ಬೆಂಗಳೂರು: ಭಾರೀ ವಿವಾದಕ್ಕೆ ಕಾರಣವಾಗಿರುವ ಸರ್ಕಾರದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಇಂದಿನಿಂದ ಪ್ರಾರಂಭವಾಗಲಿದೆ. ಹಲವು ಸಮುದಾಯಗಳ ವಿರೋಧ, ಅಸಮಾಧಾನ, ಆಕ್ಷೇಪ, ಆತಂಕ, ಗೊಂದಲದ ನಡುವೆಯೇ ಜಾತಿ ಗಣತಿ (Caste Census) ಆರಂಭವಾಗಲಿದೆ.
ರಾಜ್ಯದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಾಡಿನ 7 ಕೋಟಿ ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇಂದಿನಿಂದ ಅಕ್ಟೋಬರ್ 7ರವರೆಗೆ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ 7 ಕೋಟಿ ಕನ್ನಡಿಗರಿಂದ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಲಿದ್ದಾರೆ. ಇಂದಿನಿಂದ ಆರಂಭವಾಗಲಿರುವ ಜಾತಿ ಗಣತಿಗೆ ಹಿಂದುಳಿದ ವರ್ಗಗಳ ಆಯೋಗ 1.75 ಲಕ್ಷ ಶಿಕ್ಷಕರನ್ನು ಬಳಸಿಕೊಳ್ಳಲಿದ್ದು, ಗಣತಿಗೆ ನಿಯೋಜಿತರಾಗಿರುವ ಶಿಕ್ಷಕರಿಗೆ ಗಣತಿ ಕಾರ್ಯವನ್ನು ಯಾವ ರೀತಿ ನಡೆಸಬೇಕು, ಯಾವೆಲ್ಲಾ ಮಾಹಿತಿಗಳನ್ನು ಸಂಗ್ರಹಿಸಬೇಕು ಎಂಬ ಬಗ್ಗೆ ಈಗಾಗಲೇ ತರಬೇತಿಯನ್ನು ನೀಡಿದೆ. ಇದನ್ನೂ ಓದಿ: ಬದಲಾವಣೆ ಬಯಸಿದ ಬಸವಣ್ಣನನ್ನೇ ಬಿಟ್ಟಿಲ್ಲ – ಉಚ್ಚಾಟನೆಗೆ ಜಯಮೃತ್ಯುಂಜಯ ಶ್ರೀ ಬೇಸರ
ಇಂದಿನಿಂದ ಮನೆ ಮನೆಗೆ ತೆರಳುವ ಗಣತಿದಾರರು ಹಿಂದುಳಿದ ವರ್ಗ ಈಗಾಗಲೇ ಸಿದ್ಧಪಡಿಸಿರುವ 60 ಪ್ರಶ್ನೆಗಳನ್ನು ಕೇಳಿ, ಆ ಮಾಹಿತಿಗಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಕ್ರಿಶ್ಚಿಯನ್ ಉಪಜಾತಿಗಳ ಹೆಸರನ್ನು ನಮೂದಿಸುವ ಕುರಿತು ಭುಗಿಲೆದ್ದಿದ್ದ ವಿರೋಧ ಹಿನ್ನೆಲೆ 33 ಜಾತಿಗಳನ್ನ ಸರ್ಕಾರದ ಸಲಹೆ ಮೇರೆಗೆ ಆಯೋಗ ಕೈ ಬಿಟ್ಟಿದೆ. ಕ್ರಿಶ್ಚಿಯನ್ ಉಪಜಾತಿಗಳ ವಿಚಾರಕ್ಕೆ ಬಿಜೆಪಿ ತೀವ್ರವಾಗಿ ವಿರೋಧ ವ್ಯಕ್ತಪಡಿಸಿತ್ತು. ಸಚಿವರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ ರಾಜ್ಯಪಾಲರು ಕೂಡ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಎಲ್ಲ ಕಾರಣದಿಂದ ಇದೀಗ ಗೊಂದಲಕ್ಕೆ ಕಾರಣವಾದ ಕ್ರಿಶ್ಚಿಯನ್ ಉಪಜಾತಿಗಳನ್ನ ಕೈಬಿಡಲಾಗಿದೆ. ಈ ಮೂಲಕ ಕ್ರಿಶ್ಚಿಯನ್ ಉಪ ಜಾತಿ ನಮೂದಿನ ಕುರಿತಂತೆ ಎದ್ದಿರುವ ವಿವಾದಕ್ಕೆ ಸರ್ಕಾರ ತೆರೆ ಎಳೆಯುವ ಪ್ರಯತ್ನ ಮಾಡಿದೆ. ಇದನ್ನೂ ಓದಿ: ಉಡುಪಿ ಕೃಷ್ಣ ಮಠಕ್ಕೆ ಸುಭದ್ರೆ ಕೊಡಲು ನಿರಾಕರಿಸಿದ ಹೊನ್ನಾಳಿ ಹಿರೇಕಲ್ಮಠ – ಸ್ಥಳದಲ್ಲಿ ಬಿಗುವಿನ ವಾತಾವರಣ
ಜನರಿಗೆ ಇಚ್ಚೆ ಇದ್ದರೆ ಪಟ್ಟಿಯಿಂದ ಕೈಬಿಟ್ಟಿರೋ ಧರ್ಮ ಮತ್ತು ಜಾತಿ ಹೆಸರು ಬರೆಸಬಹುದು ಎಂದು ಆಯೋಗ ಸ್ಪಷ್ಟಪಡಿಸಿದೆ. ಇನ್ನು ಬೆಂಗಳೂರಿನಲ್ಲಿ (Bengaluru) 2-3 ದಿನ ತಡವಾಗಿ ಸಮೀಕ್ಷೆ ಪ್ರಾರಂಭವಾಗಲಿದೆ. ಜಿಬಿಎ ಆಡಳಿತ ಬಂದ ಹಿನ್ನೆಲೆ ಮತ್ತು ತರಬೇತಿ ತಡವಾಗಿ ಆಗಿರುವುದರಿಂದ 2-3 ದಿನ ತಡವಾಗಿ ಬೆಂಗಳೂರಿನಲ್ಲಿ ಸಮೀಕ್ಷೆ ಪ್ರಾರಂಭ ಆಗಲಿದೆ. ಇದನ್ನೂ ಓದಿ: ಎತ್ತರದ ಬೆಟ್ಟದಲ್ಲಿ ನೀರು ನಿಲ್ಲೋದಿಲ್ಲ, ಹಾಗೆ ಎಲ್ಲಾ ಕಷ್ಟಗಳೂ ಜಾರಿ ಹೋಗುತ್ತವೆ: ವೀರೇಂದ್ರ ಹೆಗ್ಗಡೆ