಗುತ್ತಿಗೆಯಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಲಾಲೂ ವಿರುದ್ಧ ಸಿಬಿಐ ದೂರು ದಾಖಲಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 5.30ರ ವೇಳೆಗೆ ಲಾಲೂ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ. ಅಲ್ಲದೆ ದೆಹಲಿ, ಪಾಟ್ನಾ, ಗುರಗಾಂವ್ ಸೇರಿದಂತೆ ಒಟ್ಟು 12 ಕಡೆ ದಾಳಿ ನಡೆಸಿದೆ. ಲಾಲೂ ಪತ್ನಿ ರಾಬ್ರಿದೇವಿ, ಬಿಹಾರದಲ್ಲಿ ಸಚಿವರಾಗಿರೋ ಪುತ್ರ ತೇಜಸ್ವಿ ಯಾದವ್ ಮೇಲೆ ಕೂಡ ಸಿಬಿಐ ಕೇಸ್ ದಾಖಲಿಸಿಕೊಂಡಿದೆ.

ಪುರಿ ಮತ್ತು ರಾಂಚಿಯಲ್ಲಿ ರೈಲ್ವೆಗಾಗಿ ಎರಡು ಹೋಟೆಲ್‍ಗಳನ್ನು ನಡೆಸಲು ಹರ್ಷ್ ಕೊಚ್ಚರ್ ಎಂಬವರಿಗೆ 15 ವರ್ಷಗಳ ಗುತ್ತಿಗೆ ನೀಡಿದ್ದು, ಅದಕ್ಕೆ ಪ್ರತಿಯಾಗಿ ಲಾಲೂ ಪ್ರಸಾದ್ ಯಾದವ್ ಕುಟುಂಬ ಪಾಟ್ನಾದಲ್ಲಿ ಎರಡು ಎಕರೆ ಜಮೀನನ್ನು ಪಡೆದಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಮೊದಲಿಗೆ ಕೊಚ್ಚರ್ ಎರಡು ಎಕರೆ ಜಮೀನನ್ನು ಲಾಲೂ ಪ್ರಸಾದ್ ಯಾದವ್‍ರ ಪಕ್ಷದ ಸಂಸದರೊಬ್ಬರ ಪತ್ನಿಯ ಕಂಪೆನಿಗೆ ಮಾರಾಟ ಮಾಡಿದ್ದು, ಅನಂತರ ಜಮೀನು ಲಾಲು ಪತ್ನಿ ಮತ್ತು ಮಕ್ಕಳ ಹೆಸರಿಗೆ ವರ್ಗಾವಣೆಯಾಗಿದೆ ಎಂದು ವರದಿಯಾಗಿದೆ.

ಹೋಟೆಲ್ ಗುತ್ತಿಗೆಗೆ ಸಂಬಂಧಿಸಿದಂತೆ ಐಆರ್‍ಸಿಟಿಸಿ(ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕರ್ಪೊರೇಷನ್‍ನ) ಮುಖ್ಯಸ್ಥ ಪಿಕೆ ಗೋಯಲ್ ಮೇಲೂ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ಇನ್ನು ದಾಳಿ ಬಗ್ಗೆ ಆರ್‍ಜೆಡಿ ಕಾರ್ಯಕರ್ತರು ಗರಂ ಆಗಿದ್ದು, ಇದು ರಾಜಕೀಯ ಪ್ರೇರಿತ ಎಂದು ಅಪಾದಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇದೊಂದು ಕರಾಳ ದಿನ. ನಾವು ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ಹೋರಾಡುತ್ತೇವೆ ಎಂದು ಆರ್‍ಜೆಡಿ ಮುಖಂಡ ಮನೋಜ್ ಜಾ ಹೇಳಿದ್ದಾರೆ. ಈ ಮಧ್ಯೆ ಸಿಎಂ ನಿತೀಶ್ ಕುಮಾರ್ ರಾಜ್‍ಗಿರ್‍ನಲ್ಲಿ ದಿಢೀರನೆ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *