ಡಿಕೆ ಸಹೋದರರ ಆಪ್ತರ ಮನೆ, ಕಚೇರಿ ಗಳ ಮೇಲೆ ಸಿಬಿಐ ದಾಳಿ

Public TV
1 Min Read

ಬೆಂಗಳೂರು: 500, 1 ಸಾವಿರ ರೂ. ನೋಟು ನಿಷೇಧಗೊಂಡ ಸಮಯದಲ್ಲಿ ಹಣ ವಿನಿಮಯ ನಡೆದಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಡಿಕೆ ಸಹೋದರರ ಆಪ್ತರ ಮನೆ ಮತ್ತು ಕಚೇರಿಗಳ ಮೇಲೆ ಸಿಬಿಐ ದಾಳಿ ಮಾಡಿದೆ.

ನಿನ್ನೆಯೇ ಸಿಬಿಐ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದಿದ್ದ ಸಿಬಿಐ ಅಧಿಕಾರಿಗಳು ಇಂದು ಕನಕಪುರ, ರಾಮನಗರ, ಯಶವಂತಪುರ, ಬಸವನಗುಡಿ, ನೆಲಮಂಗಲ ಸೇರಿದಂತೆ ಹಲವು ಕಡೆ ದಾಳಿ ಮಾಡಿದ್ದಾರೆ.

ಸರ್ಕಾರಿ ಬ್ಯಾಂಕ್‍ನಲ್ಲಿ ನಡೆದಿದ್ದ 10 ಲಕ್ಷ ಹಣ ಬದಲಾವಣೆ ಕುರಿತು ದಾಳಿ ನಡೆಸಿರುವ ಸಿಬಿಐ, ಸರ್ಕಾರಿ ಬ್ಯಾಂಕ್ ನ ಇಬ್ಬರು ಮ್ಯಾನೇಜರ್ ಗಳ ಮನೆ ಹಾಗೂ ಕಚೇರಿ ಮೇಲೆ, ಕಾರ್ಪೊರೇಷನ್ ಬ್ಯಾಂಕ್ ಅಧಿಕಾರಿಗಳ ಮನೆ ಮೇಲೆ ಕೂಡ ದಾಳಿ ನಡೆಸಿದೆ. 11 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿಗೊಳಗಾಗಿರುವ ಎಲ್ಲರೂ ಡಿಕೆ ಸಹೋದರರ ಆಪ್ತರಾಗಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ ಸಂಸದ ಡಿಕೆ ಸುರೇಶ್ ಮತ್ತು ಡಿಕೆ ಶಿವಕುಮಾರ್ ಅವರು 11 ಮಂದಿ ಆಪ್ತರ ಮೇಲೆ ಸಿಬಿಐ, ಇಡಿ ಮತ್ತು ಐಟಿ ಮೂಲಕ ಕೇಸ್ ದಾಖಲಿಸಿ ಸರ್ಚ್ ವಾರೆಂಟ್ ಜಾರಿ ಮಾಡಲು ಸಿದ್ಧತೆ ನಡೆಸಿದ್ದಾರೆ. ನಿನ್ನೆಯೇ ಸರ್ಚ್ ವಾರೆಂಟ್ ಪಡೆದಿರುವ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದ್ದರು.

ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ದ್ವೇಷದ ರಾಜಕಾರಣ ಮಾಡುತ್ತಿದೆ. ನಾವು ಹೆದರುವುದಿಲ್ಲ ಎದುರಿಸಲು ಸಿದ್ಧರಿದ್ದೇವೆ. ಕಾನೂನು ಮೀರಿ ರಾಜಕಾರಣ ಮಾಡಿದವರಲ್ಲ ಅಕ್ರಮ ಮಾಡಿಲ್ಲ. ಸುಳ್ಳು ಕೇಸ್ ದಾಖಲಿಸಿ ಧ್ವನಿಯನ್ನು ಅಡಗಿಸುತ್ತೇವೆ ಅಂತ ಅಂದುಕೊಂಡಿದ್ದಲ್ಲಿ ಅದು ಬಿಜೆಪಿಯವರ ಭ್ರಮೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *