ಕರ್ನಾಟಕ ವಾದಕ್ಕೆ ಮನ್ನಣೆ – ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಏನಾಯ್ತು?

Public TV
2 Min Read

ನವದೆಹಲಿ: ಕಾವೇರಿ ಜಲನಯನ ಪ್ರದೇಶದಲ್ಲಿ ಉತ್ತಮ ಮಳೆಯಯಾಗಿ ಜಲಾಶಯದ ಒಳ ಹರಿವು ಹೆಚ್ಚಾದರೆ ಮಾತ್ರ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ಸೂಚಿಸಿದೆ.

ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಇಂದು ದೆಹಲಿಯಲ್ಲಿ ನಡೆದಿದ್ದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣವನ್ನು ಪರಿಗಣಿ ಕರ್ನಾಟಕದ ವಾದಕ್ಕೆ ಮನ್ನಣೆ ಸಿಕ್ಕಿದೆ.

ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಮಸೂದ್ ಹುಸೇನ್ ಅವರ ನೇತೃತ್ವದಲ್ಲಿ ಇಂದು ನವದೆಹಲಿಯಲ್ಲಿ ಸಭೆ ನಡೆಯಿತು. ಪ್ರಾಧಿಕಾರದ ಮುಂದೆ ಕಾವೇರಿ ನೀರು ನಿಯಂತ್ರಣ ಸಮಿತಿ ಅಧ್ಯಕ್ಷ ನವೀನ್ ಕುಮಾರ್ ಅವರು ಮಾನ್ಸೂನ್ ಮಳೆಯ ಜಲಾಶಯಗಳ ನೀರಿನ ಮಟ್ಟದ ಮಾಹಿತಿಯನ್ನು ವರದಿಯನ್ನು ಸಲ್ಲಿಸಿದ್ದರು.

ಈ ಅಂಶಗಳನ್ನು ಪರಿಗಣಿಸಿರುವ ಮಂಡಳಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾದರೆ ಮಾತ್ರ ನೀರು ಹರಿಸಲು ಸೂಚಿಸಿದೆ. ಈ ಸಭೆಯಲ್ಲಿ ಕರ್ನಾಟಕ, ತಮಿಳುನಾಡು ಸೇರಿದಂತೆ ಪುದುಚೇರಿ ಹಾಗೂ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಭಾಗಿಯಾಗಿದ್ದರು.

ಜೂನ್ ತಿಂಗಳಿನಲ್ಲಿ ಕರ್ನಾಟಕ 9.19 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಬೇಕಿತ್ತು. ಈಗಾಗಲೇ ಕೇವಲ 1.72 ಟಿಎಂಸಿ ನೀರನ್ನು ಬಿಡುಗಡೆ ಮಾಡಿತ್ತು. ಬಾಕಿ 7.47 ಟಿಎಂಸಿ ನೀರು ಬಿಡಲು ಕರ್ನಾಟಕಕ್ಕೆ ಸೂಚನೆ ನೀಡಲು ತಮಿಳುನಾಡು ಒತ್ತಾಯ ಮಾಡಿತ್ತು. ಅಲ್ಲದೇ ಜುಲೈ ತಿಂಗಳ ಕೋಟಾದಲ್ಲಿ 31 ಟಿಎಂಸಿ ನೀರು ಬಿಡಬೇಕಿದೆ.

ಸಭೆಯಲ್ಲಿ ತಮಿಳುನಾಡು ಜೂನ್ ತಿಂಗಳು ಮಾತ್ರವಲ್ಲದೇ ಜುಲೈ ತಿಂಗಳ ಅವಧಿಯಲ್ಲಿ ಬಿಡುಗಡೆ ಮಾಡಬೇಕಿದ್ದ ಪಾಲಿನ 31 ಟಿಎಂಸಿ ನೀರು ಹರಿಸುವಂತೆ ಒತ್ತಡ ಹಾಕಿತ್ತು. ತಮಿಳಯನಾಡಿನ ರೈತರು ಕಾವೇರಿ ನೀರು ನೆಚ್ಚಿಕೊಂಡಿದ್ದು, ಕುರುವೈ ಬೆಳೆಗಾಗಿ ರೈತರು ಮೆಟ್ಟೂರು ಜಲಾಶಯ ಅವಲಂಬಿಸಿದ್ದಾರೆ. ಆದರೆ ಮೆಟ್ಟೂರು ಡ್ಯಾಂನಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಜೂನ್ 30 ಒಳಗೆ ಸಂಪೂರ್ಣ ನೀರನ್ನು ಬಿಡುವಂತೆ ಸೂಚಿಸಿಲು ತಮಿಳುನಾಡು ಕೋರಿತ್ತು. ಇದರಂತೆ ಜೂನ್ ಹಾಗೂ ಜುಲೈ ತಿಂಗಳ ಅವಧಿಯಲ್ಲಿ ತಮಗೆ ಬಿಡುಗಡೆ ಮಾಡಬೇಕಿದ್ದ ಒಟ್ಟು 40 ಟಿಎಂಸಿ ನೀರನ್ನು ತಮಿಳುನಾಡು ಕೇಳಿತ್ತು.

ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಕಾವೇರಿ ಕೊಳ್ಳದಲ್ಲಿ ವಾಡಿಕೆಯಷ್ಟು ಮಳೆ ಆಗಿಲ್ಲ, ಮಳೆ ಆಗಿಲ್ಲದಿರುವುದರಿಂದ ಜಲಾಶಯಗಳಲ್ಲಿ ನೀರಿಲ್ಲ. ರಾಜ್ಯದಲ್ಲೇ ಬೆಳೆಗಳಿಗೆ ಮತ್ತು ಕುಡಿಯಲು ನೀರಿನ ಸಮಸ್ಯೆ ಎದುರಾಗಿದೆ. ನೀರಿನ ಸಂಗ್ರಹ ಕಡಿಮೆ ಇರುವುದರಿಂದ ಮುಂದೆ ಮಳೆ ಚೆನ್ನಾಗಿ ಬಂದರಷ್ಟೇ ನೀರು ಬಿಡಲಾಗುವುದು. ಒಂದೊಮ್ಮೆ ಮುಂಗಾರು ಮತ್ತಷ್ಟು ವಿಫಲವಾದರೆ ಕುಡಿಯುವ ನೀರಿಗೆ ಬೇಡಿಕೆ ಹೆಚ್ಚಾಗುವ ಅಂಶಗಳನ್ನು ತಿಳಿಸಿ ಕರ್ನಾಟಕ ಪ್ರತಿವಾದ ಮಂಡಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *